ಬೆಂಗಳೂರು, ಮಾರ್ಚ್ 12: ದೇಶದ ಹಲವು ನಗರಗಳಲ್ಲಿ ಎಲ್ಪಿಜಿ (LPG) ಸಿಲಿಂಡರ್ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಗ್ಯಾಸ್ ಬುಕ್ಕಿಂಗ್ ಮಾಡಲು ಪರದಾಡುತ್ತಿರುವ ಪರಿಸ್ಥಿತಿ ಉಂಟಾಗಿದೆ. ಹೋಟೆಲ್ಗಳು, ರೆಸ್ಟೋರೆಂಟ್ಗಳು, ಹಾಸ್ಟೆಲ್ಗಳು ಹಾಗೂ ಪಿಜಿಗಳು ಗ್ಯಾಸ್ ಕೊರತೆಯಿಂದ ತಾತ್ಕಾಲಿಕವಾಗಿ ಬಾಗಿಲು ಮುಚ್ಚುತ್ತಿರುವ ಘಟನೆಗಳು ಕೂಡ ವರದಿಯಾಗುತ್ತಿವೆ. ಈ ಪರಿಸ್ಥಿತಿ ಕೋವಿಡ್-19 ಸಮಯದಲ್ಲಿ ಕಂಡಿದ್ದ ಸಂಕಷ್ಟವನ್ನು ಮತ್ತೆ ನೆನಪಿಸುತ್ತಿದೆ.
ಆದರೆ ಇದೇ ಪರಿಸ್ಥಿತಿಯನ್ನು ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ‘ನಾಳೆಯೇ ಎಲ್ಪಿಜಿ ಡೆಲಿವರಿ’, ‘ತಕ್ಷಣ ಸಿಲಿಂಡರ್ ಬೇಕಾದರೆ ಈಗಲೇ ಹಣ ಪಾವತಿಸಿ’ ಎಂಬ ರೀತಿಯ ಜಾಹೀರಾತುಗಳು ಹಾಗೂ ಮೆಸೇಜ್ಗಳು ಜನರ ಮೊಬೈಲ್ಗಳಿಗೆ ಬರುತ್ತಿದ್ದು, ಅಧಿಕಾರಿಗಳು ಇದನ್ನು ವಂಚನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯುದ್ಧದ ಪರಿಣಾಮದಿಂದ ಪೂರೈಕೆ ಆತಂಕ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಹಾಗೂ ಅಮೆರಿಕಾ ನಡುವಿನ ಸಂಘರ್ಷದಿಂದ ಜಾಗತಿಕ ತೈಲ ಮತ್ತು ಗ್ಯಾಸ್ ಪೂರೈಕೆ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಭಾರತದ ಕೆಲವು ನಗರಗಳಲ್ಲಿ LPG ಸಿಲಿಂಡರ್ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಜನರು ಗ್ಯಾಸ್ ಬುಕ್ಕಿಂಗ್ ಮಾಡಲು ಹೆಚ್ಚು ಪ್ರಯತ್ನಿಸುತ್ತಿದ್ದಾರೆ.
ಈ ಬೇಡಿಕೆಯನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಹೊಸ ರೀತಿಯ ವಂಚನೆಗಳಿಗೆ ಕೈಹಾಕಿದ್ದಾರೆ. ಗ್ಯಾಸ್ ಬುಕ್ಕಿಂಗ್ ಸೇವೆಗಳಿಗಾಗಿ ಆನ್ಲೈನ್ನಲ್ಲಿ ಹುಡುಕುತ್ತಿರುವ ಜನರನ್ನು ಟಾರ್ಗೆಟ್ ಮಾಡಿ ನಕಲಿ ವೆಬ್ಸೈಟ್ಗಳು ಮತ್ತು ಜಾಹೀರಾತುಗಳನ್ನು ಸೃಷ್ಟಿಸಲಾಗುತ್ತಿದೆ.
WhatsApp ಮತ್ತು SMS ಮೂಲಕ ಮೋಸದ ಜಾಲ
ಸಾಮಾನ್ಯವಾಗಿ ಈ ವಂಚನೆಗಳು WhatsApp ಫಾರ್ವರ್ಡ್ಗಳು, SMS ಸಂದೇಶಗಳು ಅಥವಾ ಸೋಷಿಯಲ್ ಮೀಡಿಯಾ ಜಾಹೀರಾತುಗಳ ಮೂಲಕ ಹರಡುತ್ತಿವೆ. ‘ತಕ್ಷಣ ಗ್ಯಾಸ್ ಸಿಲಿಂಡರ್ ಕೊಡುತ್ತೇವೆ’, ‘ಅತ್ಯಾವಶ್ಯಕ ಸೇವೆ, ಸೀಮಿತ ಸ್ಟಾಕ್’ ಎಂಬ ರೀತಿಯಲ್ಲಿ ಜನರನ್ನು ಆಕರ್ಷಿಸುವ ಸಂದೇಶಗಳನ್ನು ಕಳುಹಿಸಲಾಗುತ್ತದೆ.
ಈ ಮೆಸೇಜ್ಗಳಲ್ಲಿ ನೀಡಲಾಗುವ ಲಿಂಕ್ಗಳು ಅಧಿಕೃತ ಗ್ಯಾಸ್ ಕಂಪನಿಗಳ ವೆಬ್ಸೈಟ್ಗಳಂತೆ ಕಾಣುವ ನಕಲಿ ಪೋರ್ಟಲ್ಗಳಿಗೆ ಕರೆದೊಯ್ಯುತ್ತವೆ. ಅಲ್ಲಿಗೆ ತೆರಳಿದ ನಂತರ ‘ತಕ್ಷಣದ ಡೆಲಿವರಿ’ ಹೆಸರಿನಲ್ಲಿ ಮುಂಗಡ ಹಣ ಪಾವತಿಸಲು ಕೇಳಲಾಗುತ್ತದೆ. ಒಮ್ಮೆ ಹಣ ಪಾವತಿಸಿದ ಬಳಿಕ ಸಿಲಿಂಡರ್ ದೊರೆಯುವುದಿಲ್ಲ ಮತ್ತು ಆ ವೆಬ್ಸೈಟ್ಗಳು ಕೂಡ ಕಾಣಿಸಿಕೊಳ್ಳುವುದಿಲ್ಲ.
ಮುಂಗಡ ಹಣ ಪಾವತಿಸಿದರೆ ನಷ್ಟ ಖಚಿತ
ಅಧಿಕಾರಿಗಳ ಪ್ರಕಾರ, ಅಧಿಕೃತ ಗ್ಯಾಸ್ ಕಂಪನಿಗಳ ವೆಬ್ಸೈಟ್ ಅಥವಾ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಹೊರತುಪಡಿಸಿ ಬೇರೆ ಯಾವುದೇ ವೆಬ್ಸೈಟ್ನಲ್ಲಿ LPG ಬುಕ್ಕಿಂಗ್ ಮಾಡಲು ಪ್ರಯತ್ನಿಸುವುದು ಅಪಾಯಕಾರಿ. ವಿಶೇಷವಾಗಿ ‘ಪ್ರಿ-ಬುಕಿಂಗ್’ ಅಥವಾ ‘ಎಮರ್ಜೆನ್ಸಿ ಡೆಲಿವರಿ’ ಹೆಸರಿನಲ್ಲಿ ಮುಂಗಡ ಹಣ ಪಾವತಿಸಲು ಕೇಳಿದರೆ ಅದು ವಂಚನೆ ಆಗಿರುವ ಸಾಧ್ಯತೆ ಹೆಚ್ಚು.
ಹೀಗಾಗಿ ಜನರು ಇಂತಹ ಜಾಹೀರಾತುಗಳು ಅಥವಾ ಸಂದೇಶಗಳನ್ನು ಕಂಡಾಗ ಎಚ್ಚರಿಕೆಯಿಂದಿರಬೇಕು. ಗ್ಯಾಸ್ ಬುಕ್ಕಿಂಗ್ ಮಾಡಲು ಸದಾ ಅಧಿಕೃತ ವೆಬ್ಸೈಟ್ ಅಥವಾ ಕಂಪನಿಯ ಅಪ್ಲಿಕೇಶನ್ ಬಳಸುವುದು ಅತ್ಯಂತ ಸುರಕ್ಷಿತ ವಿಧಾನವಾಗಿದೆ.
ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಬೇಡಿ
ಸೈಬರ್ ಅಪರಾಧಿಗಳು ಕೆಲವೊಮ್ಮೆ ಬ್ಯಾಂಕ್ ಖಾತೆ ವಿವರಗಳು, OTP, UPI ಪಿನ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಕೇಳಬಹುದು. ಯಾವುದೇ ಕಾರಣಕ್ಕೂ ಇಂತಹ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಯಾರಾದರೂ ‘ಗ್ಯಾಸ್ ಡೆಲಿವರಿ ಸಿಬ್ಬಂದಿ’ ಎಂದು ಹೇಳಿಕೊಂಡು OTP ಅಥವಾ ಬ್ಯಾಂಕ್ ಮಾಹಿತಿ ಕೇಳಿದರೆ ತಕ್ಷಣ ಎಚ್ಚರಿಕೆಯಿಂದಿರಬೇಕು. ಇಂತಹ ಮಾಹಿತಿ ಹಂಚಿಕೊಂಡರೆ ಬ್ಯಾಂಕ್ ಖಾತೆಯಿಂದ ಹಣ ಕಳವಾಗುವ ಅಪಾಯವೂ ಇದೆ.
ಮೋಸವಾದರೆ ತಕ್ಷಣ ದೂರು ನೀಡಿ
ಈ ರೀತಿಯ ವಂಚನೆಗೆ ಒಳಗಾದರೆ ವಿಳಂಬ ಮಾಡದೆ ತಕ್ಷಣ ಕ್ರಮ ಕೈಗೊಳ್ಳಬೇಕು. ಸೈಬರ್ ಅಪರಾಧದ ಬಗ್ಗೆ ದೂರು ನೀಡಲು ಭಾರತ ಸರ್ಕಾರದ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930ಗೆ ಕರೆ ಮಾಡಬಹುದು.
ಅದೇ ರೀತಿ ರಾಷ್ಟ್ರೀಯ ಸೈಬರ್ ಕ್ರೈಂ ವರದಿ ಪೋರ್ಟಲ್ ಮೂಲಕವೂ ಆನ್ಲೈನ್ನಲ್ಲಿ ದೂರು ದಾಖಲಿಸಲು ಅವಕಾಶ ಇದೆ. ಸಮಯಕ್ಕೆ ಸರಿಯಾಗಿ ದೂರು ನೀಡಿದರೆ ಹೆಚ್ಚಿನ ಆರ್ಥಿಕ ನಷ್ಟವನ್ನು ತಪ್ಪಿಸುವುದರ ಜೊತೆಗೆ ಅಪರಾಧಿಗಳನ್ನು ಪತ್ತೆಹಚ್ಚಲು ಸಹಾಯವಾಗುತ್ತದೆ.





