ವಿಜಯ್ ಜನನಾಯಗನ್ ಆಯ್ತು. ಈಗ ಧ್ರುವ ಸರ್ಜಾ ಕೆಡಿ ಸರದಿ. ಹೌದು.. ಈಗಾಗ್ಲೇ ಸೆನ್ಸಾರ್ ಸಮಸ್ಯೆಯಿಂದ ಜನನಾಯಗನ್ ರಿಲೀಸ್ಗೆ ಬ್ರೇಕ್ ಬಿದ್ದಿದೆ. ಅದೇ ಮಾದರಿಯಲ್ಲಿ ಕೆಡಿ ಚಿತ್ರಕ್ಕೂ ಸಂಕಷ್ಟ ಎದುರಾಗಿದೆ. ಇಷ್ಟಕ್ಕೂ ಕೆವಿಎನ್ ಸಂಸ್ಥೆ ನಿರ್ಮಾಣದ ಸಿನಿಮಾಗಳಿಗೇ ಹೀಗೆ ಯಾಕೆ ಆಗ್ತಿದೆ..? ಕೆವಿಎನ್ ನಿಜಕ್ಕೂ ಸೆನ್ಸಾರ್ಗೆ ಟಾರ್ಗೆಟ್ ಆದ್ರಾ..? ಇಲ್ಲಿದೆ ಡಿಟೈಲ್ಡ್ ರಿಪೋರ್ಟ್.
- ‘KD’ಗೂ ಸೆನ್ಸಾರ್ ಸಂಕಷ್ಟ.. KVN ಸಂಸ್ಥೆ ಟಾರ್ಗೆಟ್ ಏಕೆ..?
- ಇಷ್ಟು ದಿನ ಜನನಾಯಗನ್.. ಈಗ ಧ್ರುವ ಸರ್ಜಾ KD ಸರದಿ
- ಪ್ರಾದೇಶಿಕ ಬೋರ್ಡ್ ಅರಿವಿಲ್ಲದೆ ರಿವೈಸಿಂಗ್ಗೆ ಹಸ್ತಾಂತರ
- ಎರಡು ಲೈನ್ ಲಿರಿಕ್ಸ್ ಬದಲಿಸಿದ್ರೆ ಸಿಗ್ತಿತ್ತು A ಸರ್ಟಿಫಿಕೇಟ್!
ಸಿಬಿಎಫ್ಸಿ.. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ ನಮ್ಮ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ಗೆ ಸಿಂಹಸ್ವಪ್ನ ಆಗಿಬಿಟ್ಟಿದೆ. ಇಷ್ಟು ದಿನ ತಮಿಳಿನ ದಳಪತಿ ವಿಜಯ್ ನಟನೆಯ ಜನನಾಯಗನ್ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡದೆ ಸಂಕಷ್ಟ ತಂದೊಡ್ಡಿತ್ತು. ಇದೀಗ ಕನ್ನಡದ ಕೆಡಿ ಸಿನಿಮಾದ ಸರದಿ. ಹೌದು.. ಧ್ರುವ ಸರ್ಜಾ, ಸಂಜಯ್ ದತ್ ಅಭಿನಯದ ಕೆಡಿ ಸಿನಿಮಾ ಕೂಡ ಅಂಥದ್ದೇ ಬಲೆಗೆ ಸಿಲುಕಿದೆ.
ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಇತ್ತೀಚೆಗೆ ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿನಿಂದ ಬಹುದೊಡ್ಡ ವಿವಾದಕ್ಕೆ ಸಿಲುಕಿತ್ತು. ಅದು ನ್ಯಾಷನಲ್ ಲೆವೆಲ್ನಲ್ಲಿ ಸುದ್ದಿಯಾಗೋ ಮೂಲಕ, ಚಿತ್ರತಂಡ ಕೊನೆಗೆ ಆ ಹಾಡನ್ನ ಡಿಲೀಟ್ ಮಾಡುವಂತಾಯ್ತು. ಆದ್ರೆ ಇದೇ ಏಪ್ರಿಲ್ 30ಕ್ಕೆ ತೆರೆಗೆ ಬರ್ತಿರೋ ಕೆಡಿ ಸಿನಿಮಾ, ಸೆನ್ಸಾರ್ಗೆ ಅಂತ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮುಂದೆ ಹೋದಾಗ, ಫಿಲ್ಮ್ ಸ್ಕ್ರೀನಿಂಗ್ ಬಳಿಕ ಅಧಿಕಾರಿಗಳು ಎ ಸರ್ಟಿಫಿಕೇಟ್ ನೀಡೋದಾಗಿ ಹೇಳಿದ್ದರಂತೆ. ಅಲ್ಲದೆ ವಿವಾದಿತ ಸಾಲುಗಳಿರೋ ಹಾಡಿನಿಂದ ಎರಡು ಲೈನ್ ಸಾಹಿತ್ಯ ಬದಲಿಸಲು ಸೂಚಿಸಿದ್ದರಂತೆ.
ಆದ್ರೆ ಮುಂಬೈನಲ್ಲಿರೋ ಸಿಬಿಎಫ್ಸಿ ಬೋರ್ಡ್, ಬೆಂಗಳೂರಿನಲ್ಲಿ ಈಗಾಗ್ಲೇ ಫಿಲ್ಮ್ ಸ್ಕ್ರೀನಿಂಗ್ ಮಾಡಿದ್ದ ಪ್ರಾದೇಶಿಕ ಸೆನ್ಸಾರ್ ಆಫೀಸರ್ ಗಮನಕ್ಕೆ ತರದೇನೇ, ಇತ್ತ ಚಿತ್ರದ ನಿರ್ದೇಶಕ, ನಿರ್ಮಾಪಕರಿಗೂ ನೋಟಿಸ್ ನೀಡದೆ ಏಕಾಏಕಿ ರಿವೈಸಿಂಗ್ ಕಮಿಟಿಗೆ ಸಿನಿಮಾನ ಹಸ್ತಾಂತರಿಸಿದೆ. ಇದು ಮಗದೊಮ್ಮೆ ಕೆವಿಎನ್ ಸಂಸ್ಥೆಯನ್ನ ಸೆಂಟ್ರಲ್ ಸೆನ್ಸಾರ್ ಬೋರ್ಡ್ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿದಂತೆ ಭಾಸವಾಗ್ತಿದೆ.
ಧ್ರುವ ಸರ್ಜಾ ಜೊತೆ ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಅಂತಹ ಘಟಾನುಘಟಿ ಕಲಾವಿದರುಗಳ ದಂಡು ಕೆಡಿ ಸಿನಿಮಾದಲ್ಲಿದೆ. ಅರ್ಜುನ್ ಜನ್ಯ ಸಂಗೀತ, ಜೋಗಿ ಪ್ರೇಮ್ ನಿರ್ದೇಶನ, ಸಾಹಿತ್ಯ ಚಿತ್ರಕ್ಕಿದೆ. ಕ್ರಾಂತಿ ಕುಮಾರ್ ಮಾಸ್ ಡೈಲಾಗ್ಸ್ ಜೊತೆ ರಿಷ್ಮಾ ನಾಣಯ್ಯ ಗ್ಲಾಮರ್ ಝಲಕ್ ಕೂಡ ಇರಲಿದೆ. ಈಗಾಗ್ಲೇ ಟೀಸರ್, ಸಾಂಗ್ಸ್ ಹಾಗೂ ಮೇಕಿಂಗ್ ಮಸ್ತ್ ಮ್ಯಾಜಿಕ್ ಮಾಡಿದ್ದು, ಸೆನ್ಸಾರ್ ಲಾಜಿಕ್ ಆತಂಕ ಮೂಡಿಸಿದೆ.
ವಿಜಯ್ ಜನನಾಯಗನ್ ರೀತಿ ಇದು ಕೂಡ ಸೆನ್ಸಾರ್ ಪ್ರಮಾಣ ಪತ್ರ ಪಡೆಯೋದು ತಡವಾದ್ರೆ, ರಿಲೀಸ್ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಆದ್ರೆ ಕೆವಿಎನ್ನ ನಿಜಕ್ಕೂ CBFC ಟಾರ್ಗೆಟ್ ಮಾಡಿಲ್ಲ ಅನ್ನೋದಾದ್ರೆ, ಕೆಡಿ ಚಿತ್ರಕ್ಕೆ ಆದಷ್ಟು ಬೇಗ ಸೆನ್ಸಾರ್ ಪತ್ರ ನೀಡಬೇಕಿದೆ. ಇಲ್ಲವಾದಲ್ಲಿ ಇದು ಬೇರೆಯದ್ದೇ ರೂಪ ಪಡೆಯೋದ್ರಲ್ಲಿ ಅನುಮಾನವೇ ಇಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





