ಬೆಂಗಳೂರು: ವಿವಾಹಿತೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಯಲಹಂಕ ಪ್ರದೇಶದಲ್ಲಿ ನಡೆದಿದೆ. 22 ವರ್ಷದ ಶೃತಿ ಎಂಬಾಕೆಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ. ಸಾವಿನ ಸುತ್ತಲೂ ಗಂಭೀರ ಆರೋಪಗಳು ಕೇಳಿಬಂದಿದ್ದು, ಮೃತೆಯ ಪೋಷಕರು ತಮ್ಮ ಅಳಿಯ ಪವನ್ ಕಲ್ಯಾಣ್ ಮತ್ತು ಆತನ ಕುಟುಂಬದವರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ..
ಮದುವೆಯಾಗಿ ಕೇವಲ ಒಂದೂವರೆ ವರ್ಷ
ಶೃತಿ ಮತ್ತು ಪವನ್ ಕಲ್ಯಾಣ್ ಅವರ ವಿವಾಹವಾಗಿ ಕೇವಲ ಒಂದೂವರೆ ವರ್ಷಗಳಾಗಿದ್ದವು. ಆದರೆ ಪತಿ ಪವನ್ ಮತ್ತು ಆತನ ಕುಟುಂಬದವರು ನಿರಂತರವಾಗಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಶೃತಿಯ ಪೋಷಕರು ಆರೋಪಿಸಿದ್ದಾರೆ. ಈ ಕಿರುಕುಳದಿಂದ ಬೇಸತ್ತ ಶೃತಿ ಹಲವು ಬಾರಿ ತವರು ಮನೆಗೆ ಬಂದು ತನ್ನ ನೋವನ್ನು ಹಂಚಿಕೊಂಡಿದ್ದಳು ಎನ್ನಲಾಗಿದೆ.
ಶೃತಿಯ ಪೋಷಕರು ಮತ್ತು ಕುಟುಂಬದವರು ಹಲವು ಬಾರಿ ಪವನ್ ಕುಟುಂಬದವರೊಂದಿಗೆ ರಾಜಿ ಪಂಚಾಯ್ತಿ ನಡೆಸಿದ್ದರು. ಈ ವೇಳೆ ಶೃತಿಗೆ ಕಿರುಕುಳ ನೀಡದಂತೆ ಎರಡೂ ಕುಟುಂಬಗಳ ನಡುವೆ ಒಪ್ಪಂದವೂ ಆಗಿತ್ತು. ಆದರೆ ಪವನ್ ಮತ್ತು ಆತನ ಕುಟುಂಬದವರು ತಮ್ಮ ವರದಕ್ಷಿಣೆ ಬೇಡಿಕೆ ಮತ್ತು ಕಿರುಕುಳವನ್ನು ಮುಂದುವರೆಸಿದ್ದರು ಎಂಬ ಆರೋಪ ಕೇಳಿಬಂದಿದೆ..
ಕೊಲೆಯೋ ಅಥವಾ ಆತ್ಮಹತ್ಯೆಯೋ?
ಪವನ್ ಕುಟುಂಬದವರು ಶೃತಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಅದನ್ನೇ ನೇಣು ಹಗ್ಗದಂತೆ ಬಳಸಿ ಆತ್ಮಹತ್ಯೆಯ ರೂಪ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೃತಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಿಗೆ ಆಕೆಯನ್ನು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಈ ರೀತಿ ಮಾಡಲಾಗಿದೆ ಎಂದು ಶೃತಿಯ ಪೋಷಕರು ಆರೋಪಿಸಿದ್ದಾರೆ .
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಮೃತೆಯ ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪತಿ ಪವನ್ ಕಲ್ಯಾಣ್ ಮತ್ತು ಆತನ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೊಲೆಯ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ..





