ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಸದ್ಯ ‘ಟಾಕ್ಸಿಕ್’ (Toxic) ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರು ಯಶ್ ಕುರಿತು ನೀಡಿರುವ ಹೊಸ ಭವಿಷ್ಯ ವಿವಾದಕ್ಕೆ ಕಾರಣವಾಗಿದೆ. ಎರಡು ತಿಂಗಳ ಹಿಂದಿನ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದು, ಈಗ ಆ ವಿಡಿಯೋ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.
Toxic ಸಿನಿಮಾದ ತಯಾರಿಯಲ್ಲಿ ತೊಡಗಿಸಿಕೊಂಡಿರುವ ಯಶ್ ಬಗ್ಗೆ ಮಾತನಾಡಿರುವ ವೇಣು ಸ್ವಾಮಿ, “ಒಳ್ಳೆಯ ಸಿನಿಮಾ ಕೊಡಬೇಕೆಂಬ ಒತ್ತಡದಿಂದ ಯಶ್ ಸ್ವಲ್ಪ ಮಟ್ಟಿಗೆ ಡಿಪ್ರೆಷನ್ನಲ್ಲಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಈಗ ವೈರಲ್ ಆಗಿದ್ದು, ಯಶ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜ್ಯೋತಿಷಿ ವೇಣು ಸ್ವಾಮಿ ಹೇಳುವಂತೆ, ಯಶ್ ಅವರ ಮೇಲೆ ಅಭಿಮಾನಿಗಳ ನಿರೀಕ್ಷೆ ಬಹಳ ಹೆಚ್ಚಾಗಿದೆ. KGF ಸರಣಿಯ ಭರ್ಜರಿ ಯಶಸ್ಸಿನ ನಂತರ, ಮುಂದಿನ ಸಿನಿಮಾದ ಮೂಲಕವೂ ಅದೇ ಮಟ್ಟದ ಸಾಧನೆ ಮಾಡಬೇಕೆಂಬ ಒತ್ತಡ ನಟನ ಮೇಲೆ ಇದೆ ಎಂದು ಅವರು ಹೇಳಿದ್ದಾರೆ.
“ಯಶ್ ಕಷ್ಟಪಟ್ಟು ಮೇಲಕ್ಕೆ ಬಂದ ನಟ.. ಉತ್ತಮ ಕಥೆ, ಉತ್ತಮ ಸಿನಿಮಾ ಕೊಡಬೇಕು ಎಂಬ ಕಾರಣಕ್ಕೆ ಅವರು ಕೆಲ ವರ್ಷಗಳಿಂದ ತೆರೆ ಮೇಲೆ ಕಾಣಿಸಿಕೊಳ್ಳದೆ ತಾಳ್ಮೆಯಿಂದ ಕೆಲಸ ಮಾಡುತ್ತಿದ್ದಾರೆ,” ಎಂದು ವೇಣು ಸ್ವಾಮಿ ಹೇಳಿದ್ದಾರೆ.
ಎರಡು ತಿಂಗಳ ಹಿಂದಿನ ಸಂದರ್ಶನ ಈಗ ವೈರಲ್
ವೇಣು ಸ್ವಾಮಿ ನೀಡಿರುವ ಈ ಹೇಳಿಕೆ ಹೊಸದಾಗಿ ನೀಡಿದದ್ದಲ್ಲ. ಖಾಸಗಿ ಟಿವಿ ಚಾನೆಲ್ಗೆ ಸುಮಾರು ಎರಡು ತಿಂಗಳ ಹಿಂದೆ ನೀಡಿದ ಸಂದರ್ಶನದ ವೇಳೆ ಅವರು ಈ ಮಾತುಗಳನ್ನು ಹೇಳಿದ್ದರು. ಆದರೆ ಆ ವಿಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದೇ ಕಾರಣಕ್ಕೆ ಹೊಸ ಚರ್ಚೆಗೆ ಕಾರಣವಾಗಿದೆ. ಈ ನಡುವೆ, ಸೆಲೆಬ್ರಿಟಿಗಳ ಬಗ್ಗೆ ಜ್ಯೋತಿಷ್ಯ ಹೇಳಬಾರದು ಎಂಬ ನಿರ್ಬಂಧ ಇದ್ದರೂ ವೇಣು ಸ್ವಾಮಿ ಈ ವಿಷಯವನ್ನು ಪ್ರಸ್ತಾಪಿಸಿರುವುದೂ ವಿವಾದಕ್ಕೆ ಕಾರಣವಾಗಿದೆ.
ಅಭಿಮಾನಿಗಳ ಆಕ್ರೋಶ
ವೇಣು ಸ್ವಾಮಿ ಹೇಳಿಕೆಯ ನಂತರ ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ನಟನ ವೈಯಕ್ತಿಕ ಜೀವನ ಅಥವಾ ಮಾನಸಿಕ ಸ್ಥಿತಿಯ ಬಗ್ಗೆ ಊಹಾಪೋಹಗಳನ್ನು ಹರಡುವುದು ಸರಿಯಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಯಶ್ ತಮ್ಮ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಉತ್ತಮ ಸಿನಿಮಾ ನೀಡಲು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಡಿಪ್ರೆಷನ್ ಎಂದು ಹೇಳುವುದು ತಪ್ಪು” ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿವಾದಾತ್ಮಕ ಹೇಳಿಕೆ
ಈ ಸಂದರ್ಶನದಲ್ಲಿ ವೇಣು ಸ್ವಾಮಿ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ಕೂಡ ನೀಡಿದ್ದಾರೆ. “ನಾನು ತೆಲುಗು ನಟನ ಬಗ್ಗೆ ಇದ್ದರೆ ಮಾತನಾಡುತ್ತಿರಲಿಲ್ಲ. ಆದರೆ ಯಶ್ ಕನ್ನಡ ನಟನಾದ್ದರಿಂದಲೇ ಮಾತನಾಡುತ್ತಿದ್ದೇನೆ,” ಎಂದು ಅವರು ಹೇಳಿದ್ದು, ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.





