ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು ಮತ್ತು ತೈಲ ದಿಗ್ಬಂಧನವು ಪಾಕಿಸ್ತಾನದ ಮೇಲೆ ತೀವ್ರ ಆರ್ಥಿಕ ಪರಿಣಾಮ ಬೀರಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ತಮ್ಮ ದೇಶದ ಸಂಕಷ್ಟದ ಸನ್ನಿವೇಶವನ್ನು ಎಳೆಯಾಗಿ ಬಿಚ್ಚಿಟ್ಟಿದ್ದು, ಅಮೆರಿಕ-ಇರಾನ್ ಯುದ್ಧದಿಂದ ಪಾಕಿಸ್ತಾನಕ್ಕೆ ತೀವ್ರ ಆರ್ಥಿಕ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ.
ತೈಲ ಆಮದು ವೆಚ್ಚದಲ್ಲಿ ಅಗಾಧ ಏರಿಕೆ
ಪಾಕಿಸ್ತಾನದ ಪ್ರಧಾನಿ ಮಾತನಾಡಿ, “ಹಾರ್ಮುಜ್ ಜಲಸಂಧಿಯ ಸುತ್ತಲಿನ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನದ ತೈಲ ಆಮದು ವೆಚ್ಚವು 300 ಮಿಲಿಯನ್ ಡಾಲರ್ಗಳಿಂದ 800 ಮಿಲಿಯನ್ ಡಾಲರ್ಗೆ ಜಿಗಿದಿದೆ” ಎಂದು ಬಹಿರಂಗಪಡಿಸಿದರು. ಕೇವಲ ಕೆಲವೇ ತಿಂಗಳುಗಳಲ್ಲಿ ಸಂಭವಿಸಿರುವ ಈ ಏರಿಕೆಯು ಪಾಕಿಸ್ತಾನದ ಆರ್ಥಿಕತೆಯನ್ನು ಮತ್ತಷ್ಟು ದುರ್ಬಲಗೊಳಿಸಿದೆ. ಕಳೆದ ಎರಡು ವರ್ಷಗಳಿಂದಲೂ ಹಣದುಬ್ಬರ ಮತ್ತು ವಿದೇಶಿ ವಿನಿಮಯ ಸಂಗ್ರಹದ ಕೊರತೆಯಿಂದ ಸಂಕಷ್ಟದಲ್ಲಿದ್ದ ಪಾಕಿಸ್ತಾನ, ಈಗ ಮತ್ತೊಂದು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಜನರಿಗೆ ಶೆಹಬಾಜ್ ಶರೀಫ್ ಮನವಿ
ತೀವ್ರ ಸಂಕಷ್ಟದಿಂದ ಪಾರಾಗಲು, ಪಾಕಿಸ್ತಾನದ ಪ್ರಧಾನಿ ಅವರು ದೇಶದ ಜನತೆಗೆ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ. “ಪ್ರತಿಯೊಬ್ಬ ನಾಗರಿಕರು ಒಂದು ದಿನದಲ್ಲಿ ಅನಗತ್ಯ ಪ್ರಯಾಣವನ್ನು ತಪ್ಪಿಸುವ ಮೂಲಕ, ಇಂಧನ ಉಳಿತಾಯ ಮಾಡಿದರೆ, ನಮ್ಮ ದೇಶದ ಸಂಕಷ್ಟದ ಹೊರೆ ಸ್ವಲ್ಪ ಕಡಿಮೆಯಾಗಬಹುದು” ಎಂದು ಅವರು ಹೇಳಿದ್ದಾರೆ.
ಸಂಧಾನ ಸಾರಥ್ಯಕ್ಕೆ ಆರ್ಥಿಕ ಸಂಕಷ್ಟವೇ ಕಾರಣವೇ?
ಪಾಕಿಸ್ತಾನವು ಅಮೆರಿಕ-ಇರಾನ್ ಸಂಧಾನದಲ್ಲಿ ಸಾರಥಿಯಾಗುವ ಪ್ರಯತ್ನ ನಡೆಸುತ್ತಿದೆ. “ಸಂಧಾನ ಸಕ್ಸಸ್ ಆಗುತ್ತಿಲ್ಲ. ಹಾರ್ಮುಜ್ ತೆರೆಯುತ್ತಿಲ್ಲ. ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ನೆರವು (ಭಿಕ್ಷೆಯೂ) ಸರಿಯಾಗಿ ಸಿಗುತ್ತಿಲ್ಲ” ಎಂದು ಶೆಹಬಾಜ್ ಶರೀಫ್ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಮತ್ತೊಮ್ಮೆ 3ನೇ ಹಂತದ ಸಂಧಾನಕ್ಕೆ ಪಾಕಿಸ್ತಾನ ಪ್ರಯತ್ನ
ಹಿಂದಿನ ಎರಡು ಸುತ್ತಿನ ಮಾತುಕತೆಗಳು ವಿಫಲವಾದ ಹಿನ್ನೆಲೆ, ಮತ್ತೊಮ್ಮೆ ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ನಡುವೆ ಮೂರನೇ ಹಂತದ ಸಂಧಾನಕ್ಕೆ ಯತ್ನಿಸುತ್ತಿದೆ. “ಮತ್ತೆ ಯುದ್ಧವಾದರೆ ನಾವು ಬರ್ಬಾದ್ ಆಗುತ್ತೇವೆ” ಎಂಬ ಭೀತಿ ಪಾಕಿಸ್ತಾನದಲ್ಲಿ ಮನೆ ಮಾಡಿದೆ.
ಪಾಕಿಸ್ತಾನದ ಮುಂದಿನ ಸವಾಲುಗಳು
ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹವು ಕೇವಲ ಒಂದೆರಡು ತಿಂಗಳ ಆಮದಿಗೆ ಮಾತ್ರ ಸಾಕಾಗುವಷ್ಟು ಇದೆ. ತೈಲ ಆಮದು ವೆಚ್ಚ ಏರಿಕೆಯು ನೇರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳ ಮೇಲೆ ಪರಿಣಾಮ ಬೀರಿದೆ. ಸಾಮಾನ್ಯ ಜನತೆಯ ಮೇಲಿನ ಹೊರೆ ಅಪಾರವಾಗಿದೆ.





