ಇಸ್ಲಾಮಾಬಾದ್, ಮಾರ್ಚ್ 19: ಭಾರತದ ಪ್ರಮುಖ ಶತ್ರು ಮತ್ತು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ಜೀವನದ ಕೊನೆಯ ಅಧ್ಯಾಯ ಶುರುವಾಗಿದೆಯೇ ಎಂಬ ಚರ್ಚೆ ಈಗ ಜೋರಾಗಿದೆ. ಪವಿತ್ರ ರಂಜಾನ್ ಮಾಸದ ಅಂತ್ಯದ ವೇಳೆ ಮಸೂದ್ ಅಜರ್ ಎಂದು ಹೇಳಲಾದ 21 ನಿಮಿಷಗಳ ಆಡಿಯೋ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಆಡಿಯೋದಲ್ಲಿ ಮಾತನಾಡುತ್ತಿರುವ ವ್ಯಕ್ತಿ ಮಸೂದ್ ಅಜರ್ ಆಗಿದ್ದರೆ, ಅದು ಅವರ ಅಂತಿಮ ದಿನಗಳು ಸಮೀಪಿಸುತ್ತಿವೆ ಎಂಬುದಕ್ಕೆ ಸ್ಪಷ್ಟ ಸಂಕೇತವಾಗಿದೆ. ಆಡಿಯೋದುದ್ದಕ್ಕೂ ಅವರು ನಿರಂತರವಾಗಿ ಕೆಮ್ಮುತ್ತಿರುವುದು ಕೇಳಿಸುತ್ತದೆ.. ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ತನಗಾಗಿ ತನ್ನ ಬೆಂಬಲಿಗರು ಮತ್ತು ಅನುಯಾಯಿಗಳು ಪ್ರಾರ್ಥನೆ ಸಲ್ಲಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಆಪರೇಷನ್ ಸಿಂದೂರ್ ನ ಆಘಾತ
ಕೆಲವು ತಿಂಗಳುಗಳ ಹಿಂದೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂದೂರ್’ (ಸಿಂಧೂರ್ ಕಾರ್ಯಾಚರಣೆ) ಮಸೂದ್ ಅಜರ್ ನ ಬದುಕನ್ನೇ ಬದಲಾಯಿಸಿಬಿಟ್ಟಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಈ ದಾಳಿಯಲ್ಲಿ ತನ್ನ ಅಪಾರ ಬಂಧು-ಬಳಗ ಮತ್ತು ಹತ್ತಿರದ ಸಹಚರರನ್ನು ಕಳೆದುಕೊಂಡ ಮಸೂದ್ ಅಜರ್, ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಪೂರ್ಣ ಕುಸಿದಿದ್ದಾರೆ. ಈ ಹಿನ್ನೆಲೆಯಲ್ಲೇ ಅವರು ತಮ್ಮ ಅನುಯಾಯಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ ಎನ್ನಲಾಗಿದೆ.
EXCLUSIVE‼️
🔴JeM Trt Masood Azhar’s most recent audio confirms he is SICK.⚠️The audio in NOT AI generated
This audio was released for Pakistan backed JeM cadre as Ramadan comes to an end a day ago.
In case of death Masood Azhar will be replaced by his… https://t.co/YMfFlgVboR pic.twitter.com/Lr4gG3FyVR
— Levina🇮🇳 (@LevinaNeythiri) March 18, 2026
ಉತ್ತರಾಧಿಕಾರಿ ಯಾರು?
ವೈರಲ್ ಆಗಿರುವ ಆಡಿಯೋದ ಪ್ರಮುಖ ಆಕರ್ಷಣೆಯೆಂದರೆ ಜೈಷ್ ನ ಭವಿಷ್ಯದ ಬಗ್ಗೆ ಮಸೂದ್ ಸೂಚನೆ ನೀಡಿದ್ದಾರೆ. ತಾನು ಇನ್ನಿಲ್ಲದಾದರೆ, ಸಂಘಟನೆಯ ಹೊಣೆಗಾರಿಕೆಯನ್ನು ತನ್ನ ಸಹೋದರ ರೌಫ್ ಅಜರ್ಗೆ ವಹಿಸಬೇಕು ಎಂದು ಅವರು ತನ್ನ ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ. ಆದರೆ ಮಸೂದ್ ಅಜರ್ ಗೆ ಇಬ್ಬರು ಸಹೋದರರಿದ್ದು, ಅಬ್ದುಲ್ ರೌಫ್ ಅಜರ್ ಜೊತೆಗೆ ಅಮ್ಮದ್ ಅಜರ್ ಕೂಡಾ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಹಿರಿಯ ಸಹೋದರನ ನಂತರ ಕಿರಿಯ ಸಹೋದರನಿಗೆ ಅಧಿಕಾರ ಹಸ್ತಾಂತರವಾಗುವುದು ಸಹಜ ಪ್ರಕ್ರಿಯೆಯಾದರೂ, ರೌಫ್ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವುದು ಸಂಘಟನೆಯೊಳಗೆ ಭವಿಷ್ಯದಲ್ಲಿ ವಂಶವಾದದ ಪೈಪೋಟಿಗೆ ಕಾರಣವಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಈ ಆಡಿಯೋ ನಿಜವೇ ಅಥವಾ ಸುಳ್ಳೇ ಎಂಬುದು ಇನ್ನೂ ಖಚಿತವಾಗಿ ದೃಢಪಟ್ಟಿಲ್ಲ. ಆದರೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಬೆಂಬಲದೊಂದಿಗೆ ದಶಕಗಳಿಂದ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಮಸೂದ್ ಅಜರ್ ನ ಈ ರೀತಿಯ ಆಡಿಯೋ ಹೊರಬಿದ್ದಿರುವುದು ಒಂದು ದೊಡ್ಡ ಬೆಳವಣಿಗೆಯಾಗಿದೆ. ಒಂದು ವೇಳೆ ಅವರು ನಿಜಕ್ಕೂ ಅಸ್ವಸ್ಥರಾಗಿದ್ದು, ಕೊನೆಯುಸಿರೆಳೆದರೆ, ಅದು ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಶಾಂತಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಲಿದೆ.





