ಢಾಕಾ: ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಕೌಂಟ್ಡೌನ್ ಆರಂಭವಾಗಿರುವ ಬೆನ್ನಲ್ಲೇ, ಮೈಮನ್ ಸಿಂಗ್ ಜಿಲ್ಲೆಯಲ್ಲಿ ಹಿಂದೂ ವ್ಯಾಪಾರಿಯೊಬ್ಬರನ್ನು ಅಮಾನವೀಯವಾಗಿ ಹತ್ಯೆ ಮಾಡಲಾಗಿದೆ.
ಬಾಂಗ್ಲಾದೇಶದ ಮೈಮನ್ ಸಿಂಗ್ ಜಿಲ್ಲೆಯ ತ್ರಿಶಾಲ ಎಂಬ ಪ್ರದೇಶದಲ್ಲಿ ಈ ಘೋರ ಕೃತ್ಯ ನಡೆದಿದೆ. ಸುಷೇನ್ ಚಂದ್ರ ಸರ್ಕಾರ್ (62) ಎಂಬ ವೃದ್ಧ ಅಕ್ಕಿ ವ್ಯಾಪಾರಿಯನ್ನು ಅಪರಿಚಿತ ದುಷ್ಕರ್ಮಿಗಳು ಅವರ ಸ್ವಂತ ಅಂಗಡಿಯಲ್ಲೇ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸೋಮವಾರ ತಡರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ಸುಷೇನ್ ಅವರು ವ್ಯಾಪಾರ ಮುಗಿಸಿ ಮನೆಗೆ ಹೊರಡುತ್ತಿದ್ದರು ಆ ವೇಳೆ ಅಂಗಡಿಗೆ ಒಳಗಡೆ ನುಗ್ಗಿದ್ದ ಹಂತಕರು ಸುಷೇನ್ ಚಂದ್ರ ಮಾರಕಾಸ್ತ್ರಗಳಿಂದ ಮನಬಂದಂತೆ ಇರಿದಿದ್ದಾರೆ.
ದುಷ್ಕರ್ಮಿಗಳು ಸುಷೇನ್ ಅವರನ್ನು ಕೊಲೆ ಮಾಡಿದ ನಂತರ, ಶವವನ್ನು ಅಂಗಡಿಯಲ್ಲೇ ಬಿಟ್ಟು ಶಟರ್ ಎಳೆದು ಪರಾರಿಯಾಗಿದ್ದಾರೆ. ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದೆ ಎಂದು ತ್ರಿಶಾಲ ಪೊಲೀಸ್ ಠಾಣೆಯ ಅಧಿಕಾರಿ ಮುಹಮ್ಮದ್ ಫಿರೋಜ್ ಹೊಸೈನ್ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿವೆ. ಈ ಹಿಂದೆ ಹಲವಾರು ಮನೆಗಳಿಗೆ ಬೆಂಕಿ ಹಚ್ಚುವುದು, ದೇವಸ್ಥಾನಗಳ ಧ್ವಂಸ ಹಾಗೂ ಸಾಮೂಹಿಕ ಹಲ್ಲೆಯ ಪ್ರಕರಣಗಳು ವರದಿಯಾಗಿದ್ದವು.
ಬಾಂಗ್ಲಾಗೆ ಅಮೆರಿಕದ ‘ಆರ್ಥಿಕ ಬೂಸ್ಟರ್ ಡೋಸ್’
ಒಂದೆಡೆ ಹಿಂಸಾಚಾರ ನಡೆಯುತ್ತಿದ್ದರೆ, ಮತ್ತೊಂದೆಡೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಿದೆ. ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಬಾಂಗ್ಲಾದೇಶದೊಂದಿಗೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ.
ಒಪ್ಪಂದದ ಪ್ರಮುಖಾಂಶಗಳು:
-
ಸುಂಕ ರಿಯಾಯಿತಿ: ಬಾಂಗ್ಲಾದೇಶದಿಂದ ಅಮೆರಿಕಕ್ಕೆ ರಫ್ತಾಗುವ ಜವಳಿ ಮತ್ತು ಉಡುಪುಗಳ ಮೇಲಿನ ಸುಂಕವನ್ನು ಇಳಿಸಲಾಗಿದೆ.
-
ಹೊಸ ದರ: ಈ ಹಿಂದೆ ಶೇ. 20ರಷ್ಟಿದ್ದ ಒಟ್ಟಾರೆ ಪರಸ್ಪರ ಸುಂಕವನ್ನು ಈಗ ಶೇ. 19ಕ್ಕೆ ಇಳಿಕೆ ಮಾಡಲಾಗಿದೆ.
-
ಜವಳಿ ಉದ್ಯಮಕ್ಕೆ ಲಾಭ: ಅಮೆರಿಕದಲ್ಲಿ ಉತ್ಪಾದನೆಯಾದ ಹತ್ತಿ ಬಳಸಿ ತಯಾರಿಸಿದ ಬಾಂಗ್ಲಾದ ಉಡುಪುಗಳಿಗೆ ಈ ವಿನಾಯಿತಿ ಸಿಗಲಿದೆ.
ಬಾಂಗ್ಲಾದೇಶದ ಮಧ್ಯಂತರ ನಾಯಕ ಮುಹಮ್ಮದ್ ಯೂನಸ್ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಒಪ್ಪಂದವು ನಮ್ಮ ದೇಶದ ಜವಳಿ ಉದ್ಯಮಕ್ಕೆ ಹೊಸ ಚೈತನ್ಯ ನೀಡಲಿದೆ ಎಂದಿದ್ದಾರೆ. ಆದರೆ, ದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಹತ್ಯೆಗಳ ಬಗ್ಗೆ ಅಂತರರಾಷ್ಟ್ರೀಯ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಈ ಆರ್ಥಿಕ ಲಾಭಗಳು ಮಾನವ ಹಕ್ಕುಗಳ ರಕ್ಷಣೆಗೆ ಪೂರಕವಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.





