ವಿಧಾನಸಭಾ ಚುನಾವಣೆಗಳ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ದೇಶದ ಜನತೆಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆಯೇ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆ ಇಂತಹದೊಂದು ಆತಂಕವನ್ನು ಸೃಷ್ಟಿಸಿದೆ. ಏಪ್ರಿಲ್ 29ರ ಅಂತಿಮ ಹಂತದ ಮತದಾನ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರಲಿವೆ ಎಂದು ಅವರು ಎಚ್ಚರಿಸಿದ್ದಾರೆ.
ರಾಹುಲ್ ಗಾಂಧಿ ಅವರ ಗಂಭೀರ ಆರೋಪ: “ಚುನಾವಣಾ ಆಫರ್ ಮುಗಿದಿದೆ, ಹಣದುಬ್ಬರದ ಶಾಖ ಆರಂಭವಾಗಲಿದೆ” ಎಂದು ಎಕ್ಸ್ (X) ಜಾಲತಾಣದಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಅಗ್ಗವಾಗಿದ್ದಾಗ ಕೇಂದ್ರ ಸರ್ಕಾರ ಜನರಿಗೆ ಲಾಭ ನೀಡದೆ ತನ್ನ ಜೇಬು ತುಂಬಿಸಿಕೊಂಡಿದೆ. ಆದರೆ ಈಗ ಜಾಗತಿಕವಾಗಿ ಬೆಲೆ ಏರಿಕೆಯಾಗುತ್ತಿರುವ ಹೊರೆಯನ್ನೆಲ್ಲಾ ಜನರ ಮೇಲೆ ಹಾಕಲು ಸರ್ಕಾರ ಸಜ್ಜಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
चुनावी राहत खत्म, महंगाई की गर्मी तैयार!
29th April के बाद देखिए – पेट्रोल, डीज़ल, सब महंगे होंगे।
जब तेल सस्ता था, मोदी सरकार ने अपना मुनाफ़ा रखा। अब महंगा है, तो बोझ आप पर डालेगी।
सस्ते की लूट मचाती सरकार – जनता को बस महंगाई की मार।
— Rahul Gandhi (@RahulGandhi) April 28, 2026
ಜಾಗತಿಕ ತೈಲ ಬಿಕ್ಕಟ್ಟು ಮತ್ತು ಅನಿವಾರ್ಯತೆ: ರಾಹುಲ್ ಗಾಂಧಿ ಅವರ ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ತಲೆದೋರಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ, ವಿಶೇಷವಾಗಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ‘ಹಾರ್ಮುಜ್ ಜಲಸಂಧಿ’ ಮುಚ್ಚಲ್ಪಟ್ಟಿದೆ. ಇದರಿಂದ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕಳೆದ ಎರಡು ತಿಂಗಳಲ್ಲಿ ಬೆಲೆ ಶೇ. 50ಕ್ಕಿಂತ ಹೆಚ್ಚು ಏರಿಕೆಯಾಗಿದೆ.
ತೈಲ ಕಂಪನಿಗಳಿಗೆ ಭಾರಿ ನಷ್ಟ: ದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ರೀಟೇಲ್ ಇಂಧನ ಬೆಲೆಗಳಲ್ಲಿ ದೊಡ್ಡ ಬದಲಾವಣೆ ಆಗಿಲ್ಲ. ಆದರೆ ಕಚ್ಚಾ ತೈಲ ದರ ಏರಿಕೆಯಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ದಿನಕ್ಕೆ ಸುಮಾರು 2,400 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎನ್ನಲಾಗಿದೆ. ಈ ನಷ್ಟವನ್ನು ಸರಿದೂಗಿಸಲು ಚುನಾವಣೆ ಮುಗಿದ ನಂತರ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂಬ ಮಾತುಗಳು ಕೇಳಿಬರುತ್ತಿವೆ.





