ಬೆಂಗಳೂರು: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಈಗಾಗಲೇ ಆಟಗಾರರ ಟ್ರೇಡಿಂಗ್ ಮತ್ತು ನಾಯಕತ್ವದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೀಗ ರಾಜಸ್ಥಾನ ರಾಯಲ್ಸ್ನ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಬರಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಆದರೆ, ಅವರು ಒಂದು ಷರತ್ತು ಇಟ್ಟಿದ್ದು, ಅದು ತಂಡದ ಮಾಲಕಿ ನೀತಾ ಅಂಬಾನಿ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮುಂಬೈ ಇಂಡಿಯನ್ಸ್ನ 19ನೇ ಸೀಸನ್ ನಿರಾಸೆ
19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪಾಲಿಗೆ ನಿರಾಸೆಯೇ ಉಳಿಯಿತು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 4 ಗೆಲುವು ಮತ್ತು 10 ಸೋಲುಗಳನ್ನು ಅನುಭವಿಸಿತು. ಕೇವಲ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದು ತಂಡವು ತನ್ನ ಅಭಿಯಾನವನ್ನು ಅಂತ್ಯಗೊಳಿಸಿತು. ಈ ನಿರಾಸೆಯಿಂದ ತಂಡದಲ್ಲಿ ಹಲವು ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ.
ಹಾರ್ದಿಕ್ ಮತ್ತು ಸೂರ್ಯಕುಮಾರ್ ಹೊರನಡೆ
ಹಾರ್ದಿಕ್ ಪಾಂಡ್ಯ ಈಗಾಗಲೇ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಹೋಗಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಅವರು ತಂಡ ತೊರೆದರೆ ನಾಯಕತ್ವ ಸಿಗಬಹುದು ಎಂದು ಸೂರ್ಯಕುಮಾರ್ ಯಾದವ್ ಕನಸು ಕಂಡಿದ್ದರು. ಆದರೆ, ಮುಂಬೈ ಇಂಡಿಯನ್ಸ್ ನಿರ್ವಹಣೆ ಅವರಿಗೆ ಶಾಕ್ ನೀಡಲು ಮುಂದಾಗಿದೆ. ವರದಿಗಳ ಪ್ರಕಾರ, ಭಾರತ ಟಿ20 ತಂಡದ ಉಪನಾಯಕ ತಿಲಕ್ ವರ್ಮಾಗೆ ಮುಂಬರುವ ಐಪಿಎಲ್ ಸೀಸನ್ನಲ್ಲಿ ನಾಯಕತ್ವ ಕಟ್ಟಲು ನೀತಾ ಅಂಬಾನಿ ಯೋಜಿಸಿದ್ದಾರೆ. ಇದರಿಂದ ಸೂರ್ಯಕುಮಾರ್ ಯಾದವ್ ಕೂಡಾ ಮುಂಬೈಗೆ ಗುಡ್ ಬೈ ಹೇಳುವ ಸಾಧ್ಯತೆಯಿದೆ.
ಮತ್ತೆ ಮುಂದೆ ಬಂದ ಯಶಸ್ವಿ ಜೈಸ್ವಾಲ್
ಈ ಎಲ್ಲಾ ಬದಲಾವಣೆಗಳ ನಡುವೆ, ಕಳೆದ ವರ್ಷವೇ ಮುಂಬೈ ಇಂಡಿಯನ್ಸ್ ತಂಡವು ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಕರೆತರಲು ಪ್ರಯತ್ನಿಸಿತ್ತು. ಆದರೆ ಆಗ ಜೈಸ್ವಾಲ್ ಅವರು ಆ ಕೊಡುಗೆಯನ್ನು ನಿರಾಕರಿಸಿದ್ದರು. ಯಾಕೆಂದರೆ, ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡ ಬಿಡುವ ಮೂಲಕ ನಾಯಕತ್ವ ಖಾಲಿಯಾಗಬಹುದೆಂಬ ನಿರೀಕ್ಷೆಯಲ್ಲಿ ಅವರು ತಮ್ಮ ತಂಡದಲ್ಲೇ ಉಳಿದುಕೊಂಡಿದ್ದರು.
ಆದರೆ, 19ನೇ ಸೀಸನ್ ಆರಂಭಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ನಿರ್ವಹಣೆ ರಿಯಾನ್ ಪರಾಗ್ ಅವರಿಗೆ ನಾಯಕತ್ವದ ಪಟ್ಟವನ್ನು ಕಟ್ಟಿತು. ಇದರಿಂದಾಗಿ ಜೈಸ್ವಾಲ್ ಅವರ ನಾಯಕತ್ವದ ಕನಸು ಭಗ್ನವಾಯಿತು.
ಜೈಸ್ವಾಲ್ ಇಟ್ಟ ಕಂಡೀಷನ್
ಈಗ ಮತ್ತೆ ಮುಂಬೈ ಇಂಡಿಯನ್ಸ್ ಮುಂದೆ ಜೈಸ್ವಾಲ್ ಸಿದ್ಧರಿದ್ದಾರೆ. ಆದರೆ, ಅವರು ತಾವು ಮುಂಬೈ ತಂಡಕ್ಕೆ ಬರಬೇಕಾದರೆ ‘ನನಗೆ ನಾಯಕತ್ವ ನೀಡಬೇಕು’ ಎಂಬ ಷರತ್ತನ್ನು ಮುಂದಿಟ್ಟಿದ್ದಾರೆ. ತಮ್ಮನ್ನು ಮುಂಬೈ ಇಂಡಿಯನ್ಸ್ ತಂಡ ಸೇರ್ಪಡೆಗೊಳಿಸಿಕೊಂಡರೆ ನಾಯಕನಾಗುವ ಅವಕಾಶ ಕಲ್ಪಿಸಬೇಕು ಎಂದು ಜೈಸ್ವಾಲ್ ಆಗ್ರಹಿಸಿದ್ದಾರೆ.
ಇದು ನೀತಾ ಅಂಬಾನಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಯಾಕೆಂದರೆ, ಈಗಾಗಲೇ ಅವರು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತಿಲಕ್ ವರ್ಮಾ ಅವರನ್ನು ನಾಯಕನನ್ನಾಗಿ ಮಾಡಲು ತೀರ್ಮಾನಿಸಿದ್ದರು. ಹಾರ್ದಿಕ್ ಮತ್ತು ಸೂರ್ಯಕುಮಾರ್ ಹೊರಹೋಗುವ ಹಿನ್ನೆಲೆ ತಿಲಕ್ ನಾಯಕನಾಗಲು ಬಹುತೇಕ ಖಚಿತವಾಗಿತ್ತು. ಆದರೆ ಜೈಸ್ವಾಲ್ ಅವರ ಈ ಡಿಮ್ಯಾಂಡ್ ಎಲ್ಲಾ ಯೋಜನೆಗಳಿಗೂ ಅಡ್ಡಿಯಾಗುವಂತಿದೆ.
ಇನ್ನು, ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಈಗ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ. ತಿಲಕ್ ಅವರಿಗೇ ನಾಯಕತ್ವ ನೀಡುವುದೇ, ಅಥವಾ ಜೈಸ್ವಾಲ್ ಅವರ ಡಿಮ್ಯಾಂಡ್ ಒಪ್ಪಿಕೊಂಡು ಅವರನ್ನು ತಂಡಕ್ಕೆ ತರುವುದೇ ಎಂಬುದು ನೀತಾ ಅಂಬಾನಿ ಅವರ ಮುಂದಿರುವ ಸವಾಲು. ಈಗಾಗಲೇ ಮುಂಬೈ ತಂಡದಲ್ಲಿ ನಾಯಕತ್ವದ ಖಾಲಿ ಅಂತರವನ್ನು ಭರ್ತಿ ಮಾಡಲು ಹಲವು ಆಯ್ಕೆಗಳಿವೆ. ಆದರೆ, ಇಬ್ಬರು ದೊಡ್ಡ ಆಟಗಾರರ ನಡುವಿನ ಈ ನಾಯಕತ್ವದ ಸ್ಪರ್ಧೆಯಲ್ಲಿ ಮುಂಬೈ ಇಂಡಿಯನ್ಸ್ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.





