ಪುರುಲಿಯಾ: ಸಿನಿಮಾ ಕಥೆಯಂತೆ ಅನಿಸುವಂತಹ ಒಂದು ಅಪರೂಪದ ಘಟನೆ ಪಶ್ಚಿಮ ಬಂಗಾಳ ಪುರುಲಿಯಾದ ಗೋಬರಂದ ಗ್ರಾಮದಲ್ಲಿ ನಡೆದಿದೆ. 37 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ವ್ಯಕ್ತಿಯೊಬ್ಬ, ಈಗ ವೃದ್ಧನಾಗಿ ತನ್ನ ಕುಟುಂಬದೊಂದಿಗೆ ಮತ್ತೆ ಮನೆ ಸೇರಿದ್ದಾರೆ.
ವಿವೇಕ್ ಚಕ್ರವರ್ತಿ ಅವರು 1988ರಲ್ಲಿ ಕೇವಲ 37 ವರ್ಷದ ಯುವಕರಾಗಿದ್ದಾಗ ಮನೆ ಬಿಟ್ಟು ಹೋಗಿದ್ದರು. ಆ ನಂತರ ಸಂಪರ್ಕ ಕಡಿದು, ಎಲ್ಲಿದ್ದರು, ಏನು ಮಾಡುತ್ತಿದ್ದಾರೆ ಎಂಬುದೇ ಯಾರಿಗೂ ಗೊತ್ತಿರಲಿಲ್ಲ. ಆದರೆ ದಶಕಗಳು ಕಳೆದವು. ಪೋಷಕರು, ತಮ್ಮಂದಿರು ಎಲ್ಲೆಡೆ ಹುಡುಕಿದರು. ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರು, ಯಾವ ಸುಳಿವು ಸಿಗಲಿಲ್ಲ.
ಈಗ, 2025ರಲ್ಲಿ ನಡೆಯುತ್ತಿರುವ SIR ಕಾರ್ಯಕ್ರಮದಲ್ಲಿ ಗೋಬರಂದ ಗ್ರಾಮದ 245/72 ಬೂತ್ನ ಬೂತ್ ಲೆವೆಲ್ ಆಫೀಸರ್ (BLO) ಆಗಿ ಪ್ರಾಥಮಿಕ ಶಾಲಾ ಶಿಕ್ಷಕ ಪ್ರದೀಪ್ ಚಕ್ರವರ್ತಿ ಕೆಲಸ ಮಾಡುತ್ತಿದ್ದಾರೆ. ಪ್ರದೀಪ್ ಅವರೇ ವಿವೇಕ್ ಅವರ ಕಿರಿಯ ಸಹೋದರ. ಎಲ್ಲಾ SIR ಫಾರ್ಮ್ಗಳ ಮೇಲೆ ಅವರ ಹೆಸರು ಮತ್ತು ಮೊಬೈಲ್ ಸಂಖ್ಯೆ ಮುದ್ರಿತವಾಗಿತ್ತು.
ಕೋಲ್ಕತ್ತಾದಲ್ಲಿ ವಾಸಿಸುತ್ತಿರುವ ವಿವೇಕ್ ಅವರ ಮಗ ಮತದಾರರ ಪಟ್ಟಿಯಲ್ಲಿ ತಂದೆಯ ಹೆಸರು ಸೇರಿಸಲು ದಾಖಲೆಗಳ ಸಹಾಯಕ್ಕಾಗಿ ಆ ಫಾರ್ಮ್ನಲ್ಲಿದ್ದ ಸಂಖ್ಯೆಗೆ ವಾಟ್ಸಪ್ ಮೆಸೇಜ್ ಮಾಡಿದ. ಮತದಾರರ ಪಟ್ಟಿ ಸಂಬಂಧಿತ ಕೆಲಸದಲ್ಲಿ ನಿರತರಾಗಿದ್ದ ಪ್ರದೀಪ್ ಬಾಬು ಅದನ್ನು ಗಮನಿಸಲಿಲ್ಲ. ಮರುದಿನ ಬೆಳಿಗ್ಗೆ 8 ಗಂಟೆಗೆ ಅದೇ ನಂಬರ್ನಿಂದ ಕರೆ ಬಂದಿತ್ತು.
“ಇದು ಗೋಬರಂದ ಗ್ರಾಮವೇ? ನೀವು ಬಿಎಲ್ಒ ಆಗಿದ್ದೀರಾ?” ಎಂದು ಪ್ರಶ್ನಿಸಿದ ಆ ವ್ಯಕ್ತಿ ತನ್ನ ಗುರುತನ್ನು ಹೇಳದೆ ಮಾತು ಶುರುಮಾಡಿದ. ಪ್ರದೀಪ್ ಬಾಬು ದೃಢವಾಗಿ “ಹೌದು” ಎಂದು ಉತ್ತರಿಸಿದರು. “ನಿಮಗೆ ವಿವೇಕ್ ಚಕ್ರವರ್ತಿ ಗೊತ್ತಾ?” ಎಂದು ಆ ವ್ಯಕ್ತಿ ಕೇಳಿದ. ಇದಕ್ಕೆ ಪ್ರದೀಪ್ ಬಾಬು, “ಇಲ್ಲಿ ಮೂರು ಮಂದಿ ವಿವೇಕ್ ಚಕ್ರವರ್ತಿಗಳಿದ್ದಾರೆ, ನೀವು ಯಾರ ಬಗ್ಗೆ ಕೇಳುತ್ತಿದ್ದೀರಾ?” ಎಂದು ತಕ್ಷಣ ಉತ್ತರಿಸಿದರು.
ಅದಕ್ಕೆ ಆ ವ್ಯಕ್ತಿ “ದೇವೇಂದ್ರನಾಥ ಚಕ್ರವರ್ತಿಗಳ ಮಗ ವಿವೇಕ್.” ಎಂದು ಹೇಳಿದ. ಒಂದು ಕ್ಷಣ ಪ್ರದೀಪ್ ಬಾಬು ಮೌನವಾಗಿ “ನೀವು ಯಾರು ಸಾರ್…?” ಎಂದು ಅವರು ಕೇಳಿದರು. “ನಾನು ವಿವೇಕ್ ಚಕ್ರವರ್ತಿಯ ಮಗ.” ಎಂದು ಆ ವ್ಯಕ್ತಿ ಉತ್ತರಿಸಿದ್ದಾನೆ. “ನನ್ನನ್ನು ಸರ್ ಎಂದು ಕರೆಯಬೇಡ, ನಾನು ನಿನ್ನ ಚಿಕ್ಕಪ್ಪ!” ಎಂದು ಕಣ್ಣೀರಿಡುತ್ತಾ ಹೇಳಿದರು.
ನಂತರ ಪ್ರದೀಪ್ ತಮ್ಮ ಅಣ್ಣ ವಿವೇಕ್ ಅವರಿಗೆ ಫೋನ್ ಕೊಟ್ಟರು. “ಅಣ್ಣ, ಯಾವಾಗ ಮನೆಗೆ ಬರುತ್ತೀಯಾ?” ಎಂದು ಪ್ರದೀಪ್ ಕೇಳಿದಾಗ, “ನಾನು ಬೇಗ ಬರುತ್ತೇನೆ” ಎಂದ ವಿವೇಕ್ ಹೇಳಿದರು. ಅದಕ್ಕೆ “ದಿನಾಂಕ ಹೇಳು” ಎಂದು ಪ್ರದೀಪ್ ಹಠ ಮಾಡಿದರು. ವಿವೇಕ್ ನವೆಂಬರ್ 26 ರಂದು ಮನೆಗೆ ಬರುವುದಾಗಿ ಹೇಳಿದರು.
ಈ ಸುದ್ದಿ ತಿಳಿದ ತಕ್ಷಣ ಗೋಬರಂದ ಗ್ರಾಮದ ಚಕ್ರವರ್ತಿ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. 37 ವರ್ಷಗಳ ನಂತರ ನಾನು ಮನೆಗೆ ಮರಳುತ್ತಿದ್ದೇನೆ. SIR ಪ್ರಕ್ರಿಯೆ ಇಲ್ಲದಿದ್ದರೆ ಇದು ಎಂದೂ ಸಾಧ್ಯವಾಗುತ್ತಿರಲಿಲ್ಲ. ಚುನಾವಣಾ ಆಯೋಗಕ್ಕೆ ನನ್ನ ಧನ್ಯವಾದಗಳು” ಎಂದು ಭಾವುಕರಾದ ವಿವೇಕ್ ಚಕ್ರವರ್ತಿ ಹೇಳಿದ್ದಾರೆ.





