ಡೆಹ್ರಾಡೂನ್: ಹಿಮಾಲಯದ ತಪ್ಪಲಿನ ಪವಿತ್ರ ಕ್ಷೇತ್ರ ಕೇದಾರನಾಥದಲ್ಲಿ ಏಪ್ರಿಲ್ 22 ರಂದು ದೇವಾಲಯದ ಬಾಗಿಲು ತೆರೆಯುತ್ತಿದ್ದಂತೆ ಭಕ್ತರ ಪ್ರವಾಹವೇ ಹರಿದುಬಂದಿದೆ. ಮೊದಲ ದಿನವೇ ಸುಮಾರು 38,000 ಮಂದಿ ದರ್ಶನ ಪಡೆದು ದಾಖಲೆ ಬರೆದಿದ್ದಾರೆ. ಆದರೆ ಈ ಪುಣ್ಯ ಯಾತ್ರೆಯ ಆರಂಭದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವೊಂದು ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.
ಬ್ಯಾರಿಕೇಡ್ ಜಿಗಿದ ಭಕ್ತರ ಕಾದಾಟ
ವೆಲ್ಲು (Wellu) ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಭಕ್ತರು ಶಿಸ್ತನ್ನು ಕಡೆಗಣಿಸಿರುವುದು ಸ್ಪಷ್ಟವಾಗುತ್ತದೆ. ಸಾಲಿನಲ್ಲಿ ನಿಂತು ದರ್ಶನ ಪಡೆಯುವ ಬದಲು ಬ್ಯಾರಿಕೇಡ್ಗಳನ್ನು ಜಿಗಿದು, ಒಬ್ಬರನ್ನೊಬ್ಬರು ತಳ್ಳಿಕೊಂಡು, ನುಗ್ಗುತ್ತಿರುವ ದೃಶ್ಯಗಳು ಮನ ಕಲಕುವಂತಿವೆ.
Bhai inn jaise logon k toh hath pair Tod dene chaiye, ish desh ko bhaari penalty desh banayo tab sudhrege 🙂 pic.twitter.com/s4Y2d68Abf
— Wellu (@Wellutwt) April 23, 2026
ನೆಟ್ಟಿಗರ ಕೆಂಡಾಮಂಡಲ ಪ್ರತಿಕ್ರಿಯೆ
ವಿಡಿಯೋ ಕಂಡ ನೆಟ್ಟಿಗರು ನಾಗರಿಕ ಪ್ರಜ್ಞೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನೆತ್ತುತ್ತಿದ್ದಾರೆ. ಕೆಲವರು “ಶಾಂತಿ ಹುಡುಕಿಕೊಂಡು ಬರುವ ಪುಣ್ಯಕ್ಷೇತ್ರವನ್ನು ಟೂರಿಸ್ಟ್ ಸ್ಪಾಟ್ ಮಾಡಿಕೊಂಡಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು “ನೂರಾರು ಕಿಲೋಮೀಟರ್ ನಡೆದುಕೊಂಡು ಬರುವ ತಾಳ್ಮೆ ಇರುವವರಿಗೆ, ದರ್ಶನಕ್ಕಾಗಿ ಕೆಲವೇ ಮೀಟರ್ ಸಾಲಿನಲ್ಲಿ ನಿಲ್ಲಲು ಸಂಸ್ಕಾರವಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಚಾರ್ ಧಾಮ್ ಯಾತ್ರೆ ಆರಂಭ: ಬದರಿನಾಥ ದೇವಸ್ಥಾನದ ಬಾಗಿಲು ತೆರೆದು ಭಕ್ತರಿಗೆ ದರ್ಶನ
ಉತ್ತರಾಖಂಡ (ಏ.23): ಉತ್ತರಾಖಂಡ ರಾಜ್ಯದಲ್ಲಿ ಪ್ರತಿವರ್ಷ ನಡೆಯುವ ಪವಿತ್ರ ಚಾರ್ ಧಾಮ್ ಯಾತ್ರೆ ಈ ಬಾರಿ ಸಂಪೂರ್ಣವಾಗಿ ಆರಂಭಗೊಂಡಿದ್ದು, ಭಕ್ತರಲ್ಲಿ ಅಪಾರ ಉತ್ಸಾಹ ಮತ್ತು ಭಕ್ತಿ ಭಾವನೆ ಮೂಡಿಸಿದೆ. ಆರು ತಿಂಗಳ ಕಠಿಣ ಚಳಿಗಾಲದ ವಿರಾಮದ ನಂತರ ಬದರಿನಾಥ ದೇವಾಲಯವು ಗುರುವಾರ ಬೆಳಗ್ಗೆ ಭಕ್ತರ ದರ್ಶನಕ್ಕೆ ಬಾಗಿಲು ತೆರೆಯುವ ಮೂಲಕ ಯಾತ್ರೆಗೆ ಪೂರ್ಣ ಚಾಲನೆ ನೀಡಿದೆ.
ಬೆಳಿಗ್ಗೆ 6 ಗಂಟೆಗೆ ವೈದಿಕ ಮಂತ್ರಗಳ ಮಧ್ಯೆ ಉದ್ಘಾಟನೆ
ಬೆಳಿಗ್ಗೆ 6 ಗಂಟೆಗೆ ದೇವಾಲಯದ ಬಾಗಿಲು ತೆರೆಯಲು ಸಿದ್ಧತೆಗಳು ಆರಂಭವಾದವು. ನಿಖರವಾಗಿ 6:15 ಕ್ಕೆ ವೈದಿಕ ಮಂತ್ರಘೋಷಗಳು, ಶಂಖನಾದ, ಮತ್ತು ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳೊಂದಿಗೆ ಬದರಿನಾಥನ ಬಾಗಿಲುಗಳು ಮುಕ್ತವಾದವು. ಈ ಶುಭ ಸಂದರ್ಭದಲ್ಲಿ ನೆರವೇರಿದ ಪ್ರಥಮ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಸಲ್ಲಿಸಲಾಯಿತು. ದೇವಾಲಯದ ಮುಖ್ಯ ಅರ್ಚಕರು ವಿಧಿವತ್ತಾಗಿ ಪೂಜೆ ನೆರವೇರಿಸಿ, ರಾಷ್ಟ್ರದ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.
15,000 ಭಕ್ತರ ಸಮೂಹ, ರಾಜ್ಯಪಾಲರ ಉಪಸ್ಥಿತಿ
ದೇಶಾದ್ಯಂತ ಮಾತ್ರವಲ್ಲದೆ ನೇಪಾಳ, ಭೂತಾನ್ ಸೇರಿದಂತೆ ವಿದೇಶಗಳಿಂದಲೂ ಸುಮಾರು 15,000 ಕ್ಕೂ ಹೆಚ್ಚು ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಬದರಿನಾಥದಲ್ಲಿ ಸೇರಿದ್ದರು. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ರಾಜ್ಯಪಾಲರ ಪ್ರತಿನಿಧಿಗಳು ಸ್ಥಳದಲ್ಲಿದ್ದು, ಯಾತ್ರಾರ್ಥಿಗಳ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಭಕ್ತರಿಗೆ ಉಚಿತ ಪ್ರಸಾದ, ಕುಡಿಯುವ ನೀರು, ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ಪ್ರಕೃತಿಯ ನಡುವೆ ಹೂವಿನ ಅಲಂಕಾರ, ಸಾಂಸ್ಕೃತಿಕ ಸಂಭ್ರಮ
ನರ ಮತ್ತು ನಾರಾಯಣ ಪರ್ವತಗಳ ಸಾಲಿನ ಮಧ್ಯೆ ನೆಲೆಸಿರುವ ಬದರಿನಾಥ ದೇವಾಲಯವನ್ನು ಈ ಬಾರಿ ಸುಮಾರು 10 ಟನ್ ಸುಂದರ ಹೂವುಗಳಿಂದ ಅಲಂಕರಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ತಂದ ವಿಶೇಷ ಪ್ರಭೇದದ ಹೂವುಗಳಿಂದ ದೇವಾಲಯದ ಆವರಣದಲ್ಲಿ ಅಲಂಕರಿಸಲಾಗಿತ್ತು. ‘ಜೈ ಬದರಿ ವಿಶಾಲ್’ ಘೋಷಣೆಗಳು, ಸೇನಾ ಬ್ಯಾಂಡ್ನ ವಾದ್ಯಮೇಳ, ಮತ್ತು ಡ್ರಮ್ಗಳ ಸದ್ದಿನಿಂದ ದೇವಾಲಯದ ಕಂಗೋಳಿಸುತ್ತಿತ್ತು. ಮಾನಾ ಮತ್ತು ಬಾಮ್ಮಿ ಗ್ರಾಮದ ಸ್ಥಳೀಯ ಮಹಿಳೆಯರು ಸಾಂಪ್ರದಾಯಿಕ ‘ಜುಮೈಲೋ’ ನೃತ್ಯವನ್ನು ಪ್ರದರ್ಶಿಸಿ ಸಂಭ್ರಮವನ್ನು ಹೆಚ್ಚಿಸಿದರು.
ನಾಲ್ಕು ಧಾಮಗಳೂ ಮುಕ್ತ
ಬದರಿನಾಥ ದೇವಾಲಯದ ಬಾಗಿಲು ತೆರೆಯುತ್ತಿದ್ದಂತೆ ಉತ್ತರಾಖಂಡದ ನಾಲ್ಕು ಪ್ರಮುಖ ಪುಣ್ಯಕ್ಷೇತ್ರಗಳಾದ ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳು ಸಂಪೂರ್ಣ ಭಕ್ತರಿಗಾಗಿ ಮುಕ್ತವಾಗಿವೆ. ಅಕ್ಷಯ ತೃತೀಯ ಸಂದರ್ಭದಲ್ಲಿ (ಏಪ್ರಿಲ್ 19) ಗಂಗೋತ್ರಿ ಮತ್ತು ಯಮುನೋತ್ರಿ ಬಾಗಿಲು ತೆರೆದಿದ್ದವು. ಏಪ್ರಿಲ್ 22 ರಂದು ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಇಂದಿನೊಂದಿಗೆ ಎಲ್ಲಾ ನಾಲ್ಕು ಧಾಮಗಳ ದರ್ಶನ ಸಾಧ್ಯವಾಗಿದೆ.
ಆನ್ಲೈನ್ ನೋಂದಣಿ ಕಡ್ಡಾಯ – ಹೇಗೆ ಮಾಡಿಸಿಕೊಳ್ಳಬೇಕು?
ಚಾರ್ ಧಾಮ್ ಯಾತ್ರೆಗೆ ಹೊರಡುವ ಭಕ್ತರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಮಾರ್ಚ್ 6 ರಂದು ಬೆಳಿಗ್ಗೆ 7 ಗಂಟೆಯಿಂದಲೇ ಆನ್ಲೈನ್ ನೋಂದಣಿ ಪ್ರಾರಂಭವಾಗಿತ್ತು. ಯಾತ್ರಿಕರು ಅಧಿಕೃತ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಮೂಲಕ ಸುಲಭವಾಗಿ ನೋಂದಾಯಿಸಿಕೊಳ್ಳಬಹುದು. ಆಫ್ಲೈನ್ ನೋಂದಣಿಗಾಗಿ ಋಷಿಕೇಶ, ಹರಿದ್ವಾರ ಮತ್ತು ಡೆಹ್ರಾಡೂನ್ನಲ್ಲಿ ವಿಶೇಷ ಕೌಂಟರ್ಗಳನ್ನು ಸ್ಥಾಪಿಸಲಾಗಿದೆ. ಅಕ್ಟೋಬರ್ ಅಂತ್ಯದವರೆಗೆ ಯಾತ್ರೆ ಮುಂದುವರಿಯಲಿದೆ.
ಯಾತ್ರಾರ್ಥಿಗಳಿಗೆ ಸಲಹೆ
ಉತ್ತರಾಖಂಡ ಸರ್ಕಾರವು ಎಲ್ಲಾ ಯಾತ್ರಾರ್ಥಿಗಳು ಬೆಚ್ಚಗಿನ ಬಟ್ಟೆಗಳನ್ನು ತರಲು, ಆಕ್ಸಿಜನ್ ಮತ್ತು ಔಷಧಿಗಳ ಕಿಟ್ಗಳನ್ನು ಇಟ್ಟುಕೊಳ್ಳಲು ಸೂಚಿಸಿದೆ. ಯಾತ್ರೆಯ ಕೊನೆಯ ದಿನಾಂಕಗಳಲ್ಲಿ ಟಿಎಂಎಸ್ (TMS) ವ್ಯವಸ್ಥೆಯ ಮೂಲಕ ದೈನಂದಿನ ಸಂಖ್ಯೆಯ ಮಿತಿಯನ್ನು ಅನುಸರಿಸಲಾಗುವುದು.





