ಕನ್ನಡ ಚಿತ್ರರಂಗದ ಸೂಪರ್ಸ್ಟಾರ್ ಕಿಚ್ಚ ಸುದೀಪ್ ಅವರ ಹೊಸ ಚಿತ್ರ ‘ಮಾರ್ಕ್’ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಸುದೀಪ್ ಅವರು ನೀಡಿದ ಹೇಳಿಕೆಗಳು ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದವು. ಆದರೆ ಈ ವಿವಾದಕ್ಕೆ ಇದೀಗ ಬೆಂಗಳೂರಿನಲ್ಲಿ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಪೈರಸಿ ವಿಚಾರ, ಫ್ಯಾನ್ಸ್ ವಾರ್, ಹಾಗೂ ಕೆಲವು ವ್ಯಕ್ತಿಗಳಿಂದ ಬಂದ ಪ್ರತಿಕ್ರಿಯೆಗಳ ಕುರಿತು ಕಿಚ್ಚ ತಮ್ಮ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.
ಹುಬ್ಬಳಿಯಲ್ಲಿ ಹೇಳಿದ ಹೇಳಿಕೆ ಕುರಿತು ಮಾತನಾಡಿದ ಕಿಚ್ಚ ಸುದೀಪ್, “ನಾವು ತುಂಬಾ ಸ್ಟ್ರಾಂಗ್ ಆಗಿ ಬರ್ತಿದ್ದೀವಿ. ಜಿದ್ದಾಜಿದ್ದಿಗೆ ಏನೂ ಮಾಡ್ತಿಲ್ಲ. ನನ್ನ ಸಿನಿಮಾನ ನಾನು ಕಾಪಾಡಿಕೊಳ್ಳಬೇಕು ಅನ್ನೋ ಒಂದೇ ಉದ್ದೇಶ ಇದೆ” ಎಂದು ಸುದೀಪ್ ಹೇಳಿದ್ದಾರೆ. ಪೈರಸಿ ವಿಚಾರದಲ್ಲಿ ಯಾವುದೇ ರೀತಿಯ ಸಾಫ್ಟ್ ನಿಲುವಿಲ್ಲ ಎನ್ನುವುದನ್ನು ಅವರು ಸ್ಪಷ್ಟಪಡಿಸಿದ್ದು, “ಪೈರಸಿ ಮಾಡೋರನ್ನ ಕರುಣೆ ಇಲ್ಲದೆ ಒಳಗೆ ಹಾಕಿಸ್ತೀನಿ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಾವು ಯಾರನ್ನೂ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿಲ್ಲ, “ಯಾರಿಗೋ ವಾರ್ನ್ ಮಾಡಬೇಕಾದರೆ ಚೆಸ್ ಆಡೋವಾಗ ಕದ್ದು ಮುಚ್ಚಿ ಚೆಕ್ ಅನ್ನಲ್ಲ, ಹೇಳಿಯೇ ಹೊಡಿಬೇಕು. ಇಲ್ಲೂ ನಾನು ಚೆಕ್ ಅಂತ ಹೇಳಿದ್ದೀನಿ” ಎಂದು ಉದಾಹರಣೆ ಕೊಟ್ಟು ತಮ್ಮ ಮಾತಿನ ಅರ್ಥವನ್ನು ವಿವರಿಸಿದರು. ಪೈರಸಿ ಅನ್ನೋ ಪದ ಬಳಸದೇ ಇದ್ದರೂ, ಸಂದೇಶ ಯಾರಿಗೆ ಹೋಗಬೇಕೋ ಅವರಿಗೆ ಸ್ಪಷ್ಟವಾಗಿ ತಲುಪುತ್ತದೆ ಎಂದು ಅವರು ಮಾತನಾಡಿದರು.
“ಈ ರೂಂನಲ್ಲಿ ಕೆಟ್ಟ ವಾಸನೆ ಬಂದ್ರೆ, ಯಾರು ಹೂಸು ಬಿಟ್ಟಿದ್ದಾರೆ ಅಂತ ಗೊತ್ತಾಗುತ್ತೆ. ಹಾಗೆ ಇದು” ಎನ್ನುವ ಮೂಲಕ ತಮ್ಮ ಹೇಳಿಕೆಯನ್ನು ಸುದೀಪ್ ಅವರು ಸಮರ್ಥಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಷಯ ಏಕೆ ಇವತ್ತು ಬೆಳಗ್ಗೆ ವೈರಲ್ ಆಯ್ತು ಎಂಬುದಕ್ಕೂ ಅವರು ಪ್ರಶ್ನೆ ಮಾಡಿದ್ದಾರೆ.
ವಿಜಯಲಕ್ಷ್ಮಿ ಅವರು ತಮ್ಮ ಬಳಿ ನೇರವಾಗಿ ಮಾತನಾಡಿದ್ದರೆ ಖಂಡಿತ ಉತ್ತರ ಕೊಡುತ್ತಿದ್ದೆ ಎಂದು ಸುದೀಪ್ ಹೇಳಿದ್ದಾರೆ. “ಅವರಿಗೆ ಏನು ನೋವು ಇದೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಫ್ಯಾನ್ಸ್ ವಾರ್ ಶುರು ಆದ್ರೆ, ಅದೇ ದಿನ ನನ್ನನ್ನೇ ಪ್ರಶ್ನೆ ಮಾಡಬೇಕಿತ್ತು” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರತಿಕ್ರಿಯೆ ಮತ್ತೊಂದು ಕಡೆಯಿಂದ ಬಂದಿದ್ದರಿಂದ ವಿಷಯ ಇಷ್ಟು ದೊಡ್ಡದಾಗಿದೆ ಎಂದು ಕಿಚ್ಚ ಅಭಿಪ್ರಾಯಪಟ್ಟಿದ್ದಾರೆ.
ಶಿವರಾಜ್ಕುಮಾರ್ ಕುರಿತು ಮಾತನಾಡುತ್ತಾ, “ಶಿವಣ್ಣ ನಮ್ಮ ಆಸ್ತಿ. 45 ಸಿನಿಮಾ ವಿಚಾರದಲ್ಲಿ ನಾನು ಶಿವಣ್ಣನ ಪರವಾಗಿ ಮಾತಾಡಿದ್ದೀನಿ” ಎಂದಿದ್ದಾರೆ. ಅದೇ ವೇಳೆ, ಗಣೇಶ್, ಧ್ರುವ ಸರ್ಜಾ, ಯಶ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಸ್ಟಾರ್ಸ್ ಇದ್ದರೂ, ಯಾಕೆ ಯಾರೂ ಆ ವಿಚಾರಕ್ಕೆ ಪ್ರತಿಕ್ರಿಯಿಸಿಲ್ಲ ಎಂಬ ಪ್ರಶ್ನೆಯನ್ನೂ ಸುದೀಪ್ ಮುಂದಿಟ್ಟಿದ್ದಾರೆ.
ಕನ್ನಡ ಭಾಷೆ ಕುರಿತ ಕಮಲ್ ಹಾಸನ್ ವಿವಾದದ ವೇಳೆ ಮಾತನಾಡುವ ಅವಶ್ಯಕತೆ ಇಲ್ಲವಾದರೂ ತಾವು ಮುಂದೆ ಬಂದಿದ್ದನ್ನು ಸುದೀಪ್ ನೆನಪಿಸಿಕೊಂಡಿದ್ದಾರೆ. “ನಾನು ಯಾವತ್ತೂ ಇಂಡಸ್ಟ್ರಿಯ ಪರವಾಗಿ ನಿಂತಿದ್ದೇನೆ. ಪೈರಸಿ ಬಗ್ಗೆ ವಾರ್ನ್ ಮಾಡಿದ್ದು ತಪ್ಪಾ?” ಎಂದು ಪ್ರಶ್ನಿಸಿದ್ದಾರೆ.
“ಬಹಳಷ್ಟು ನಟರು ಇದ್ದಾರೆ. ಯಾಕೆ ನಾನೇ?” ಎನ್ನುವ ಪ್ರಶ್ನೆ ಮಾಡಿದರು. ವೇದಿಕೆ ಮೇಲೆ ಇಂಟರ್ವ್ಯೂ ಕೊಡುತ್ತಾರೆ ಅಂತಾರೆ, ಆದರೆ ಮಾತು ಯಾರಿಗೆ ತಲುಪಬೇಕೋ ಅವರಿಗೆ ಗೊತ್ತಿರುತ್ತೆ ಎಂದೂ ಅವರು ಹೇಳಿದರು.
ಹುಬ್ಬಳ್ಳಿಯಲ್ಲಿ ಶುರುವಾದ ವಿವಾದಕ್ಕೆ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡುವ ಮೂಲಕ, ತಾವು ಯಾವುದೇ ವೈಯಕ್ತಿಕ ದ್ವೇಷದಿಂದಲ್ಲ, ಸಿನಿಮಾರಂಗ ಮತ್ತು ತಮ್ಮ ಶ್ರಮವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದಲೇ ಮಾತನಾಡಿದ್ದೇನೆ ಎಂಬುದನ್ನು ಕಿಚ್ಚ ಸುದೀಪ್ ಸ್ಪಷ್ಟ ಪಡಿಸಿದ್ದಾರೆ.





