ಒಂದಲ್ಲ ಎರಡಲ್ಲ ಬರೋಬ್ಬರಿ 6 ಬಾರಿ ಚಿತ್ರರಂಗದಿಂದ ಬ್ಯಾನ್ ಆಗಿದ್ದ ಪ್ರಕಾಶ್ ರಾಜ್, ಇಂದಿಗೂ ಬುದ್ಧಿ ಕಲಿತಂತೆ ಕಾಣಿಸ್ತಿಲ್ಲ. ಯಾರನ್ನೋ ಟೀಕಿಸೋ ಭರದಲ್ಲಿ ಮಾಧ್ಯಮಗಳನ್ನ ಲೇವಡಿ ಮಾಡುತ್ತಾ, ಕರ್ನಾಟಕದಲ್ಲಿ ಕೂಡ ಬ್ಯಾನ್ ಬಿಸಿ ತಟ್ಟಿದೆ. ನಿಜಕ್ಕೂ ನಿಮಗಿದು ಬೇಕಿತ್ತಾ ಪ್ರಕಾಶ್ ರಾಜ್ ಸರ್ ಅಂತಿದ್ದಾರೆ ಜನ. ಹೋರಾಟ ಬೇರೆ, ಸಿದ್ಧಾಂತಗಳು ಬೇರೆ, ನಿಲುವುಗಳು ಬೇರೆ. ಆದ್ರೆ ಮನಸ್ಥಿತಿ ಕೊಂಚ ಬದಲಿಸಿಕೊಂಡ್ರೆ ನಟನೆಯಷ್ಟೇ ಅದ್ಭುತ ವ್ಯಕ್ತಿಯಾಗಿ ಹೊರಹೊಮ್ಮಬಹುದಲ್ಲವೇ..?
- ಪ್ರಕಾಶ್ ರಾಜ್ಗೆ ಬ್ಯಾನ್ ಭಯ.. ನಿಮಗಿದು ಬೇಕಿತ್ತಾ ಸರ್?!
- 6 ಬಾರಿ ತೆಲುಗಿನಲ್ಲಿ ಬ್ಯಾನ್.. ಈಗ ಮೀಡಿಯಾ ಜೊತೆ ಕಿರಿಕ್
- ಸಿದ್ಧಾಂತ, ನಿಲುವುಗಳು ಓಕೆ.. ನಾಲಿಗೆ ಮೇಲೆ ಹಿಡಿತವಿದ್ರೆ ಒಳಿತು
- ವಯಸ್ಸಾದಂತೆ ಪರಿಪಕ್ವವಾಗಿ ಮಾಗಬೇಕು ಪ್ರಕಾಶ್ ರಾಜ್ ಸರ್
ಪ್ರಕಾಶ್ ರಾಜ್.. ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ, ರಾಜಕಾರಣಿ ಹಾಗೂ ಸಾಮಾಜಿಕ ಹೋರಾಟಗಾರರೂ ಹೌದು. ರಂಗಭೂಮಿ ಹಿನ್ನೆಲೆ ಇರೋ ಪ್ರಕಾಶ್ ರಾಜ್, ಭಾರತೀಯ ಚಿತ್ರರಂಗದ ಅತ್ಯದ್ಭುತ ಕಲಾವಿದರಲ್ಲಿ ಒಬ್ಬರು. ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಇಂಗ್ಲಿಷ್ ಹೀಗೆ ಸಾಕಷ್ಟು ಚಿತ್ರರಂಗಗಳಲ್ಲಿ ಛಾಪು ಮೂಡಿಸಿರೋ ಇವರು ಐದು ನ್ಯಾಷನಲ್ ಅವಾರ್ಡ್ಸ್ ಪಡೆದುಕೊಂಡಿದ್ದಾರೆ. ಎಂಟು ಆಂಧ್ರ ಸರ್ಕಾರ ನೀಡೋ ನಂದಿ ಅವಾರ್ಡ್ಸ್ ಹಾಗೂ ತಮಿಳುನಾಡು ಸ್ಟೇಟ್ ಗೌರ್ನಮೆಂಟ್ ನೀಡೋ 8 ರಾಜ್ಯ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.
ಕನ್ನಡದಿಂದ ಹಿಡಿದು ಖಾನ್, ಕಪೂರ್ಗಳ ತನಕ ಪ್ರಕಾಶ್ ರಾಜ್ ಅಂದ್ರೆ ಅಚ್ಚುಮೆಚ್ಚು. ಆದ್ರೆ ಅವರ ಸಿದ್ಧಾಂತಗಳು, ನಿಲುವುಗಳು, ಧೋರಣೆಗಳು ಮಾತ್ರ ಚಿತ್ರ ವಿಚಿತ್ರ. ಸದಾ ತಾನೊಬ್ಬ ಹಿಂದೂ ವಿರೋಧಿ, ಹಿಂದುತ್ವ ವಿರೋಧಿ ಅಂತಲೇ ಗುರ್ತಿಸಿಕೊಳ್ತಾರೆ. ಸದ್ಯ ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮಾಸ್ಕ್ಮ್ಯಾನ್ ಚಿನ್ನಯ್ಯ ಪ್ರಕಾಶ್ ರಾಜ್ ಹೆಸರು ಬಾಯಿ ಬಿಟ್ಟಿದ್ದು, ಆ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಲು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ಕರೆದಿದ್ರು ಪ್ರಕಾಶ್ ರಾಜ್. ಆದ್ರೆ ಮಾರಿಕೊಂಡ ಮಾಧ್ಯಮಗಳಿಗೆ ವಿಶೇಷ ಆಹ್ವಾನ ಅನ್ನೋ ಅವ್ರ ಪೋಸ್ಟ್ ಮಾಧ್ಯಮ ಪ್ರತಿನಿಧಿಗಳ ಜೊತೆ ವಾಗ್ವಾದಕ್ಕೆ ಕಾರಣವಾಯ್ತು. ನಾನು ನಿಮ್ಮೆಲ್ಲರಿಗೂ ಹೇಳಿಲ್ಲ. ಮಾರಿಕೊಂಡಂತಹ ಕೆಲ ಮಾಧ್ಯಮಗಳಿಗಷ್ಟೇ ಹೇಳಿದ್ದು ಅಂತ ಪ್ಲೇಟ್ ಬದಲಿಸಿದ ಪ್ರಕಾಶ್ ರಾಜ್, ಸಮಸ್ಯೆಯನ್ನ ಸುಖಾಂತ್ಯಗೊಳಿಸಿದ್ರು. ಸುಮಾರು 2 ಗಂಟೆಗಳ ಕಾಲ ಮಾಧ್ಯಮದ ಪ್ರತಿನಿಧಿಗಳ ಜೊತೆ ಕಿರಿಕ್ ಮಾಡಿಕೊಂಡೇ ಸಮಯ ಕಳೆದಿದ್ದು ಒಳ್ಳೆಯ ಬೆಳವಣಿಗೆ ಅಲ್ಲವೇ ಅಲ್ಲ.
ಅಂದಹಾಗೆ ಪ್ರಕಾಶ್ ರಾಜ್ ಈ ಹಿಂದೆ ತೆಲುಗು ಚಿತ್ರರಂಗದಿಂದ ಒಂದಲ್ಲ ಎರಡಲ್ಲ ಸುಮಾರು 6 ಬಾರಿ ಬ್ಯಾನ್ ಆಗಿದ್ರು. ಅದಕ್ಕೆ ಅವರ ಅಶಿಸ್ತು, ಬೇಜಾವಾಬ್ದಾರಿತನ, ಮಾತು ತಪ್ಪುವಿಕೆ ಆಗಿತ್ತು. ಆದಾಗ್ಯೂ ಬುದ್ದಿ ಕಲಿತಿಲ್ಲ. ಅತಿಯಾದ ಮಾತು, ಅನಾವಶ್ಯಕ ವಿಷಯಗಳ ಕುರಿತು ಜಸ್ಟ್ ಆಸ್ಕಿಂಗ್ ಅನ್ನೋದು ಸಾಕಷ್ಟು ಮಂದಿಗೆ ಕಿರಿಕಿರಿ ತರಿಸಲಿದೆ. ತಮ್ಮ ಎಡಪಂಥೀಯ ಧೋರಣೆಗಳಿಂದ ಅತ್ಯದ್ಭುತ ನಟನಾ ಚಾತುರ್ಯಕ್ಕಿರೋ ವರ್ಚಸ್ಸು ಕೂಡ ಕುಗ್ಗಿ ಹೋಗ್ತಿರೋದು ಸುಳ್ಳಲ್ಲ.
ಇನ್ನೂ ಧರ್ಮಸ್ಥಳದಲ್ಲಿ ಸೌಜನ್ಯ ಕೊಲೆ ನಡೆದಿರೋದು ಸತ್ಯ ಎಂದ ಪ್ರಕಾಶ್ ರಾಜ್. ನಾನು ಆ ಹಿಂದೂ ಹೆಣ್ಣು ಮಗಳ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದೇನೆ. ನಾನು ಹಿಂದೂ ವಿರೋಧಿ ಅಲ್ಲ. ಸಾಕಷ್ಟು ಬಾರಿ ದೇವಾಲಯಗಳಿಗೆ ತೆರಳಿದ್ದೇನೆ. ನನ್ನ ಪತ್ನಿ ಕೂಡ ದೇವಸ್ಥಾನಕ್ಕೆ ಹೋಗ್ತಾರೆ. ತುಂಬಾ ಜನಕ್ಕೆ ದೇವಾಲಯಗಳಲ್ಲಿ ದರ್ಶನಕ್ಕೆ ಅನುಮತಿ ಕೂಡ ಕೊಡಿಸಿದ್ದೇನೆ ಎಂದಿದ್ದಾರೆ ಪ್ರಕಾಶ್ ರಾಜ್. ಅಷ್ಟೇ ಅಲ್ಲ, ನಾನು ಚಿನ್ನಯ್ಯ ಜೊತೆ ಮಾತಾಡಿದ್ದು ನಿಜ. ಅದರ ಆಡಿಯೋ ಕೂಡ ಎಸ್ಐಟಿ ಅಧಿಕಾರಿ ಪ್ರಣಬ್ ಮೊಹಂತಿ ಅವರಿಗೆ ನೀಡಿದ್ದೇನೆ ಅಂತ ಪ್ರಕರಣವನ್ನ ಎಸ್ಐಟಿ ಟೀಂ ಕಡೆಗೇ ತಿರುಗಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಪ್ರಕಾಶ್ ರಾಜ್.
ಒಟ್ಟಾರೆ ಸೌಜನ್ಯ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳುವ ನಿಮ್ಮ ಪರಿ ಒಳ್ಳೆಯದೇ.. ಆದ್ರೆ ಅತಿಯಾದ ಮಾತಿನಿಂದ ಸಮಸ್ಯೆಗಳು ಇತ್ಯರ್ಥ ಆಗಲ್ಲ ಅನ್ನೋದ್ರ ಅರಿವಿರಲಿ. ನಿಮ್ಮ ಬೆಳವಣಿಗೆಗೆ ನೀವೇ ಕಾರಣಕರ್ತರು. ಆ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾಲು ಕೂಡ ಇದೆ. ಹಾಗಾಗಿ ಮಾಧ್ಯಮಗಳನ್ನ ಟೀಕಿಸುವಾಗ ಎಚ್ಚರವಿರಲಿ ಸರ್. ಅದೇ ಕಾರಣದಿಂದ ದೊಡ್ಡವರು ಹೇಳಿರೋದು ಮಾತು ಆಡಿದ್ರೆ ಹೋಯ್ತು. ಮುತ್ತು ಒಡೆದರೆ ಹೋಯ್ತು. ವಯಸ್ಸಾದಂತೆ ವ್ಯಕ್ತಿ ಪರಿಪಕ್ವವಾಗಬೇಕು. ಮಾಗಬೇಕು. ಜನ ಮೆಚ್ಚುವಂತೆ ಭೇಷ್ ಅನಿಸಿಕೊಳ್ಳಬೇಕು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





