ಕೇರಳದ ವಯನಾಡಿನ ಮೆಪ್ಪಾಡಿ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕುಸಿತ ದುರಂತ ಭಾರೀ ಆತಂಕಕ್ಕೆ ಕಾರಣವಾಗಿದೆ. ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದು, ಇನ್ನೂ ಸುಮಾರು 30 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇವರಲ್ಲಿ 18 ಮಂದಿ ಭೂಗತದಲ್ಲೇ ಸಿಲುಕಿರುವ ಸಾಧ್ಯತೆ ವ್ಯಕ್ತವಾಗಿದೆ. ಭೂಕುಸಿತದ ಬೆನ್ನಲ್ಲೇ ರಾಜ್ಯ ಸರ್ಕಾರ ತುರ್ತು ಕ್ರಮಕ್ಕೆ ಮುಂದಾಗಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆಗೆ ಆದೇಶ ನೀಡಲಾಗಿದೆ.
ಮೆಪ್ಪಾಡಿಯ ಮೀನಾಕ್ಷಿ ಸೇತುವೆ ಸಮೀಪ, ವಯನಾಡ್ ಟನಲ್ ಯೋಜನೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಈ ಭಾಗದಲ್ಲಿ 265 ಮಿಮೀ ಮಳೆಯಾಗಿರುವುದರಿಂದ ಸುರಂಗ ರಸ್ತೆಗೆ ನಿರ್ಮಿಸಲಾಗಿದ್ದ ಕಾಂಕ್ರೀಟ್ ತಡೆಗೋಡೆ ಕುಸಿದು, ಅದರ ಜೊತೆಗೆ ಭಾರೀ ಪ್ರಮಾಣದ ಮಣ್ಣು ಜಾರಿಬಿದ್ದಿದೆ. ಈ ಪರಿಣಾಮ ಕಾಮಗಾರಿ ಪ್ರದೇಶವೇ ಮಣ್ಣಿನಡಿ ಹೂಣಾಗಿದೆ.
ಭಾರೀ ಮಳೆಯ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ನಿನ್ನೆಂದೇ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಆದರೆ ಭೂಕುಸಿತ ಸಂಭವಿಸಿದ ಕ್ಷಣದಲ್ಲಿ ಸ್ಥಳದ ಸಮೀಪದಲ್ಲಿ ಕೆಲ ಕಾರ್ಮಿಕರು ಹಾಗೂ ಸಾರ್ವಜನಿಕರು ಇದ್ದ ಕಾರಣ, ಅವರು ಅವಘಡಕ್ಕೆ ಸಿಲುಕಿದ್ದಾರೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಸ್ಥಳದಲ್ಲಿದ್ದ ಇಬ್ಬರು ಕಾರ್ಮಿಕರು ತಕ್ಷಣವೇ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದು, ಉಳಿದವರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಘಟನೆಯ ಗಂಭೀರತೆಯನ್ನು ಮನಗಂಡು ಮುಖ್ಯಮಂತ್ರಿ ವಿ.ಡಿ. ಸತೀಶನ್ ತುರ್ತು ಸಭೆ ನಡೆಸಿದ್ದಾರೆ. ಕೃಷಿ ಸಚಿವ ಟಿ. ಸಿದ್ದಿಕ್ ಹಾಗೂ ಕಂದಾಯ ಸಚಿವ ಎ.ಪಿ. ಅನಿಲ್ಕುಮಾರ್ ಅವರೊಂದಿಗೆ ಪರಿಸ್ಥಿತಿಯ ಪರಿಶೀಲನೆ ನಡೆಸಿದ ಅವರು, ತಕ್ಷಣವೇ ವಯನಾಡಿಗೆ ತೆರಳಿ ರಕ್ಷಣಾ ಕಾರ್ಯಗಳನ್ನು ಸಮನ್ವಯಗೊಳಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಮೀನಂಗಡಿಯ ಎನ್ಡಿಆರ್ಎಫ್ ಘಟಕದೊಂದಿಗೆ ಕೋಝಿಕ್ಕೋಡ್ನಿಂದಲೂ ರಕ್ಷಣಾ ತಂಡಗಳನ್ನು ಕಳುಹಿಸುವಂತೆ ಆದೇಶಿಸಲಾಗಿದೆ.
ಭೂಕುಸಿತದ ಬಳಿಕವೂ ಪ್ರದೇಶದಲ್ಲಿ ಮಣ್ಣು ಜಾರುವ ಪ್ರಕ್ರಿಯೆ ಮುಂದುವರಿದಿರುವುದರಿಂದ ರಕ್ಷಣಾ ಕಾರ್ಯಾಚರಣೆ ಬಹಳ ಸವಾಲಿನದ್ದಾಗಿದೆ. ಸ್ಥಳೀಯ ವಾರ್ಡ್ ಸದಸ್ಯ ಜಿತಿನ್ ಮೆಪ್ಪಾಡಿ ಮಾತನಾಡಿ, “ಅನೇಕರು ಇನ್ನೂ ನೆಲದಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ಇದೆ. ಆದರೆ ಮಣ್ಣು ಇನ್ನೂ ಕುಸಿಯುತ್ತಿರುವುದರಿಂದ ರಕ್ಷಣಾ ಸಿಬ್ಬಂದಿಗೆ ಕಾರ್ಯಾಚರಣೆ ಕಷ್ಟಕರವಾಗಿದೆ” ಎಂದು ತಿಳಿಸಿದ್ದಾರೆ.
ಭಾರೀ ಮಳೆ, ದುರ್ಬಲ ಭೂಸಂರಚನೆ ಮತ್ತು ನಿರ್ಮಾಣ ಕಾಮಗಾರಿ ಪ್ರದೇಶದಲ್ಲಿನ ಅಪಾಯಕಾರಕ ಪರಿಸ್ಥಿತಿ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರ ಪತ್ತೆಗಾಗಿ ಭಾರೀ ಪ್ರಮಾಣದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ವಯನಾಡಿನ ಈ ದುರಂತ ರಾಜ್ಯದಾದ್ಯಂತ ಆತಂಕ ಮೂಡಿಸಿದ್ದು, ಮುಂದಿನ ಕೆಲವು ದಿನಗಳು ಮಳೆ ಮುಂದುವರಿಯುವ ಮುನ್ಸೂಚನೆಯ ನಡುವೆಯೇ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.





