ಆ ದಿನಗಳು ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಅಂಡರ್ವರ್ಲ್ಡ್ ಕಥೆಗಳಿಗೆ ಹೊಸ ಭಾಷ್ಯ ಬರೆದಿದ್ದ ಡೈರೆಕ್ಟರ್ ಕೆ.ಎಂ.ಚೈತನ್ಯ, ಈಗ ಮತ್ತೊಮ್ಮೆ ಭೂಗತ ಜಗತ್ತಿನ ಕರಾಳ ಪುಟಗಳನ್ನು ತೆರೆದಿದ್ದಾರೆ. ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರೋ ‘ಬಲರಾಮನ ದಿನಗಳು’ ಈ ವಾರ ಥಿಯೇಟರ್ಗೆ ಅಪ್ಪಳಿಸಿದೆ. 80 ಮತ್ತು 90ರ ದಶಕದ ಬೆಂಗಳೂರು ಅಂಡರ್ವರ್ಲ್ಡ್, ಕೋತ್ವಾಲ್-ಜಯರಾಜ್ ಗ್ಯಾಂಗ್ ವಾರ್, ರಾಜಕೀಯ ಶೇಡ್ಯಂತ್ರದ ನಡುವೆ ಮೂಡಿಬಂದಿರೋ ಈ ಸಿನಿಮಾ ಪ್ರೇಕ್ಷಕರಿಗೆ ಕಿಕ್ ಕೊಡುತ್ತಾ..?
ನರ್ತಕಿ ಥಿಯೇಟರ್ನಲ್ಲಿ ‘ಬಲರಾಮನ ದಿನಗಳು’ ಮಾಸ್ ಹಬ್ಬ
ವಿನೋದ್ ಪ್ರಭಾಕರ್ ವೃತ್ತಿಜೀವನದ ಬೆಸ್ಟ್ ಪರ್ಫಾಮೆನ್ಸ್..!
80ರ ಬೆಂಗಳೂರಿನ ಕರಾಳ ಕಥೆ..ಅಂಡರ್ವರ್ಲ್ಡ್ ಇತಿಹಾಸ ಮತ್ತೆ ಜೀವಂತ..!
ಆ್ಯಕ್ಷನ್ ಪ್ರಿಯರಿಗೆ ಫುಲ್ ಮೀಲ್ಸ್ ಬಲರಾಮನ ದಿನಗಳು..!
ಕಥೆಯ ಒಳಗೆ ಹೋಗುವ ಮುನ್ನ ಈ ರಂಗಿನಾಟದ ಮುಖ್ಯ ಪಾತ್ರಗಳನ್ನು ನೋಡಿಬಿಡೋಣ. ಹಳ್ಳಿಯಿಂದ ಸಿಟಿಗೆ ಬರೋ ರಗಡ್ ಹುಡುಗ ಬಾಲ ಅಲಿಯಾಸ್ ಬಲರಾಮ ಆಗಿ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದಾರೆ. ಇನ್ನು ಅಂಡರ್ವರ್ಲ್ಡ್ ಡಾನ್ ಜಯರಾಜ್ ಪಾತ್ರದಲ್ಲಿ ಆಶಿಶ್ ವಿದ್ಯಾರ್ಥಿ, ಕೋತ್ವಾಲ್ ರಾಮಚಂದ್ರ ಪಾತ್ರದಲ್ಲಿ ಶರತ್ ಲೋಹಿತಾಶ್ವ ಮತ್ತು ಮುಂಬೈ ಲಿಂಕ್ ಇರೋ ಮುನ್ನಪ್ಪ ರೈ ಪಾತ್ರದಲ್ಲಿ ರಮೇಶ್ ಇಂದಿರಾ ಅಬ್ಬರಿಸಿದ್ದಾರೆ. ಇವರ ನಡುವೆ ರಿಟೈರ್ಡ್ ಮೇಜರ್ ದೇವಯ್ಯ ಆಗಿ ಅವಿನಾಶ್ ಮತ್ತು ಅವರ ಮುದ್ದಾದ ಮಗಳು, ಟೀಚರ್ ರೇವತಿ ಪಾತ್ರದಲ್ಲಿ ಪ್ರಿಯಾ ಆನಂದ್ ನಟಿಸಿದ್ದಾರೆ.
ಈಗ ಕಥೆಗೆ ಬರೋಣ. ಹಳ್ಳಿಯಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರೋ ಬಲರಾಮ, ಅನಿವಾರ್ಯವಾಗಿ ಕ್ರೈಮ್ ಲೋಕಕ್ಕೆ ಎಂಟ್ರಿ ಕೊಟ್ಟು ಜೈಲು ಸೇರ್ತಾನೆ. ಜೈಲಿನಲ್ಲಿ ಈತನಿಗೆ ಆಗಿನ ಕಾಲದ ಬಿಗ್ ಡಾನ್ ಜಯರಾಜ್ ಆಶ್ರಯ ಸಿಗುತ್ತೆ. ಇತ್ತ ಸಿಟಿ ಕಂಟ್ರೋಲ್ ಮಾಡೋಕೆ ಜಯರಾಜ್ ಮತ್ತು ಕೋತ್ವಾಲ್ ಗ್ಯಾಂಗ್ ನಡುವೆ ಯುದ್ಧ ನಡೀತಿದ್ರೆ, ಅತ್ತ ಮುಂಬೈನಿಂದ ಎಂಟ್ರಿ ಕೊಡೋ ಮುನ್ನಪ್ಪ ರೈ ಇಡೀ ಬೆಂಗಳೂರನ್ನು ತನ್ನ ಕಂಟ್ರೋಲ್ಗೆ ತಗೊಳ್ತಾನೆ. ಈ ರಕ್ತದ ಓಕುಳಿಯ ನಡುವೆ, ಮೇಜರ್ ದೇವಯ್ಯನ ಆಸ್ತಿ ವಿಚಾರದಲ್ಲಿ ಬಲರಾಮ ಸಹಾಯಕ್ಕೆ ನಿಲ್ಲುತ್ತಾನೆ. ಈತನ ನೇರ ನಡೆಗೆ ಮನಸೋತು ರೇವತಿ ಪ್ರೀತಿಸೋಕೆ ಶುರು ಮಾಡ್ತಾಳೆ. ಈ ಗ್ಯಾಂಗ್ ವಾರ್ ಮತ್ತು ಲವ್ ಸ್ಟೋರಿ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದೇ ಕ್ಲೈಮ್ಯಾಕ್ಸ್.
ಸಿನಿಮಾದ ಬಿಗ್ಗೆಸ್ಟ್ ಪ್ಲಸ್ ಪಾಯಿಂಟ್ ಅಂದ್ರೆ ಅದು ನಾಯಕ ವಿನೋದ್ ಪ್ರಭಾಕರ್ ಅವರ ರಗಡ್ ಪರ್ಫಾಮೆನ್ಸ್. ಆ್ಯಕ್ಷನ್ ಮಾತ್ರವಲ್ಲದೆ ಎಮೋಷನಲ್ ಸೀನ್ಗಳಲ್ಲೂ ವಿನೋದ್ ಸಖತ್ ಆಗಿ ಸ್ಕೋರ್ ಮಾಡಿದ್ದಾರೆ. ಇನ್ನು ಪ್ರಿಯಾ ಆನಂದ್ ತಮ್ಮ ಮುಗ್ಧ ನಟನೆಯಿಂದ ಗಮನ ಸೆಳೆದರೆ, ಆಶಿಶ್ ವಿದ್ಯಾರ್ಥಿ ಮತ್ತು ರಮೇಶ್ ಇಂದಿರಾ ಅಂಡರ್ವರ್ಲ್ಡ್ ಖದರ್ ಹೆಚ್ಚಿಸಿದ್ದಾರೆ. ನಿರ್ದೇಶಕ ಕೆ.ಎಂ.ಚೈತನ್ಯ 80ರ ದಶಕದ ಜೈಲಿನ ವಾತಾವರಣ, ರೌಡಿಗಳ ಅಟ್ಟಹಾಸ ಮತ್ತು ಪವಿತ್ರವಾದ ಪ್ರೀತಿಯನ್ನು ಅತ್ಯಂತ ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಹೆಚ್.ಸಿ.ವೇಣು ಕ್ಯಾಮೆರಾ ವರ್ಕ್ ಮತ್ತು ಸಂತೋಷ್ ನಾರಾಯಣನ್ ಬಿಜಿಎಂ ಸಿನಿಮಾವನ್ನು ನೆಕ್ಸ್ಟ್ ಲೆವೆಲ್ಗೆ ತಗೊಂಡು ಹೋಗಿದೆ.
ಸಿನಿಮಾದಲ್ಲಿ ಪಾಸಿಟಿವ್ ಅಂಶಗಳಿದ್ದರೂ ಕೆಲವು ಮೈನಸ್ ಪಾಯಿಂಟ್ಗಳು ಪ್ರೇಕ್ಷಕರಿಗೆ ಕಾಡದೇ ಇರಲ್ಲ. ನಿರ್ದೇಶಕ ಚೈತನ್ಯ ಅವರದ್ದೇ ಹಳೆಯ ಸೂಪರ್ ಇಟ್ ಸಿನಿಮಾ ‘ಆ ದಿನಗಳು’ ನೆರಳು ಈ ಚಿತ್ರದ ಮೇಲೂ ಬಿದ್ದಿರುವುದರಿಂದ, ಎಲ್ಲೋ ಒಂದು ಕಡೆ ಪ್ರೇಕ್ಷಕರಿಗೆ ಕಥೆ ಪ್ರಿಡಿಕ್ಟಬಲ್ ಅನ್ಸುತ್ತೆ. ಫಸ್ಟ್ ಹಾಫ್ನಲ್ಲಿ ಸಿನಿಮಾ ಕೊಂಚ ನಿಧಾನವಾಗಿ ಸಾಗುವುದರಿಂದ ಪ್ರೇಕ್ಷಕರ ತಾಳ್ಮೆಗೆ ಪರೀಕ್ಷೆ ಎದುರಾಗುತ್ತೆ. ಚಿತ್ರಕಥೆಯನ್ನು ಇನ್ನು ಸ್ವಲ್ಪ ಟೈಟ್ ಆಗಿ ಮಾಡಿಕೊಂಡಿದ್ದರೆ ಚಿತ್ರದ ತೂಕ ಮತ್ತಷ್ಟು ಹೆಚ್ಚುತ್ತಿತ್ತು ಅನ್ನೋದು ಸಿನಿಮಾ ಪ್ರೇಮಿಗಳ ಮಾತು.
ಅಂದಹಾಗೆ ಇಂದು 100ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಥಿಯೇಟರ್ ನಲ್ಲಿ ಬಿಡುಗಡೆಗೊಂಡಿದ್ದ ಬಲರಾಮನ ದಿನಗಳು ಚಿತ್ರಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದೆ. ಇಡೀ ತಂಡ ನರ್ತಕಿ ಚಿತ್ರಮಂದಿರಕ್ಕೆ ಆಗಮಿಸಿ ಪ್ರೇಕ್ಷಕರ ಜೊತೆ ಕೂತು ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ.
ಒಟ್ಟಾರೆಯಾಗಿ ಹೇಳೋದಾದ್ರೆ, ‘ಬಲರಾಮನ ದಿನಗಳು’ ಕೇವಲ ರಕ್ತಸಿಕ್ತ ಮಚ್ಚು-ಲಾಂಗುಗಳ ಕಥೆಯಲ್ಲ, ಇದರ ಹಿಂದೆ ರಾಜಕೀಯ ಮತ್ತು ಪ್ರೀತಿಯ ಸೂಕ್ಷ್ಮ ಎಳೆಯೂ ಇದೆ. ಹಳೇ ಬೆಂಗಳೂರಿನ ಭೂಗತ ಜಗತ್ತಿನ ರಿಯಲ್ ಹಿಸ್ಟರಿ ಇಷ್ಟಪಡೋ ಆ್ಯಕ್ಷನ್ ಪ್ರೇಮಿಗಳಿಗೆ ಮತ್ತು ವಿನೋದ್ ಪ್ರಭಾಕರ್ ಫ್ಯಾನ್ಸ್ಗೆ ಈ ಸಿನಿಮಾ ಇಷ್ಟವಾಗೋದು ಪಕ್ಕಾ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





