ವಯನಾಡ್: ವಯನಾಡ್ ಜಿಲ್ಲೆಯ ಮೆಪ್ಪಾಡಿ ಸಮೀಪ ನಡೆದ ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಭೂಕುಸಿತ ಕೇವಲ ಭಾರೀ ಮಳೆಯಿಂದ ಉಂಟಾದ ನೈಸರ್ಗಿಕ ದುರಂತವಲ್ಲ, ಮಾನವ ನಿರ್ಲಕ್ಷ್ಯದಿಂದ ಸಂಭವಿಸಿದ “ಮಾನವ ನಿರ್ಮಿತ ದುರಂತ” ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಹೇಳಿದ್ದಾರೆ.
ಸುರಂಗ ರಸ್ತೆ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ಮಣ್ಣು ತೆರವುಗೊಳಿಸುವಂತೆ ಜೂನ್ 20ರಂದೇ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿತ್ತು. ಆದರೆ ಆ ಆದೇಶವನ್ನು ಪಾಲಿಸದ ಪರಿಣಾಮವೇ ಈ ದುರಂತ ಸಂಭವಿಸಿದೆ ಎಂದು ಅವರು ಆರೋಪಿಸಿದ್ದಾರೆ.
ದುರಂತದ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ವಿಪತ್ತು ಸಂಭವಿಸಿದ ತಕ್ಷಣವೇ ಮೆಪ್ಪಾಡಿ, ಮೀನಂಗಡಿ ಹಾಗೂ ಕೋಝಿಕ್ಕೋಡ್ನಿಂದ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಸುರಂಗ ರಸ್ತೆ ನಿರ್ಮಾಣ ಪ್ರದೇಶದ ಸಮೀಪ ಸಂಭವಿಸಿದ ಭೂಕುಸಿತದಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ. ಲಭ್ಯವಿರುವ ಮಾಹಿತಿಯಂತೆ ಒಬ್ಬರು ಮೃತಪಟ್ಟಿದ್ದು, ಏಳು ಮಂದಿ ಕಾಣೆಯಾಗಿದ್ದಾರೆ. ಇದೇ ವೇಳೆ ಏಳು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸತೀಶನ್ ಅವರ ಪ್ರಕಾರ, ಸುರಂಗ ರಸ್ತೆ ಯೋಜನೆಯ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ಅಗೆದು ತೆಗೆದ ಮಣ್ಣನ್ನು ತಕ್ಷಣ ತೆರವುಗೊಳಿಸುವಂತೆ ಜೂನ್ 20ರಂದೇ ಗುತ್ತಿಗೆದಾರರಿಗೆ ಜಿಲ್ಲಾಡಳಿತ ಹಾಗೂ ವಿಪತ್ತು ನಿರ್ವಹಣಾ ಇಲಾಖೆ ಸೂಚಿಸಿತ್ತು ಎಂದಿದ್ದಾರೆ. ಲೋಕೋಪಯೋಗಿ ಇಲಾಖೆ ಸಚಿವರೂ ಕೂಡ ಈ ಕುರಿತು ಎಚ್ಚರಿಕೆ ನೀಡಿದ್ದರು. ಆದರೆ ಗುತ್ತಿಗೆದಾರರು ಈ ಆದೇಶವನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಅದರ ಪರಿಣಾಮವಾಗಿ ಮಳೆಯ ಒತ್ತಡ ಹೆಚ್ಚಾದಾಗ ಮಣ್ಣಿನ ರಾಶಿ ಜಾರಿಬಿದ್ದು ಭೂಕುಸಿತ ಉಂಟಾಗಿದೆ ಎಂದು ಹೇಳಿದ್ದಾರೆ.
ವಯನಾಡ್ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದೆ. ಸರ್ಕಾರದ ಮಾಹಿತಿಯ ಪ್ರಕಾರ ಈ ಪ್ರದೇಶದಲ್ಲಿ ಇದುವರೆಗೆ ಸುಮಾರು 225 ಸೆಂಟಿಮೀಟರ್ ಮಳೆ ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲೇ 265 ಮಿಲಿಮೀಟರ್ ಮಳೆ ಸುರಿದಿದೆ. ಭಾರೀ ಮಳೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆಯನ್ನು ವೇಗವಾಗಿ ಮುಂದುವರಿಸಲು ಎಂಟು ಎಕ್ಸ್ಕವೇಟರ್ಗಳನ್ನು ಬಳಸಲಾಗುತ್ತಿದೆ. ಕಾಣೆಯಾದವರ ಪತ್ತೆ ಹಾಗೂ ಅವಶೇಷಗಳ ತೆರವು ಕಾರ್ಯ ನಿರಂತರವಾಗಿ ಸಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳದ ಕಂದಾಯ ಸಚಿವ ಟಿ. ಸಿದ್ದೀಕ್ ಕೂಡ ಈ ಘಟನೆ ನೈಸರ್ಗಿಕ ಭೂಕುಸಿತವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುರಂಗ ಯೋಜನೆಯ ಕಾಮಗಾರಿ ವೇಳೆ ಅಗೆದು ತೆಗೆಯಲಾದ ಮಣ್ಣನ್ನು ರಾಶಿಯಾಗಿ ಹಾಕಲಾಗಿತ್ತು. ಭಾರೀ ಮಳೆಯ ಪರಿಣಾಮ ಆ ಮಣ್ಣಿನ ರಾಶಿ ಕುಸಿದು ದುರಂತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯಲ್ಲಿ ಕಿರಣ್ ಕುಮಾರ್, ದಿಲೀಪ್, ಸೂರಜ್ ಯಾದವ್, ಸಂಜಯ್ ಠಾಕೂರ್, ರಜನೀಶ್ ಹಾಗೂ ತನ್ಮಯ್ ಘೋಷ್ ಸೇರಿದಂತೆ ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ಪ್ರಕಾರ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.





