ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ಹಕ್ಕಿಜ್ವರದ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲ ತಿಂಗಳುಗಳ ಹಿಂದೆ ನವಿಲುಗಳ ಸರಣಿ ಸಾವುಗಳು ಸಂಭವಿಸಿದ್ದವು. ಇದೀಗ ನೆಲಮಂಗಲ ಹಾಗೂ ಮಾಗಡಿ ಅರಣ್ಯ ವಲಯ ಪ್ರದೇಶಗಳಲ್ಲಿ ಮತ್ತೆ ನವಿಲುಗಳ ಸರಣಿ ಸಾವು ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನವಿಲುಗಳು ಸಾವನ್ನಪ್ಪುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಹಕ್ಕಿಜ್ವರ (Bird Flu) ಸೋಂಕಿನ ಶಂಕೆ ವ್ಯಕ್ತವಾಗಿದೆ.
- ನೆಲಮಂಗಲ ಮತ್ತು ಮಾಗಡಿ ಅರಣ್ಯ ವಲಯದಲ್ಲಿ ನವಿಲುಗಳ ಸರಣಿ ಸಾವು
- ಹಕ್ಕಿಜ್ವರ ಸೋಂಕಿನ ಶಂಕೆಯಿಂದ ತನಿಖೆ ಆರಂಭ
- ಇದುವರೆಗೆ 30ಕ್ಕೂ ಹೆಚ್ಚು ನವಿಲುಗಳ ಸಾವಿನ ಮಾಹಿತಿ
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ಇದುವರೆಗೆ 30ಕ್ಕೂ ಹೆಚ್ಚು ನವಿಲುಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಎಲ್ಲಾ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಮೃತಪಟ್ಟ ನವಿಲುಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಸಾವಿಗೆ ನಿಖರ ಕಾರಣ ಏನು ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.
ಈ ಮೊದಲು ತುಮಕೂರು ಭಾಗದಲ್ಲಿ ಹಕ್ಕಿಜ್ವರದ ಆತಂಕ ಎದುರಾಗಿತ್ತು. ಇದೀಗ ಅದೇ ರೀತಿಯ ಲಕ್ಷಣಗಳೊಂದಿಗೆ ನೆಲಮಂಗಲ ಅರಣ್ಯ ವಲಯದಲ್ಲೂ ನವಿಲುಗಳ ಸಾವು ಸಂಭವಿಸುತ್ತಿರುವುದು ಅರಣ್ಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಯ ಆತಂಕವನ್ನು 4ಹೆಚ್ಚಿಸಿದೆ.
ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ನವಿಲುಗಳು ಹೆಚ್ಚಾಗಿ ಕಂಡುಬರುವ ಪ್ರದೇಶಗಳಲ್ಲಿ ನಿಗಾವಹಿಸಿದ್ದು, ಯಾವುದೇ ಸತ್ತ ಅಥವಾ ಅಸ್ವಸ್ಥ ಪಕ್ಷಿ ಕಂಡುಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಹಕ್ಕಿಜ್ವರ ದೃಢಪಟ್ಟರೆ ಸೋಂಕು ಮತ್ತಷ್ಟು ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ನಿಗಾ ಹೆಚ್ಚಿಸಲಾಗಿದ್ದು, ನವಿಲುಗಳ ಸಾವಿನ ಹಿಂದಿನ ನಿಜವಾದ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ತುಮಕೂರಿನಲ್ಲಿ ಕೆಲ ತಿಂಗಳುಗಳ ಹಿಂದೆ 44 ನವಿಲುಗಳು ಸಾವನ್ನಪ್ಪಿದ್ದವು. ಈ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ದೃಢಪಟ್ಟಿತ್ತು. ನಂತರ ಕೋಳಿಗಳ ಸರಣಿ ಸಾವು ಸಂಭವಿಸಿತ್ತು. ಈ ಕೇಳಿಗಳ ಸಾವಿಗೂ ಹಕ್ಕಿ ಜ್ವರ ಕಾರಣ ಎಂದು ಹೇಳಲಾಗಿತ್ತು.





