ದೊಡ್ಡ ಸ್ಟಾರ್ಗಳಿಲ್ಲ..ದೊಡ್ಡ ಬಜೆಟ್ ಕೂಡ ಅಲ್ಲ. ಕಂಟೆಂಟ್ ಒಂದೇ ಇವ್ರ ಬಂಡವಾಳ. ಸ್ಯಾಂಡಲ್ವುಡ್ನಲ್ಲಿ ಎರಡು ಸಿನಿಮಾಗಳು ಸದ್ಯ ದೊಡ್ಡ ಮಟ್ಟಕ್ಕೆ ಟಾಕ್ ಕ್ರಿಯೇಟ್ ಮಾಡ್ತಿವೆ. ಒಂದು ಕಳೆದ ವಾರ ತೆರೆಕಂಡ ವಲವಾರ. ಮತ್ತೊಂದು ಮುಂದಿನ ವಾರ ತೆರೆಗೆ ಬರೋಕ್ಕೆ ಸಜ್ಜಾಗ್ತಿರೋ ಮಗ್ಗಿ ಪುಸ್ತಕ. ಚಿತ್ರಪ್ರೇಮಿಗಳು ನೋಡಲೇಬೇಕಾದ ಚಿತ್ರಗಳ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ.
ಇದು ಕಳೆದ ವಾರ ಅಂದ್ರೆ ಜನವರಿ 30ಕ್ಕೆ ತೆರೆಕಂಡ ವಲವಾರ ಅನ್ನೋ ಚಿತ್ರದ ಒಂದು ದೃಶ್ಯ. ಇಲ್ಲಿ ಅಬ್ಬರವಿಲ್ಲ ಆದ್ರೆ ಮಲೆನಾಡಿನ ಪ್ರಶಾಂತತೆ ಮಡುಗಟ್ಟಿದೆ. ಇಲ್ಲಿ ಕತೆಯಿಲ್ಲ, ಆದ್ರೆ ಹಳ್ಳಿಯ ಮುಗ್ದ ಬದುಕೇ ಅನಾವರಣಗೊಂಡಿದೆ. ಹೆಸರಾಂತ ಪರಿಣಿತ ನಟ ನಟಿಯರಿಲ್ಲ. ಆದ್ರೆ ಪ್ರತಿ ಪಾತ್ರದ ಹೊಸಬರ ನಟನೆ ಯಾರಿಗೂ ಕಮ್ಮಿಯಿಲ್ಲ. ಒಬ್ಬೊಬ್ಬರೂ ಪಾತ್ರವನ್ನೇ ಅಕ್ಷರಶಃ ಜೀವಿಸಿದ್ದಾರೆ. ಹೊರಗೆ ಕರೆದುಕೊಂಡು ಹೋದ ಗಬ್ಬದ ಹಸು, ಕಳೆದು ಹೋದಾಗ ತಂದೆ ಹೊಡೆಯುತ್ತಾನೆ ಎಂಬ ಭಯದಲ್ಲಿ ಒಬ್ಬ ಪುಟ್ಟ ಹುಡುಗ ಹೇಗೆಲ್ಲಾ ಪರದಾಡುತ್ತಾನೆ ಎಂಬುದೇ ಎಳೆ. ಇಲ್ಲಿ ನಮಗೆ ಗೊತ್ತಿಲ್ಲದಂತೆ ನಾವು ಆ ಹಸು ಹುಡುಕುವಲ್ಲಿ ಹುಡುಗನಿಗೆ ಸಹಾಯ ಮಾಡೋಣ ಎಂದು ಪರದೆಯಲ್ಲಿ ಹುಡುಕುತ್ತಾ ಮೈಯೆಲ್ಲಾ ಕಣ್ಣಾಗುತ್ತೇವೆ.
ಎಲ್ಲರ ದಿಲ್ ದೋಚಿದ ವಲವಾರ..ಮಗ್ಗಿ ಪುಸ್ತಕ ಲೋಡಿಂಗ್
ಸ್ಟಾರ್ಸ್ ಇಲ್ಲ..ಬಿಗ್ ಬಜೆಟ್ ಅಲ್ಲ..ಕಂಟೆಂಟ್ ಇವ್ರ ತಾಕತ್ತು
ಆ ಆತಂಕದಲ್ಲೂ ಹಳ್ಳಿಗಳ ಜನಜೀವದಲ್ಲಿ ಹಾಸು ಹೊಕ್ಕಾಗಿರುವ ಸಹಜ ಹಾಸ್ಯ ಮತ್ತೆ ಮತ್ತೆ ಕಚಗುಳಿ ಕೊಟ್ಟು ನಗಿಸುತ್ತದೆ. ಮಕ್ಕಳಾದ ಕುಂಡೇಸಿ, ಕೋಸುಡಿ ಪಾತ್ರಗಳ ಜೊತೆ ಯದುಕುಮಾರನ ಪಾತ್ರ, ಮಮತೆಯೇ ಮೈವೆತ್ತ ಅಸಹಾಯಕ ತಾಯಿಯ ಪಾತ್ರ ವಿಶೇಷವಾಗಿ ಮನಸಲ್ಲಿ ಉಳಿಯುತ್ತವೆ. ಸಿನಿಮಾ ಮುಗಿದಾಗ ಪರದೆಯ ಮೇಲೂ, ನೋಡುಗರೆದೆಯಲ್ಲೂ ಕೆನೆಗಟ್ಟಿ ಉಳಿಯೋದು ಶುದ್ಧ ಪ್ರೀತಿ, ಮಮತೆ, ಪ್ರಾಮಾಣಿಕತೆಗಳು, ಮಿಳಿತಗೊಂಡ ನಿಷ್ಕಲ್ಮಷ ಭಾವುಕತೆಯಷ್ಟೇ.
ಚಿತ್ರದ ಕಥೆ,ಮೇಕಿಂಗ್, ಅಭಿನಯ, ಸಂಭಾಷಣೆ, ಆಶಯ ಎಲ್ಲದರಲ್ಲೂ ದಟ್ಟವಾಗಿ ಕಂಡಿದ್ದು ಮಾತ್ರ ಅಪ್ಪಟ ಪ್ರಾಮಾಣಿಕತೆ. ಇದನ್ನು ಸಾಧ್ಯವಾಗಿಸಿದ ಸಂಪೂರ್ಣ ಶ್ರೇಯ ನಿರ್ದೇಶಕ ಸುತನ್ ಗೌಡ ಅವರಿಗೆ ಸೇರಬೇಕು. ನಿಜವಾಗಿಯೂ ಅವರ ತಂಡದ ಈ ಪರಿಯ ಪ್ರಾಮಾಣಿಕ ಪ್ರತಿಭೆ, ಪ್ರಯತ್ನಕ್ಕೆ ಗೆಲುವು ಕೊಡದಿದ್ದರೆ ಅದು ದ್ರೋಹವೇ ಸರಿ. ಹೀಗಂತ ಜನ ಮೆಚ್ಚುಗೆಗೆ ಪಾತ್ರವಾದ ವಲವಾರ ಚಿತ್ರವನ್ನ ನೋಡಿ, ಒಂದೊಳ್ಳೆ ಬರಹ ಬರೆದಿದ್ದಾರೆ ಚಿತ್ರ ಸಾಹಿತಿ ಕಮ್ ನಿರ್ದೇಶಕ ಕವಿರಾಜ್.
ವಲವಾರ ಕಥೆ ಇದಾದ್ರೆ..ಮುಂದೆ ರಿಲೀಸ್ ಆಗೋಕೆ ತುದಿಗಾಲಲ್ಲಿ ನಿಂತಿರೋ ಮಗ್ಗಿ ಪುಸ್ತಕ ಚಿತ್ರದ್ದೂ ಅದೇ ಕಥೆ. ಹೌದು.. ಸ್ಯಾಂಪಲ್ಸ್ ನಿಂದಲೇ ಚಿತ್ರಪ್ರೇಮಿಗಳ ನಾಡಿಮಿಡಿತ ಹೆಚ್ಚಿಸಿದೆ ಹರಿವರಾಸನಂ ನಿರ್ದೇಶನದ ಮಗ್ಗಿ ಪುಸ್ತಕ. ಬಿಟ್ಟವರ ಲೆಕ್ಕ ಇಟ್ಟವರು ಅನ್ನೋ ತಲೆಬರಹ ಇರೋ ಮಗ್ಗಿ ಪುಸ್ತಕ ಸಿನಿಮಾದ ಫಸ್ಟ್ಲುಕ್ನ ದೊಡ್ಮನೆ ಸೊಸೆ, ಪಿಆರ್ಕೆ ಒಡತಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರೇ ಬಿಡುಗಡೆ ಮಾಡಿದ್ರು. ಚಿತ್ರತಂಡ ಕೂಡ ರಾಜ್ಯದ ಹತ್ತಾರು ಜಾತ್ರೆ ಸುತ್ತಿ, ಅಲ್ಲಿ ರೆಟ್ರೋ ಶೈಲಿಯಲ್ಲಿ ಸಿನಿಮಾದ ಪ್ರಚಾರ ಕಾರ್ಯ ಮಾಡಿದೆ.
ಆಸ್ಕರ್ ಪ್ರಶಸ್ತಿ ವಿಜೇತ ಎಂ ಎಂ ಕೀರವಾಣಿ ಇಂದ ಹಿಡಿದು, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಕಂಬದ ರಂಗಯ್ಯ, ಅಂಕಿತಾ ಕುಂಡು, ನವೀನ್ ಸಜ್ಜು ಈ ಚಿತ್ರಕ್ಕೆ ಹಾಡುವ ಮೂಲಕ ಕೈ ಜೋಡಿಸಿರೋದು ವಿಶೇಷ. ನಾಲ್ಕು ಆಯಾಮಗಳಲ್ಲಿ ನಡೆಯೋ ಕಥೆ ಇದಾಗಿದ್ದು, ನಿರ್ದೇಶಕ ಹರಿವರಾಸನಂ ಅವರೇ ಬರೆದ ಕಾದಂಬರಿ ಆಧಾರಿತ ಸಿನಿಮಾ ಇದು. ತೆಲುಗಿನ ಅಲ್ಲು ಅರ್ಜುನ್ರ ವೇದಂ ಶೈಲಿಯ ಕನ್ನಡದ ಹೈಪರ್ ಲಿಂಕ್ ಮೂವಿ ಇದಾಗಿರಲಿದೆ.
ಕೊರೋನಾ ಕಾಲದಲ್ಲಿ ನಡೆದ.. ಕಂಡರೂ ಕಾಣದಂತಹ ವಿಷಯಗಳ ಚಿತ್ರಣದ ಅನುಭವ ನೀಡಲಿದೆ ಮಗ್ಗಿ ಪುಸ್ತಕ. ಮೊಬೈಲ್ನಲ್ಲಿ ಒಳ್ಳೆಯದೂ ಇರತ್ತೆ ಕೆಟ್ಟದ್ದೂ ಇರತ್ತೆ. ಒಳ್ಳೆಯದನ್ನ ಕೂಡಬೇಕು.. ಕೆಟ್ಟದ್ದನ್ನ ಕಳೆಯಬೇಕು. ಜ್ಞಾನ ಗುಣಿಸಬೇಕು.. ಅಜ್ಞಾನವನ್ನ ಭಾಗಿಸಬೇಕು. ಜೀವನ ಅನ್ನೋದೇ ಒಂದು ಮಗ್ಗಿ ಪುಸ್ತಕ ಅನ್ನೋದು ಈ ಚಿತ್ರದ ತಿರುಳು. ಎಂಪಿ ಫಿಲಂಸ್ ಬ್ಯಾನರ್ನಡಿ ಮುನೀಂದ್ರ ಡಿಸ್ಟ್ರಿಬ್ಯೂಟ್ ಮಾಡ್ತಿರೋ ಈ ಚಿತ್ರ ಫೆಬ್ರವರಿ 13ಕ್ಕೆ ತೆರೆಗೆ ಬರ್ತಿದ್ದು, ಹಂಡ್ರೆಡ್ ಪರ್ಸೆಂಟ್ ಕಾಡುವ ಚಿತ್ರ ಆಗುವ ಮುನ್ಸೂಚನೆ ನೀಡಿದೆ. ಸೋ ಇಲ್ಲಿ ಹೀರೋ, ಹೀರೋಯಿನ್, ಸ್ಟಾರ್ಡಮ್, ಬಜೆಟ್, ವೈಭವದ ಮೇಕಿಂಗ್ ಯಾವುದೂ ಇಲ್ಲದೆ, ಗಟ್ಟಿ ಕಥೆ, ಜೀವಂತಿಕೆಯ ಪಾತ್ರಗಳಿಂದ ಜನರನ್ನ ಗೆಲ್ತಿರೋ ಇಂತಹ ಚಿತ್ರಗಳನ್ನ ಕನ್ನಡಿಗರು ಕೈ ಹಿಡಿಯಬೇಕಿದೆ.





