ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಪಾದಾಚಾರಿಗಳ ಸುರಕ್ಷತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಆರಂಭಿಸಲಾಗಿರುವ ‘ಆಪರೇಷನ್ ಫುಟ್ಪಾತ್’ (Operation Footpath) ಒತ್ತುವರಿ ತೆರವು ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಸ್ಪಷ್ಟಪಡಿಸಿದ್ದಾರೆ.
ಇದು ಬಡ ಬೀದಿಬದಿ ವ್ಯಾಪಾರಿಗಳ ವಿರುದ್ಧದ ಕಾರ್ಯಾಚರಣೆಯಲ್ಲ, ಬದಲಿಗೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಮತ್ತು ಸಾರ್ವಜನಿಕರ ಜೀವ ರಕ್ಷಣೆಗಾಗಿ ನಡೆಸಲಾಗುತ್ತಿರುವ ಕಡ್ಡಾಯ ಕ್ರಮ ಎಂದು ಅವರು ವಿವರಿಸಿದರು.
ಬಿಬಿಎಂಪಿ (BBMP) ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ಕಾರ್ಯಾಚರಣೆಯ ಹಿಂದಿನ ಅನಿವಾರ್ಯತೆ ಮತ್ತು ಸರ್ಕಾರದ ನಿಲುವಿನ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದ್ದಾರೆ.
900 ಮಂದಿಯ ಸಾವು, 3 ಸಾವಿರಕ್ಕೂ ಹೆಚ್ಚು ಗಾಯ – ಅಂಕಿಅಂಶಗಳೇ ಸಾಕ್ಷಿ
ಫುಟ್ಪಾತ್ ತೆರವು ಕಾರ್ಯಾಚರಣೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟ ಸಚಿವರು, ಬೆಂಗಳೂರಿನಲ್ಲಿ ಫುಟ್ಪಾತ್ಗಳ ಅತಿಕ್ರಮಣದಿಂದಾಗಿ ಪಾದಚಾರಿಗಳು ರಸ್ತೆಗಿಳಿಯುವಂತಾಗಿ, ಇದುವರೆಗೆ ಬರೋಬ್ಬರಿ 900 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. 3,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ಸುರಕ್ಷಿತ ಪಾದಾಚಾರಿ ಮಾರ್ಗಗಳ ಕೊರತೆಯಿಂದ ಪ್ರತಿದಿನ ಸಂಭವಿಸುವ ಅಪಘಾತಗಳು ಮತ್ತು ಪ್ರಾಣಹಾನಿಯನ್ನು ತಡೆಯಲು, ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಹಿನ್ನೆಲೆ ಸರ್ಕಾರ ಈ ಕಾರ್ಯಾಚರಣೆಯನ್ನು ಕೈಗೊಂಡಿದೆ. ಇದು ಬಡವರು, ಶ್ರೀಮಂತರು ಎಂಬ ಭೇದವಿಲ್ಲದೆ ಎಲ್ಲರ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾದ ನಿರ್ಧಾರವಾಗಿದೆ.
ವ್ಯಾಪಾರಿಗಳಿಗೆ ಪರ್ಯಾಯ ಮಾರ್ಗದ ಸಲಹೆ
“ನಮ್ಮ ಈ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ವಿರುದ್ಧ ಅಲ್ಲ” ಎಂದು ಸ್ಪಷ್ಟಪಡಿಸಿದ ಸಚಿವರು, ನಗರದಲ್ಲಿ ಒಟ್ಟು 18 ಸಾವಿರ ರಸ್ತೆಗಳಿದ್ದು, ಪ್ರಸ್ತುತ ಕೇವಲ 1,500 ಪ್ರಮುಖ ರಸ್ತೆಗಳಲ್ಲಿ (Main Roads) ಮಾತ್ರ ಫುಟ್ಪಾತ್ ತೆರವು ನಡೆಯುತ್ತಿದೆ. ಇದು ಒಟ್ಟು ರಸ್ತೆಗಳ ಶೇ. 10 ರಷ್ಟು ಮಾತ್ರ. ಈ ಪ್ರಮುಖ ರಸ್ತೆಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಬೇಕಾಗಿದ್ದು, ಬೀದಿಬದಿ ವ್ಯಾಪಾರಿಗಳು ಪಕ್ಕದ ಲಿಂಕ್ ರಸ್ತೆಗಳಲ್ಲಿ (Link Roads) ತಮ್ಮ ವ್ಯಾಪಾರವನ್ನು ಮುಂದುವರೆಸಬಹುದು. ಅಲ್ಲಿ ವ್ಯಾಪಾರ ಮಾಡಲು ಯಾವುದೇ ತಡೆಯಿಲ್ಲ ಮತ್ತು ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಮಾಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
8 ದಿನಗಳ ಅದ್ಭುತ ಸಾಧನೆ: 430 ಕಿ.ಮೀ. ಫುಟ್ಪಾತ್ ಮುಕ್ತ
ಬೆಂಗಳೂರು ನಗರದಲ್ಲಿ ಜುಲೈ 1 ರಿಂದ ಜುಲೈ 8 ರವರೆಗಿನ ಕೇವಲ ಎಂಟು ದಿನಗಳ ಅವಧಿಯಲ್ಲಿ ಬರೋಬ್ಬರಿ 430 ಕಿಲೋಮೀಟರ್ ಉದ್ದದ ಫುಟ್ಪಾತ್ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ನಿನ್ನೆ (ಜುಲೈ 8) ಒಂದೇ ದಿನ 44.3 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಮುಕ್ತಗೊಳಿಸಲಾಗಿದೆ.
-
ಪಶ್ಚಿಮ ವಲಯ: 115.02 ಕಿ.ಮೀ.
-
ಉತ್ತರ ವಲಯ: 104.15 ಕಿ.ಮೀ.
-
ದಕ್ಷಿಣ ವಲಯ: 80.06 ಕಿ.ಮೀ.
-
ಪೂರ್ವ ವಲಯ: 69.32 ಕಿ.ಮೀ.
-
ಕೇಂದ್ರ ವಲಯ: 61.45 ಕಿ.ಮೀ.
ದೊಡ್ಡ ಅಂಗಡಿಗಳಿಗೂ ನಿಯಮ ಅನ್ವಯ: ಜಾಹಿರಾತು, ಶೀಟ್ಗಳು ಕ್ಲೀನ್!
ಸರ್ಕಾರ ಕೇವಲ ಬಡ ಬೀದಿಬದಿ ವ್ಯಾಪಾರಿಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ ಎನ್ನುವ ಆರೋಪವನ್ನು ಸಚಿವರು ತಳ್ಳಿಹಾಕಿದರು. ದೊಡ್ಡ ದೊಡ್ಡ ಮಳಿಗೆಗಳು ಮತ್ತು ಅಂಗಡಿಗಳ ಮುಂಭಾಗ ಕಾನೂನುಬಾಹಿರವಾಗಿ ಫುಟ್ಪಾತ್ ಹಾಗೂ ರಸ್ತೆ ಆಕ್ರಮಿಸಿಕೊಂಡಿದ್ದ ಎಲ್ಲಾ ಶಾಶ್ವತ ನಿರ್ಮಾಣಗಳನ್ನು ಕೂಡ ತೆರವುಗೊಳಿಸಲಾಗಿದೆ.
ಕಾರ್ಯಾಚರಣೆಯ ಭಾಗವಾಗಿ, ಫುಟ್ಪಾತ್ ಮೇಲಿದ್ದ 2,200 ಕಡೆಗಳ ಜಾಹಿರಾತು ಮತ್ತು ನಾಮಫಲಕಗಳನ್ನು ಕಿತ್ತೆಸೆಯಲಾಗಿದೆ. ಅಂಗಡಿಗಳ ಮುಂದೆ ಸಾರ್ವಜನಿಕರ ನಡಿಗೆಗೆ ಅಡ್ಡಿಯಾಗುವಂತೆ ನಿರ್ಮಿಸಿದ್ದ 1,580 ಕಡೆಗಳ ಕಾಂಕ್ರೀಟ್ ಅಂಪ್ಗಳನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗಿದೆ.
ಅಷ್ಟೇ ಅಲ್ಲದೆ, ಅಂಗಡಿಗಳ ಮುಂದೆ ಫುಟ್ಪಾತ್ ಆವರಿಸುವಂತೆ ಅಳವಡಿಸಲಾಗಿದ್ದ 1,700 ಕ್ಕೂ ಹೆಚ್ಚು ಕಡೆಗಳ ಕಬ್ಬಿಣ ಹಾಗೂ ಫೈಬರ್ ಶೀಟ್ಗಳನ್ನು ಕಿತ್ತು ಹಾಕಲಾಗಿದೆ. ಇದರಿಂದ ಅಂಗಡಿ ಮಾಲೀಕರು ತಮ್ಮ ವ್ಯಾಪಾರದ ಜಾಗವನ್ನು ಅಕ್ರಮವಾಗಿ ವಿಸ್ತರಿಸಿಕೊಳ್ಳುವುದನ್ನು ತಡೆಯಲಾಗಿದೆ.





