ಮುಂಬೈ (ಏ.28): ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಸೋಮವಾರ ಮುಂಜಾನೆ ನಡೆದ ಭೀಕರ ಘಟನೆಯೊಂದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ನಯಾ ನಗರ ಪ್ರದೇಶದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಭದ್ರತಾ ಸಿಬ್ಬಂದಿಯನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಂಬೈನ ನಯಾ ನಗರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಕಾರ್ಯ ನಡೆಯುತ್ತಿರುವ ಕಟ್ಟಡವೊಂದರಲ್ಲಿ ಸೋಮವಾರ ಬೆಳಿಗ್ಗೆ ಸುಮಾರು 4 ಗಂಟೆಯ ಸುಮಾರಿಗೆ ಈ ಅಮಾನವೀಯ ಘಟನೆ ನಡೆದಿದೆ.
ಆರೋಪಿ ಯಾರು?
ಆರೋಪಿಯನ್ನು ಜೈಬ್ ಜುಬೇರ್ ಅನ್ಸಾರಿ (31) ಎಂದು ಗುರುತಿಸಲಾಗಿದೆ. ಈತ ಮುಂಬೈನ ಮೀರಾ ರೋಡ್ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಅಮೆರಿಕಾದಲ್ಲಿ ಹಲವು ವರ್ಷಗಳ ಕಾಲ ವಾಸವಿದ್ದ ಈತ, ಅಲ್ಲಿ ಕೆಲಸ ಸಿಗದ ಕಾರಣ ಭಾರತಕ್ಕೆ ಮರಳಿದ್ದನು. ಅನ್ಸಾರಿ ವೃತ್ತಿಯಲ್ಲಿ ಆನ್ಲೈನ್ ಕೆಮಿಸ್ಟ್ರಿ ತರಗತಿಗಳನ್ನು ನಡೆಸುತ್ತಿದ್ದನು ಎನ್ನಲಾಗಿದೆ.
ದಾಳಿಗೆ ಮುನ್ನ ಆರೋಪಿ ಅನ್ಸಾರಿ ಭದ್ರತಾ ಸಿಬ್ಬಂದಿಗಳಾದ ರಾಜಕುಮಾರ್ ಮಿಶ್ರಾ ಮತ್ತು ಸುಬ್ರತೋ ಸೇನ್ ಅವರ ಧರ್ಮವನ್ನು ಕೇಳಿದ್ದಾನೆ. ಅವರು ಹಿಂದೂಗಳೆಂದು ತಿಳಿದ ಬಳಿಕ, ಇಸ್ಲಾಂ ಧರ್ಮದ ಮೂಲ ತತ್ವವಾದ ‘ಕಲಿಮಾ’ ಪಠಿಸುವಂತೆ ಒತ್ತಾಯಿಸಿದ್ದಾನೆ. ಇಬ್ಬರೂ ಸಿಬ್ಬಂದಿಗಳು ಇದಕ್ಕೆ ನಿರಾಕರಿಸಿದಾಗ, ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ಅವರಿಬ್ಬರ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾನೆ.
ಈ ದಾಳಿಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ರಾಜಕುಮಾರ್ ಮಿಶ್ರಾ ಹೇಗೋ ಹತ್ತಿರದ ಆಸ್ಪತ್ರೆಗೆ ತಲುಪಿದ್ದಾರೆ. ಮತ್ತೊಬ್ಬ ಭದ್ರತಾ ಸಿಬ್ಬಂದಿ ಸುಬ್ರತೋ ಸೇನ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ, ಸ್ಥಳೀಯ ನಿವಾಸಿ ನಯಾಬ್ ಶೇಖ್ ಅವರನ್ನು ಗಮನಿಸಿ ತಕ್ಷಣವೇ ನೆರವಿಗೆ ಧಾವಿಸಿದರು. ಅವರು ಸೇನ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಆಸ್ಪತ್ರೆಗೆ ದಾಖಲಿದ್ದಾರೆ. ಸದ್ಯ, ಇಬ್ಬರಿಗೂ ವೋಕಾರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.
ಘಟನೆ ನಡೆದ ಕೇವಲ 90 ನಿಮಿಷಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿ ಅನ್ಸಾರಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಬಳಿಯಿದ್ದ ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಐಸಿಸ್ ಮತ್ತು ಜಿಹಾದ್ಗೆ ಸಂಬಂಧಿಸಿದ ಟಿಪ್ಪಣಿಗಳು ಪತ್ತೆಯಾಗಿವೆ.





