ಹಾವೇರಿ (ಜುಲೈ 20) : ಕೆಲವು ಅಪಘಾತಗಳು ಕೇವಲ ಜೀವಹಾನಿಯನ್ನಷ್ಟೇ ಉಂಟುಮಾಡುವುದಿಲ್ಲ, ವ್ಯಕ್ತಿಯ ಕನಸುಗಳನ್ನೂ ಧ್ವಂಸಗೊಳಿಸುತ್ತವೆ. ಕೆಲವೊಮ್ಮೆ ಅದು ಆ ವ್ಯಕ್ತಿಯ ಜೀವನದಲ್ಲಿ ಮರೆಯಲಾಗದ ಘಟನೆಯಾಗಿ ಮಾಡಿಬಿಡುತ್ತದೆ. ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಇಚ್ಚಂಗಿಯ ಸದಾನಂದ ಅಮರಾಪುರ ಅವರ ಜೀವನದಲ್ಲೂ ಅಂಥದೇ ಒಂದು ದುರ್ಘಟನೆ ಸಂಭವಿಸಿತ್ತು. ಆ ಅಪಘಾತದಲ್ಲಿ ಅವರ ಅಜ್ಜಿ ಮೃತಪಟ್ಟರು. ಜೊತೆಗೆ ಒಲಿಂಪಿಕ್ಸ್ನಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವರ ಬಹುಕಾಲದ ಕನಸೂ ಅಲ್ಲಿಯೇ ಅಂತ್ಯಗೊಂಡಿತು.
ಆದರೆ ಸದಾನಂದ ಸೋಲನ್ನು ಒಪ್ಪಿಕೊಳ್ಳಲಿಲ್ಲ. ಜೀವನದ ಕಠಿಣ ಸವಾಲುಗಳ ನಡುವೆಯೂ ಅವರು ಹೊಸ ಗುರಿಯೊಂದಿಗೆ ಮತ್ತೆ ಹೋರಾಟ ಆರಂಭಿಸಿದರು. ಮಧ್ಯರಾತ್ರಿ ಎರಡು ಗಂಟೆಗೆ ಎದ್ದು ಬೆಳಿಗ್ಗೆ ಎಂಟು ಗಂಟೆಯವರೆಗೆ ಓಟದ ಅಭ್ಯಾಸ ಮಾಡುತ್ತಿದ್ದರು. ನಂತರ ನೇರವಾಗಿ ತಮ್ಮ ಕಚೇರಿ ಕೆಲಸಕ್ಕೆ ತೆರಳುತ್ತಿದ್ದರು. ಈ ನಿರಂತರ ಪರಿಶ್ರಮದ ಹಿಂದೆ ಅವರ ಪತ್ನಿ ಮುಕ್ತಾ ಅವರ ಅಚಲ ಬೆಂಬಲ ದೊಡ್ಡ ಶಕ್ತಿಯಾಗಿತ್ತು.
ಆರಂಭದಲ್ಲಿ ಪತಿಯ ಕ್ರೀಡಾಸಕ್ತಿಯ ಬಗ್ಗೆ ಅಸಮಾಧಾನ ಹೊಂದಿದ್ದ ಮುಕ್ತಾ, ಬಳಿಕ ಅವರ ಕನಸನ್ನು ನನಸಾಗಿಸಲು ಮುಂದಾದರು. ಸದಾನಂದ ಅಭ್ಯಾಸಕ್ಕೆ ತೆರಳುವ ಮುನ್ನವೇ ಎದ್ದು ಆಹಾರ ಸಿದ್ಧಪಡಿಸುತ್ತಿದ್ದರು. ಸೈಕಲ್ ತರಬೇತಿಯ ವೇಳೆ ಕಾರು ಚಾಲನೆ ಮಾಡಿ ಅವರ ಹಿಂದೆ ಸಾಗುತ್ತಾ ನೀರು, ಆಹಾರ ಮತ್ತು ಗ್ಲುಕೋಸ್ ಒದಗಿಸುತ್ತಿದ್ದರು. ಮನೆಯ ಜವಾಬ್ದಾರಿ, ಮಕ್ಕಳ ಆರೈಕೆ ಹಾಗೂ ಬ್ಯಾಂಕ್ ಉದ್ಯೋಗದ ನಡುವೆಯೂ ಅವರು ಪತಿಯ ಕನಸಿಗೆ ಸದಾ ಬೆನ್ನೆಲುಬಾಗಿ ನಿಂತರು.
2026ರ ಮೇ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಅಲ್ಟ್ರಾಮೆನ್ ಸ್ಪರ್ಧೆಯಲ್ಲಿ ಸದಾನಂದ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಹವಾಮಾನಕ್ಕೆ ಹೊಂದಿಕೊಳ್ಳಲು ಮುಂಚಿತವಾಗಿಯೇ ತೆರಳಿ ಸಿದ್ಧತೆ ನಡೆಸಿದ ಅವರು, ಮೂರು ದಿನಗಳ ಕಠಿಣ ಸ್ಪರ್ಧೆಯ ನಂತರ ಗುರಿ ತಲುಪಿ ‘ಅಲ್ಟ್ರಾಮೆನ್’ ಪದವಿಯನ್ನು ತಮ್ಮದಾಗಿಸಿಕೊಂಡರು.
ಒಮ್ಮೆ ಅಪಘಾತ ಕಸಿದುಕೊಂಡಿದ್ದ ಕನಸನ್ನು ಅವರು ಮತ್ತೆ ಕಟ್ಟಿಕೊಂಡಿದ್ದಾರೆ. “ಅಲ್ಟ್ರಾಮೆನ್ ಪದವಿ ಸಿಕ್ಕಿದೆ. ಆದರೆ ನನ್ನ ಪಯಣ ಇನ್ನೂ ಮುಗಿದಿಲ್ಲ” ಎನ್ನುವ ಸದಾನಂದ ಅವರ ಮಾತು, ಛಲ ಮತ್ತು ಪರಿಶ್ರಮ ಇದ್ದರೆ ಯಾವುದೇ ಕನಸನ್ನು ಮತ್ತೆ ಸಾಕಾರಗೊಳಿಸಬಹುದು ಎಂಬ ಪ್ರೇರಣಾದಾಯಕ ಸಂದೇಶ ನೀಡುತ್ತದೆ.





