ರಾಮನಗರ (ಕನಕಪುರ), ಜುಲೈ 1: ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆಯೊಂದು ರೈಲ್ವೆ ಹಳಿಯ ಬಳಿ ನಿರ್ಮಿಸಿದ್ದ ಕಬ್ಬಿಣದ ಬ್ಯಾರಿಕೇಡ್ನಲ್ಲಿ ಸಿಲುಕಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಅರೆಕೊಪ್ಪ ಗ್ರಾಮದ ಸಮೀಪ ನಡೆದಿದೆ. ಅರಣ್ಯ ಇಲಾಖೆ ನಡೆಸಿದ ಸಮಯೋಚಿತ ಕಾರ್ಯಾಚರಣೆಯಿಂದ ಕಾಡಾನೆಯನ್ನು ಸುರಕ್ಷಿತವಾಗಿ ರಕ್ಷಿಸಿ ಮತ್ತೆ ಕಾಡಿಗೆ ಬಿಡಲಾಗಿದೆ.
- ಕನಕಪುರ ತಾಲೂಕಿನ ಅರೆಕೊಪ್ಪ ಗ್ರಾಮದ ಬಳಿ ರೈಲ್ವೆ ಬ್ಯಾರಿಕೇಡ್ನಲ್ಲಿ ಸಿಲುಕಿದ ಕಾಡಾನೆ
- ಆಹಾರ ಅರಸಿ ನಾಡಿಗೆ ಬಂದಿದ್ದ ಆನೆ ಕಾಡಿಗೆ ಮರಳುವಾಗ ಈ ಘಟನೆ ಸಂಭವಿಸಿದೆ
- ಗ್ರಾಮಸ್ಥರ ಮಾಹಿತಿ ಮೇರೆಗೆಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ
- ಅನಸ್ತೇಷಿಯಾ ನೀಡಿ ಬ್ಯಾರಿಕೇಡ್ ಕತ್ತರಿಸಿ ಕಾಡಾನೆಯ ರಕ್ಷಣೆ
ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ನೀರಿನ ಕೊರತೆಯಿಂದ ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಮುಗ್ಗೂರು ಅರಣ್ಯದಿಂದ ರಾತ್ರಿ ವೇಳೆ ಕಾಡಂಚಿನ ಜಮೀನಿಗೆ ಬಂದಿದ್ದ ಕಾಡಾನೆ ಮೇವು ತಿಂದು, ಬೆಳಗಿನ ಜಾವ ಮರಳಿ ಕಾಡಿಗೆ ಹೋಗುವ ವೇಳೆ ಈ ಅವಘಡ ಸಂಭವಿಸಿದೆ.
ಆನೆಗಳು ಗ್ರಾಮಗಳಿಗೆ ಪ್ರವೇಶಿಸದಂತೆ ರೈಲ್ವೆ ಹಳಿಯ ಬಳಿ ಅಳವಡಿಸಲಾಗಿದ್ದ ಕಬ್ಬಿಣದ ಬ್ಯಾರಿಕೇಡ್ನಲ್ಲಿ ದನಗಳು ಸಂಚರಿಸಲು ನಿರ್ಮಿಸಿದ್ದ ಕಿರಿದಾದ ತೆರವಿನ ಮೂಲಕ ಕಾಡಾನೆ ಹೋಗಲು ಯತ್ನಿಸಿದೆ. ಆದರೆ ದೇಹದ ಗಾತ್ರದಿಂದಾಗಿ ಅರ್ಧದಾರಿಯಲ್ಲೇ ಸಿಲುಕಿಕೊಂಡು ಮುಂದೆ ಸಾಗಲೂ ಸಾಧ್ಯವಾಗದೆ, ಹಿಂದಕ್ಕೆ ಬರಲೂ ಆಗದೆ ಗಂಟೆಗಳ ಕಾಲ ನರಳಾಡಿದೆ.
ಆನೆಯ ಕಿರುಚಾಟವನ್ನು ಕೇಳಿದ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ತಕ್ಷಣವೇ ಕಾವೇರಿ ವನ್ಯಜೀವಿಧಾಮದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪಶುವೈದ್ಯರ ತಂಡದೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಮೊದಲು ಪಶುವೈದ್ಯರು ಕಾಡಾನೆಗೆ ಅನಸ್ತೇಷಿಯಾ ನೀಡಿ ಪ್ರಜ್ಞೆ ತಪ್ಪಿಸಿದರು. ಬಳಿಕ ಕಬ್ಬಿಣ ಕತ್ತರಿಸುವ ಯಂತ್ರದ ಸಹಾಯದಿಂದ ಬ್ಯಾರಿಕೇಡ್ನ ಒಂದು ಭಾಗವನ್ನು ಕತ್ತರಿಸಿ ಆನೆ ಹೊರಬರಲು ದಾರಿ ಮಾಡಿಕೊಡಲಾಯಿತು. ಸುಮಾರು ಮಧ್ಯಾಹ್ನ 12.30 ಗಂಟೆಗೆ ಆನೆಗೆ ಪ್ರಜ್ಞೆ ಬಂದ ನಂತರ ಸುರಕ್ಷಿತವಾಗಿ ಕಾವೇರಿ ವನ್ಯಜೀವಿಧಾಮದ ಕಡೆಗೆ ಬಿಡಲಾಯಿತು.
ರಕ್ಷಣಾ ಕಾರ್ಯಾಚರಣೆಯ ವೇಳೆ ಕಾವೇರಿ ವನ್ಯಜೀವಿಧಾಮದ ಎಸಿಎಫ್ ನಾಗೇಂದ್ರ, ಆರ್ಎಫ್ಒ ಶ್ರೀಧರ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಗ್ರಾಮಸ್ಥರು ಸಮಯಕ್ಕೆ ಮಾಹಿತಿ ನೀಡಿದ್ದರಿಂದ ಕಾಡಾನೆಯ ಜೀವ ಉಳಿಸಲು ಸಾಧ್ಯವಾಯಿತು ಎಂದು ಅರಣ್ಯ ಇಲಾಖೆ ತಿಳಿಸಿದೆ.





