ನವದೆಹಲಿ : ಮೊಬೈಲ್ ಫೋನ್ಗಳಲ್ಲಿ ಸಂಚಾರ ಸಾಥಿ ಆಪ್ಲಿಕೇಶನ್ ಅನ್ನು ಸಕ್ರಿಯಗೊಳಿಸುವುದು ಸಂಪೂರ್ಣವಾಗಿ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ಕೇಂದ್ರ ದೂರಸಂಪರ್ಕ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇದನ್ನು ಖಚಿತಪಡಿಸಿದ್ದಾರೆ. ಫೋನ್ ತಯಾರಕರಿಗೆ ಈ ಆಪ್ಲಿಕೇಶನ್ ಅನ್ನು ಮೊದಲೇ ಇನ್ಸ್ಟಾಲ್ ಮಾಡುವಂತೆ ನೀಡಿದ ನಿರ್ದೇಶನಗಳಿಂದ ಉಂಟಾದ ಗೊಂದಲ ಮತ್ತು ವಿವಾದದ ನಡುವೆಯೇ ಕೇಂಧ್ರ ಸರ್ಕಾರ ಈ ಸ್ಪಷ್ಟೀಕರಣ ನೀಡಿದೆ.
ಸಚಿವ ಸಿಂಧಿಯಾ ಅವರು ಹೇಳಿದರು, ಸಂಚಾರ ಸಾಥಿ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸುವುದು ಐಚ್ಛಿಕ. ಇದು ಕಡ್ಡಾಯವಲ್ಲ.ನಿಮಗೆ ಇಷ್ಟವಿದ್ದರೆ ಬಳಸಬಹುದು ಇಲ್ಲವಾದರೆ ಅದನ್ನ ಡಿಲೀಟ್ ಮಾಡಬಹುದು.
ಈ ಸ್ಪಷ್ಟೀಕರಣಕ್ಕೆ ಮುನ್ನ, ದೂರಸಂಪರ್ಕ ಇಲಾಖೆ (DoT) ಎಲ್ಲಾಸ್ಮಾರ್ಟ್ಫೋನ್ ತಯಾರಕರಿಗೂ ಹೊಸ ಮೊಬೈಲ್ ಸಾಧನಗಳಲ್ಲಿ ಸಂಚಾರ ಸಾಥಿ ಆಪ್ಲಿಕೇಶನ್ ಅನ್ನು ಪೂರ್ವ-ಇನ್ಸ್ಟಾಲ್ ಮಾಡುವಂತೆ ಆದೇಶಿಸಿತ್ತು. ಈಗಾಗಲೇ ಬಳಕೆಯಲ್ಲಿರುವ ಫೋನ್ಗಳು ಸಾಫ್ಟ್ವೇರ್ ನವೀಕರಣದ ಮೂಲಕ ಈ ಆಪ್ ಅನ್ನು ಪಡೆಯಲಿದ್ದವು.
ಈ ಸಂದರ್ಭದಲ್ಲಿ ಸಿಂಧಿಯಾ ಅವರು, ಈ ನಿರ್ದೇಶನದ ಹಿಂದಿನ ಏಕೈಕ ಉದ್ದೇಶ ಸೈಬರ್ ವಂಚನೆ ತಡೆಗಟ್ಟುವುದು ಮಾತ್ರ ಎಂದು ಸ್ಪಷ್ಟಪಡಿಸಿದರು. ಸೈಬರ್ ವಂಚನೆಯನ್ನು ನಿಗ್ರಹಿಸಲು ವಿನ್ಯಾಸಗೊಳಿಸಲಾದ ಈ ಸಾಧನಕ್ಕೆ (ಆಪ್ ಗೆ) ವ್ಯಾಪಕ ಪ್ರವೇಶ ಖಚಿತಪಡಿಸಿಕೊಳ್ಳುವುದೇ ನಮ್ಮ ಗುರಿ. ಇದರಿಂದ ನಾಗರಿಕರು ಸುರಕ್ಷಿತರಾಗಬೇಕು, ಎಂದರು. ಸರ್ಕಾರದ ಕಡೆಯಿಂದ ಬಳಕೆದಾರರ ಗೌಪ್ಯತೆಯನ್ನು ಉಲ್ಲಂಘಿಸುವ ಯಾವುದೇ ಉದ್ದೇಶವಿಲ್ಲ ಎಂದು ಅವರು ಖಾತರಿ ನೀಡಿದರು.
ಈ ಸ್ಪಷ್ಟೀಕರಣದಿಂದ, ಸಾಮಾನ್ಯ ಮೊಬೈಲ್ ಬಳಕೆದಾರರು ಈಗ ಸಂಚಾರ ಸಾಥಿ ಆಪ್ ಅನ್ನು ತಮ್ಮ ಇಷ್ಟದಂತೆ ನಿರ್ವಹಿಸಲು ಸ್ವತಂತ್ರರಾಗಿದ್ದಾರೆ. ನಿಮ್ಮ ಹೊಸ ಫೋನ್ನಲ್ಲಿ ಈ ಆಪ್ ಕಾಣಿಸಿಕೊಂಡರೆ, ಅದನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಸಂಪೂರ್ಣವಾಗಿ ಅಳಿಸಬಹುದು. ಆಪ್ ಅನ್ನು ಇನ್ಸ್ಟಾಲ್ ಮಾಡಿದ್ದರೆ ಬಳಸಬೇಕೆಂಬುದು ಕಡ್ಡಾಯವಲ್ಲ. ಈ ಆಪ್ಲಿಕೇಶನ್ ಮುಖ್ಯವಾಗಿ ಡುಪ್ಲಿಕೇಟ್/ಕಳ್ಳ ಐಎಮ್ಇಐ ಸಂಖ್ಯೆಯ ಫೋನ್ಗಳನ್ನು ಗುರುತಿಸಿ, ಸೈಬರ್ ಅಪರಾಧಗಳಿಂದ ನಾಗರಿಕರನ್ನು ರಕ್ಷಿಸುವ ಉದ್ದೇಶ ಹೊಂದಿದೆ.
ತಯಾರಕರು ಪೂರ್ವ-ಇನ್ಸ್ಟಾಲೇಶನ್ ಆದೇಶವನ್ನು ಪಾಲಿಸಬೇಕಾಗಿದ್ದರೂ, ಬಳಕೆದಾರರಿಗೆ ಅದನ್ನು ಸಕ್ರಿಯಗೊಳಿಸದಿರಲು ಅಥವಾ ತೆಗೆದುಹಾಕಲು ಸಂಪೂರ್ಣ ಹಕ್ಕು ಇದೆ ಎಂಬ ಸಂದೇಶ ಈಗ ಸ್ಪಷ್ಟವಾಗಿದೆ.





