ಬೆಂಗಳೂರು: ರಕ್ಷಣೆ ನೀಡಬೇಕಾದ ಪೊಲೀಸರ ಹೆಸರನ್ನೇ ಬಳಸಿಕೊಂಡು ದರೋಡೆಕೋರರು ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ವಿವರ:
ಸೋಮವಾರ (ಫೆಬ್ರವರಿ 16) ಮಧ್ಯಾಹ್ನದ ವೇಳೆ, ಬಿಇಎಲ್ ಬಡಾವಣೆಯ ನಿವಾಸಿ ಹೊಂಬಾಳೆಗೌಡ (53) ಅವರ ಮನೆಯಲ್ಲಿ ಈ ಭೀಕರ ದರೋಡೆ ಸಂಭವಿಸಿದೆ. ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಹೊಂಬಾಳೆಗೌಡರು, ಅವರ ಪತ್ನಿ ಮಂಗಳಮ್ಮ ಮತ್ತು ಎರಡೂವರೆ ವರ್ಷದ ಹಸುಗೂಸು ಮಾತ್ರ ಇದ್ದರು. ಈ ಸಂದರ್ಭವನ್ನು ಬಳಸಿಕೊಂಡ ದರೋಡೆಕೋರರು ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿ ದರೋಡೆ ಮಾಡಿದ್ದಾರೆ.
ಪೊಲೀಸ್ ವೇಷಧಾರಿಗಳ ಎಂಟ್ರಿ:
ಖಾಸಗಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ತಾವೂ ಯಲಹಂಕ ಪೊಲೀಸರು ಎಂದು ಗುರುತಿಸಿಕೊಂಡಿದ್ದಾರೆ. ಒಬ್ಬಾತ ಸಬ್ ಇನ್ಸ್ಪೆಕ್ಟರ್ ಯೂನಿಫಾರ್ಮ್ ಧರಿಸಿ ಕೈಯಲ್ಲಿ ಡೈರಿ ಹಿಡಿದು ಅಧಿಕಾರಿಯಂತೆ ಬಿಂಬಿಸಿಕೊಂಡರೆ, ಮತ್ತೊಬ್ಬ ಕ್ರೈಮ್ ಪೊಲೀಸ್ ಕಾನ್ಸ್ಟೇಬಲ್ ರೀತಿ ಬ್ಯಾಗ್ ಧರಿಸಿ ಆತನನ್ನು ಅನುಸರಿಸಿದ್ದಾನೆ. ತಪಾಸಣೆಯ ನೆಪದಲ್ಲಿ ಮನೆಗೆ ನುಗ್ಗಿದ ಇವರು, ಒಳಬಂದ ತಕ್ಷಣವೇ ದಾಂದಲೆ ಮಾಡಿದ್ದಾರೆ.
ಮನೆಯೊಳಗೆ ನುಗ್ಗಿದ ಕೂಡಲೇ ಖದೀಮರು ಗನ್ ಮತ್ತು ಚಾಕು ತೋರಿಸಿ ಮನೆಯವರನ್ನು ಬೆದರಿಸಿದ್ದಾರೆ. ಪ್ರತಿರೋಧ ತೋರದಂತೆ ಹೊಂಬಾಳೆಗೌಡ ಮತ್ತು ಮಂಗಳಮ್ಮ ದಂಪತಿಗೆ ಟೇಪ್ ಸುತ್ತಿ ಒಂದು ಕಡೆ ಕೂರಿಸಿದ್ದಾರೆ. ಮಾಂಸೂಮ ಮಗುವಿನ ಮುಂದೆಯೇ ದಂಪತಿಗಳನ್ನು ಕಟ್ಟಿಹಾಕಿ ಮನೆಯ ಬೆಡ್ರೂಮ್ಗಳನ್ನು ಜಾಲಾಡಿದ್ದಾರೆ.
ಬಹಳ ಹೊತ್ತು ಮನೆಯನ್ನು ಶೋಧಿಸಿದ ದರೋಡೆಕೋರರು ಸುಮಾರು 20 ಲಕ್ಷ ರೂಪಾಯಿ ನಗದು ಮತ್ತು ಅರ್ಧ ಕೆಜಿ ಚಿನ್ನಾಭರಣಗಳನ್ನು ಬ್ಯಾಗ್ನಲ್ಲಿ ತುಂಬಿಸಿಕೊಂಡಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ, ಮಂಗಳಮ್ಮ ಅವರು ಭಯದಿಂದ ತಮ್ಮ ಮಾಂಗಲ್ಯ ಸರವನ್ನೂ ನೀಡಲು ಮುಂದಾದಾಗ ಅದು ಬೇಡ ಎಂದು ಬಿಟ್ಟು ಹೋಗಿದ್ದಾರೆ. ಹೋಗುವಾಗ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮನೆಯವರ ಮೊಬೈಲ್ಗಳನ್ನು ಕಸಿದುಕೊಂಡಿದ್ದಲ್ಲದೆ, ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ (DVR) ಅನ್ನು ಕೂಡ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಶ್ಚಿಮ ವಿಭಾಗದ ಡಿಸಿಪಿ ನಾಗೇಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಳಿವು ಸಿಗಬಾರದೆಂದು ಡಿವಿಆರ್ ಕೊಂಡೊಯ್ದಿದ್ದರೂ, ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಲಾಗಿದೆ. ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳು ಪೊಲೀಸ್ ಹೆಸರಿನಲ್ಲಿ ಬಂದಾಗ ಐಡಿ ಕಾರ್ಡ್ ಕೇಳುವಂತೆ ಮತ್ತು ಅನುಮಾನ ಬಂದರೆ ಕೂಡಲೇ 112 ಗೆ ಕರೆ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ.




