ಕೋಲಾರ, ಆಗಸ್ಟ್ 12: ಭೀಮನ ಅಮಾವಾಸ್ಯೆಯಂದು ಪತಿಯ ಪಾದ ಪೂಜೆ ಮಾಡಿ ಆಯುಷ್ಯ ವೃದ್ಧಿಗೆ ಪ್ರಾರ್ಥಿಸುವ ಬದಲು, ಪತ್ನಿಯೊಬ್ಬಳು ತನ್ನ ಗಂಡನನ್ನೇ ಇಹಲೋಕಕ್ಕೆ ಕಳುಹಿಸಿದ ಭೀಕರ ಘಟನೆ ಕೋಲಾರ ಜಿಲ್ಲೆಯ ಚೆನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ಜಮೀನು ಮಾರಾಟದ ಹಣದ ವಿವಾದವೇ ಈ ಘೋರ ಕೃತ್ಯಕ್ಕೆ ಕಾರಣವಾಗಿದೆ. ಕೃತ್ಯದ ಬಳಿಕ ಆರೋಪಿ ಪತ್ನಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
ನಾರಾಯಣಸ್ವಾಮಿ (68) ಮೃತ ದುರ್ದೈವಿ, ಕೊಲೆ ಆರೋಪ ಎದುರಿಸುತ್ತಿರುವ ಪತ್ನಿ ಜಗದಾಂಭ (58) ಎಂದು ಗುರುತಿಸಿಲಾಗಿದೆ.
ನಾರಾಯಣಸ್ವಾಮಿ ಮತ್ತು ಜಗದಾಂಭ ದಂಪತಿ ನಡುವೆ ಕೆಲಕಾಲದಿಂದ ಅಸಮಾಧಾನವಿತ್ತು. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಆದರೆ ಕಳೆದ ಎರಡು-ಮೂರು ದಿನಗಳಿಂದ ಜಗದಾಂಭ ಅವರು ಹಣದ ವಿಚಾರವಾಗಿ ಪತಿಯನ್ನು ಮನವೊಲಿಸಿ ತೋಟದ ಮನೆಗೆ ಕರೆತಂದಿದ್ದರು ಎಂದು ಆರೋಪಿಸಲಾಗಿದೆ.
ಭೀಮನ ಅಮಾವಾಸ್ಯೆಯ ರಾತ್ರಿ ತೋಟದ ಮನೆಯಲ್ಲಿ ಪತಿಗೆ ಊಟ ನೀಡಿದ ಬಳಿಕ ಘಟನೆ ನಡೆದಿದೆ ಎನ್ನಲಾಗಿದೆ. ಪತಿ ನಿದ್ರೆಗೆ ಜಾರಿದ ನಂತರ ಜಗದಾಂಭ ಅವರ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಘಟನೆ ಬಗ್ಗೆ ಯಾರಿಗೂ ತಿಳಿಸದೆ ತಪ್ಪಿಸಿಕೊಳ್ಳುವ ಬದಲು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾರೆ.
ಪೊಲೀಸರು ವಿಚಾರಣೆ ನಡೆಸಿದ ವೇಳೆ ಕೊಲೆಗೆ ಕಾರಣವೇನು ಎಂಬುದರ ಕುರಿತು ಆರೋಪಿ ಪತ್ನಿ ಹೇಳಿಕೆ ನೀಡಿದ್ದಾಳೆ. ನಾರಾಯಣಸ್ವಾಮಿ ಜಮೀನು ಮಾರಾಟ ಮಾಡಿದ್ದರೂ ಅದರ ಹಣವನ್ನು ತನ್ನ ಕೈಗೆ ನೀಡಿಲ್ಲ ಎಂಬ ಅಸಮಾಧಾನವಿತ್ತು ಎಂದು ಆಕೆ ತಿಳಿಸಿದ್ದಾಳೆ. ಅಲ್ಲದೆ, ಉಳಿದಿರುವ ಜಮೀನನ್ನೂ ಮಾರಾಟ ಮಾಡಬಹುದು ಎಂಬ ಆತಂಕದಿಂದ ಈ ಕೃತ್ಯ ಎಸಗಿದ್ದಾಗಿ ವಿಚಾರಣೆಯಲ್ಲಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜಗದಾಂಭ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.





