ಬೆಂಗಳೂರು: ಕೆಲ ದಿನಗಳಿಂದ ನಟ ಪ್ರಜ್ವಲ್ ದೇವರಾಜ್ ಹಾಗೂ ‘ಕರಾವಳಿ’ ಚಿತ್ರದ ತಂಡದ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಟ್ರೋಲ್ಗಳ ನಡುವೆಯೇ ಇದೀಗ ಹೊಸ ಅಪ್ಡೇಟ್ ಸಿಕ್ಕಿದೆ. ಈ ಹಿಂದೆ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಗೈರಾಗಿದ್ದ ಪ್ರಜ್ವಲ್ ದೇವರಾಜ್, ಇದೀಗ ಅದೇ ಚಿತ್ರದ ಪ್ರಚಾರ ಕಾರ್ಯಕ್ಕೆ ಸಕ್ರಿಯವಾಗಿ ಮುಂದಾಗಿದ್ದು, ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ದಾರೆ.
‘ಕರಾವಳಿ’ ಚಿತ್ರದ ಕುರಿತು ಇತ್ತೀಚೆಗೆ ಹಲವು ವಿವಾದಗಳು ಸೃಷ್ಟಿಯಾಗಿದ್ದವು. ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳದೇ ಇದ್ದದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಳಿಕ ಅವರು ತಮ್ಮ ಪಾತ್ರಕ್ಕೆ ತಾವು ಡಬ್ಬಿಂಗ್ ಮಾಡಿಲ್ಲ, ಬೇರೆಯವರಿಂದ ಡಬ್ ಮಾಡಿಸಲಾಗಿದೆ. ಅಲ್ಲದೆ, ತಮಗೆ ನೀಡಬೇಕಿದ್ದ ಸಂಪೂರ್ಣ ಸಂಭಾವನೆಯೂ ಪಾವತಿಯಾಗಿಲ್ಲ ಎಂದು ಬಹಿರಂಗವಾಗಿ ಆರೋಪಿಸಿದ್ದರು. ಈ ಹೇಳಿಕೆಗಳು ಚಿತ್ರತಂಡದ ವಿರುದ್ಧ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದವು.
ಪ್ರಜ್ವಲ್ ಅವರ ಈ ಆರೋಪಗಳ ಬಳಿಕ ಅವರ ಅಭಿಮಾನಿಗಳೂ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದರು. ಚಿತ್ರದ ಬಗ್ಗೆ ಹಲವಾರು ರೀತಿಯ ಟ್ರೋಲ್ಗಳು ಹರಿದಾಡಿದ್ದವು. ಇದರಿಂದ ‘ಕರಾವಳಿ’ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ವಿವಾದಗಳಿಗೆ ಗುರಿಯಾಗಿತ್ತು.
ಆದರೆ ಈಗ ಪ್ರಜ್ವಲ್ ದೇವರಾಜ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ‘ಕರಾವಳಿ’ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಚಿತ್ರದ ಚಿತ್ರೀಕರಣದ ವೇಳೆ ನಡೆದ ಒಂದು ವಿಶೇಷ ಕ್ಷಣವನ್ನು ನೆನಪಿಸಿಕೊಂಡು ಅವರು ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಪ್ರಜ್ವಲ್ ದೇವರಾಜ್, “2024ರ ಡಿಸೆಂಬರ್ 1ರಂದು ನಡೆದ ಸತ್ಯಧರ್ಮ ಕಂಬಳದಲ್ಲಿ ನಿಮ್ಮೆಲ್ಲರೊಂದಿಗೆ ಕಳೆದ ಆ ದಿನ ನನ್ನ ಬದುಕಿನ ಮರೆಯಲಾಗದ ನೆನಪುಗಳಲ್ಲಿ ಒಂದಾಗಿದೆ. ಕರಾವಳಿಯ ಜನರು ತೋರಿದ ಪ್ರೀತಿ, ಆತ್ಮೀಯ ಸ್ವಾಗತ, ಚಪ್ಪಾಳೆಗಳು ಹಾಗೂ ಆಶೀರ್ವಾದಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ‘ಕರಾವಳಿ’ ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಸಿನಿಮಾ” ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, “ಈ ಸಿನಿಮಾವನ್ನು ನಿಮ್ಮೆಲ್ಲರ ತನಕ ತಲುಪಿಸಲು ನನ್ನಿಂದಾಗುವ ಪ್ರತಿಯೊಂದು ಪ್ರಚಾರವನ್ನೂ ಅದೇ ಪ್ರೀತಿ ಹಾಗೂ ಅದೇ ಬದ್ಧತೆಯೊಂದಿಗೆ ಮುಂದುವರಿಸುತ್ತೇನೆ. ಕರಾವಳಿಯ ಜನರ ಪ್ರೀತಿ ಮತ್ತು ನಿಮ್ಮೆಲ್ಲರ ಬೆಂಬಲಕ್ಕೆ ನಾನು ಸದಾ ಋಣಿಯಾಗಿದ್ದೇನೆ. ಶೀಘ್ರದಲ್ಲೇ ಚಿತ್ರಮಂದಿರದಲ್ಲಿ ಭೇಟಿಯಾಗೋಣ” ಎಂದು ಅವರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಪ್ರಜ್ವಲ್ ಅವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ಚಿತ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ನಟ ಇದೀಗ ಅದೇ ಚಿತ್ರದ ಪರವಾಗಿ ಪ್ರಚಾರ ಆರಂಭಿಸಿರುವುದು ಹಲವರ ಗಮನ ಸೆಳೆದಿದೆ. ಇದರಿಂದ ಚಿತ್ರತಂಡ ಮತ್ತು ನಟನ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿದಿವೆಯೇ ಎಂಬ ಪ್ರಶ್ನೆಯೂ ಸಿನಿಪ್ರಿಯರಲ್ಲಿ ಮೂಡಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಥವಾ ಪ್ರಜ್ವಲ್ ದೇವರಾಜ್ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.





