ಮುಂಬೈ (ಜುಲೈ 27 ): ನೀಟ್ ಪರೀಕ್ಷೆ ಸುತ್ತಲಿನ ವಿವಾದಗಳ ನಡುವೆಯೇ ಮಹಾರಾಷ್ಟ್ರದಲ್ಲಿ ಮನಕಲಕುವ ಘಟನೆ ನಡೆದಿದೆ .ವೈದ್ಯೆಯಾಗುವ ಕನಸು ನನಸಾಗದ ನೋವಿನಿಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಅಹಿಲ್ಯಾನಗರ ಜಿಲ್ಲೆಯವರಾದ ಅಂಕಿತಾ ಸಂಗ್ಲೆ ಎಂಬ ವಿದ್ಯಾರ್ಥಿನಿ ಈ ದುರ್ಘಟನೆಗೆ ಬಲಿಯಾಗಿದ್ದಾಳೆ. ಆಷಾಢ ಏಕಾದಶಿ ಹಿನ್ನೆಲೆಯಲ್ಲಿ ಆಕೆಯ ತಂದೆ-ತಾಯಿ ಹಾಗೂ ಸಹೋದರ ಪಂಡರ್ಪುರಕ್ಕೆ ತೆರಳಿದ್ದರು. ಈ ವೇಳೆ ಅಂಕಿತಾ ಮನೆಯಲ್ಲಿ ಒಬ್ಬಳೇ ಇದ್ದಳು. ಸಂಜೆ ಸಂಬಂಧಿಕರು ಮನೆಗೆ ಬಂದಾಗ ಆಕೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಕರ್ಣತ್ ಪೊಲೀಸರು ಪರಿಶೀಲನೆ ನಡೆಸಿದ ವೇಳೆ, ಅಂಕಿತಾ ಬರೆದಿಟ್ಟ ಪತ್ರ ಪತ್ತೆಯಾಗಿದೆ. ಅದರಲ್ಲಿ, ನೀಟ್ ಮರುಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳನ್ನು ಗಳಿಸಲು ಸಾಧ್ಯವಾಗಲಿಲ್ಲ ಹಾಗೂ ವೈದ್ಯೆಯಾಗುವ ಕನಸು ನನಸಾಗದಿರುವುದು ತನಗೆ ತೀವ್ರ ಬೇಸರ ತಂದಿದೆ ಎಂದು ಉಲ್ಲೇಖಿಸಲಾಗಿದೆ. ತನ್ನ ತಂದೆ-ತಾಯಿಯ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಲು ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿರುವ ಆಕೆ, ಕುಟುಂಬದವರ ಕ್ಷಮೆಯನ್ನೂ ಕೋರಿದ್ದಾಳೆ. ತನ್ನ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಬಾರದು ಎಂದು ಸಹ ಪತ್ರದಲ್ಲಿ ಮನವಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಂಕಿತಾಗೆ ನೀಟ್ ಮರುಪರೀಕ್ಷೆಯಲ್ಲಿ 166 ಅಂಕಗಳು ಬಂದಿದ್ದು, ಪ್ರವೇಶಕ್ಕೆ ಅಗತ್ಯವಾಗಿದ್ದ ಕಟ್ಆಫ್ 177 ಅಂಕಗಳಾಗಿತ್ತು. ಕೇವಲ 11 ಅಂಕಗಳ ಅಂತರದಿಂದ ಅವಕಾಶ ತಪ್ಪಿರುವುದು ಆಕೆಗೆ ಮಾನಸಿಕವಾಗಿ ದೊಡ್ಡ ಆಘಾತ ಉಂಟುಮಾಡಿತ್ತು ಎನ್ನಲಾಗಿದೆ.
ಪ್ರಕರಣವನ್ನು ಅಸಹಜ ಸಾವು ಎಂದು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಮಹಾರಾಷ್ಟ್ರದಾದ್ಯಂತ ದುಃಖದ ವಾತಾವರಣ ಸೃಷ್ಟಿಸಿದ್ದು, ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ಸಂತಾಪ ಸೂಚಿಸಿದ್ದಾರೆ..





