ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಯಶವಾಡಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಹನುಮಾನ್ ದೇವಾಲಯದಲ್ಲಿ ಭೀಕರ ದುರಂತ ಸಂಭವಿಸಿದ್ದು, 6 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ದೇವಾಲಯದ ಮೇಲ್ಛಾವಣಿ ಕುಸಿದುಬಿದ್ದು ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಮತ್ತಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವೇಳೆ ದೇವಾಲಯದ ಆವರಣದಲ್ಲಿ ಸಭಾಮಂಟಪ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಶನಿವಾರದ ಕಾರಣ ಭಕ್ತರ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿತ್ತು. ಕೀರ್ತನೆ ಹಾಗೂ ಮಹಾಪ್ರಸಾದ ವಿತರಣೆ ಕಾರ್ಯಕ್ರಮವೂ ನಡೆಯುತ್ತಿದ್ದುದರಿಂದ ದೇವಾಲಯದ ಮುಂದೆ ಭಾರಿ ಜನಸಂದಣಿ ಉಂಟಾಗಿತ್ತು. ಇದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಮೇಲ್ಛಾವಣಿ ಕುಸಿದುಬಿದ್ದು ಕ್ಷಣಾರ್ಧದಲ್ಲಿ ದುರಂತ ಸಂಭವಿಸಿದೆ.
ಪ್ರಸಾದ ಸ್ವೀಕರಿಸುತ್ತಿದ್ದ ಭಕ್ತರು ಹಾಗೂ ದೇವಾಲಯದ ಮುಂಭಾಗದಲ್ಲಿ ನಿಂತಿದ್ದವರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಸಿಮೆಂಟ್ ಕಲ್ಲುಗಳು ಹಾಗೂ ಕಬ್ಬಿಣದ ರಾಡ್ಗಳು ಬಿದ್ದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಗಳು ದೇವಾಲಯದ ಗರ್ಭಗುಡಿಯ ಎದುರು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಘಟನೆಯ ಬಳಿಕ ದೇವಾಲಯದ ಆವರಣದಲ್ಲಿ ಭಯಾನಕ ದೃಶ್ಯ ನಿರ್ಮಾಣವಾಗಿತ್ತು. ಜನರ ಚೀರಾಟ, ಓಡಾಟದಿಂದ ಗೊಂದಲದ ವಾತಾವರಣ ಉಂಟಾಯಿತು. ಸ್ಥಳೀಯರು ತಕ್ಷಣ ರಕ್ಷಣೆಗೆ ಧಾವಿಸಿದರೂ, ಅವಶೇಷಗಳಡಿ ಹಲವರು ಸಿಲುಕಿಕೊಂಡಿರುವ ದೃಶ್ಯ ಕಂಡು ಅವರು ಬೆಚ್ಚಿಬಿದ್ದಿದ್ದಾರೆ. ನಂತರ ವಿಷಯ ತಿಳಿದ ತಕ್ಷಣ ಪೊಲೀಸರು ಹಾಗೂ ಸ್ಥಳೀಯ ಆಡಳಿತದ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ತಕ್ಷಣವೇ ಕಾರ್ಯಾಚರಣೆ ಆರಂಭಿಸಿವೆ.
ಇದುವರೆಗೆ ಅವಶೇಷಗಳಡಿಯಿಂದ 6 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಗಾಯಗೊಂಡ 10 ಜನರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಯಾರಾದರೂ ಅವಶೇಷಗಳಡಿ ಸಿಲುಕಿಕೊಂಡಿರುವ ಸಾಧ್ಯತೆ ಇದ್ದು ಪರಿಶೀಲನೆ ನಡೆಯುತ್ತಿದೆ.
ಘಟನೆಯ ಕುರಿತು ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಪ್ರಕಾರ, ಮಳೆ ಮತ್ತು ತೇವಾಂಶದ ಕಾರಣದಿಂದ ನಿರ್ಮಾಣ ಹಂತದ ಮೇಲ್ಛಾವಣಿಯ ಬಲ ಕುಸಿತಗೊಂಡಿರಬಹುದು ಎಂದು ಶಂಕಿಸಲಾಗಿದೆ. ದೊಡ್ಡ ಶಬ್ದ ಕೇಳಿತು, ನೋಡಿದರೆ ಮೇಲ್ಛಾವಣಿ ಕುಸಿಯುತ್ತಿತ್ತು. ಕೆಲವರ ಮೇಲೆ ಸಿಮೆಂಟ್ ಕಲ್ಲುಗಳು ಬಿದ್ದವು, ಇನ್ನು ಕೆಲವರ ಮೇಲೆ ಕಬ್ಬಿಣದ ರಾಡ್ಗಳು ಬಿದ್ದವು. ಕ್ಷಣಾರ್ಧದಲ್ಲಿ ಎಲ್ಲೆಡೆ ಗೊಂದಲ ಹರಡಿತು ಎಂದು ಒಬ್ಬ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಮತ್ತೊಬ್ಬ ಯುವಕ ಮಾತನಾಡುತ್ತಾ, ಶನಿವಾರದ ವಿಶೇಷ ಕಾರ್ಯಕ್ರಮದ ಕಾರಣ ದೇವಾಲಯದಲ್ಲಿ ಭಕ್ತರ ತುಂಬು ಜನಸಂದಣಿ ಇತ್ತು ಎಂದು ತಿಳಿಸಿದ್ದಾರೆ. ಜನರು ಸರತಿಯಲ್ಲಿ ಪ್ರಸಾದಕ್ಕಾಗಿ ನಿಂತಿದ್ದಾಗಲೇ ಈ ದುರಂತ ಸಂಭವಿಸಿತು. ಯಾರಿಗೂ ಏನಾಗುತ್ತಿದೆ ಎಂಬುದೇ ತಿಳಿಯಲಿಲ್ಲಎಂದು ಅವರು ಹೇಳಿದ್ದಾರೆ. ಈ ದುರಂತದಿಂದ ಯಶವಾಡಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳು ಘಟನೆಗೆ ಕಾರಣಗಳ ಕುರಿತು ತನಿಖೆ ಆರಂಭಿಸಿದ್ದಾರೆ.





