ನವದೆಹಲಿ: ನೀಟ್ ಮರುಪರೀಕ್ಷೆಯ (NEET Re-Exam) ಕೇಂದ್ರ ಹಂಚಿಕೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಾಡಿರುವ ಯಡವಟ್ಟು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ನಾಗ್ಪುರದ (Nagur) ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಯುಎಇಯ ಅಬುಧಾಬಿಯಲ್ಲಿ (Abu Dhabi) ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಿರುವುದು ಬೆಳಕಿಗೆ ಬಂದಿದೆ. ಈ ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ದೇಶದ ಮಕ್ಕಳ ಭವಿಷ್ಯದ ಜೊತೆ ಜೂಜಾಡುವುದನ್ನು ಕೇಂದ್ರ ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಪೋಸ್ಟ್
ಕಳೆದ ಒಂದು ತಿಂಗಳಿನಿಂದ ಅತ್ಯಂತ ಶ್ರಮಪಟ್ಟು ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ನಾಗುರದ ವಿದ್ಯಾರ್ಥಿ, ಪರೀಕ್ಷೆಗಿಂತ ಕೇವಲ ಒಂದು ದಿನ ಮುಂಚಿತವಾಗಿ ತನ್ನ ಪ್ರವೇಶ ಪತ್ರವನ್ನು (Admit Card) ಡೌನ್ಲೋಡ್ ಮಾಡಿಕೊಂಡಿದ್ದಾನೆ. ಆದರೆ ಅದರಲ್ಲಿ ಪರೀಕ್ಷಾ ಕೇಂದ್ರ ಅಬುಧಾಬಿ ಎಂದು ನಮೂದಾಗಿರುವುದನ್ನು ಕಂಡು ಆತ ಹಾಗೂ ಆತನ ಕುಟುಂಬಸ್ಥರು ಸಂಪೂರ್ಣವಾಗಿ ಆಘಾತಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಕಳವಳ ಹಂಚಿಕೊಂಡಿರುವ ರಾಹುಲ್ ಗಾಂಧಿ, “ಆ ಬಡ ವಿದ್ಯಾರ್ಥಿಯ ಬಳಿ ಪಾಸ್ಪೋರ್ಟ್ ಕೂಡ ಇಲ್ಲ, ಅಷ್ಟು ದೂರ ವಿದೇಶಕ್ಕೆ ಕಳುಹಿಸಲು ಆತನ ಕುಟುಂಬದ ಹತ್ತಿರ ಹಣವೂ ಇಲ್ಲ ಮತ್ತು ಈಗ ಹೋಗಲು ಸಮಯವೂ ಉಳಿದಿಲ್ಲ” ಎಂದು ಹೇಳಿದ್ದಾರೆ.
नागपुर का एक बच्चा एक महीने से NEET re-exam की तैयारी कर रहा था।
कल परीक्षा से ठीक एक दिन पहले उसने admit card डाउनलोड किया। उसका सेंटर निकला – अबू धाबी।
न पासपोर्ट, न परिवार के पास विदेश भेजने के पैसे, न अब कोई वक़्त बचा है। वो रातभर रोता रहा, और परीक्षा देने से ही मना कर रहा… https://t.co/TJOHUBnFDB
— Rahul Gandhi (@RahulGandhi) June 20, 2026
ಇದರಿಂದ ತೀವ್ರ ಬೇಸರಗೊಂಡ ವಿದ್ಯಾರ್ಥಿ ಇಡೀ ರಾತ್ರಿ ಅತ್ತು ಈಗ ಪರೀಕ್ಷೆ ಬರೆಯುವುದನ್ನೇ ನಿಲ್ಲಿಸಿದ್ದಾನೆ. “ಆ ಮಗು ಅನುಭವಿಸುತ್ತಿರುವ ಮಾನಸಿಕ ಒತ್ತಡವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ” ಎಂದು ರಾಹುಲ್ ತಮ್ಮ ಪೋಸ್ಟ್ ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
“ಶಿಕ್ಷಣ ವ್ಯವಸ್ಥೆಯಲ್ಲ, ಶೋಷಣಾ ವ್ಯವಸ್ಥೆ”
ಸ್ವಂತ ಊರಿನಲ್ಲೇ ಪರೀಕ್ಷಾ ಕೇಂದ್ರ ನೀಡಲಾಗದ ಇಂತಹ ಕೆಟ್ಟ ವ್ಯವಸ್ಥೆಗೆ ಇಷ್ಟು ಪ್ರಮುಖವಾದ ಪರೀಕ್ಷೆಗಳನ್ನು ನಡೆಸುವ ಯಾವುದೇ ಹಕ್ಕಿಲ್ಲ ಎಂದು ಕಿಡಿಕಾರಿರುವ ಅವರು, ಪರೀಕ್ಷಾ ಕೇಂದ್ರವನ್ನು ತಲುಪಲು ಸಾಧ್ಯವಾಗದ ಪರಿಸ್ಥಿತಿಯನ್ನು ಯಾವುದೇ ವಿದ್ಯಾರ್ಥಿ ಎದುರಿಸಬಾರದು ಎಂದು ಒತ್ತಾಯಿಸಿದ್ದಾರೆ. ಆದರೆ NTA ಸಂಸ್ಥೆಯು ಸದ್ಯ ದೇಶದ ಮಕ್ಕಳು ಮತ್ತು ಪೋಷಕರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಇತ್ತೀಚೆಗಷ್ಟೇ ರಾಜಸ್ಥಾನದ ಕೋಟಾಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡ ಅವರು, ಭಾರತದ ಇಂದಿನ ಶಿಕ್ಷಣ ಕ್ಷೇತ್ರವು ಯುವ ಜನತೆಯನ್ನು ಕೈಬಿಡುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. “ಪ್ರಸ್ತುತ ದೇಶದಲ್ಲಿರುವುದು ಶಿಕ್ಷಣ ವ್ಯವಸ್ಥೆಯಲ್ಲ, ಬದಲಿಗೆ ಇಡೀ ಯುವ ಪೀಳಿಗೆಯ ಹಣ, ಸಮಯ ಮತ್ತು ನೆಮ್ಮದಿಯನ್ನು ಕಿತ್ತುಕೊಳ್ಳುವ ಶೋಷಣಾ ವ್ಯವಸ್ಥೆಯಾಗಿದೆ” ಎಂದು ಅವರು ತೀವ್ರ ಟೀಕೆ ಮಾಡಿದ್ದಾರೆ.
ಮಕ್ಕಳ ಭವಿಷ್ಯದ ಜೊತೆ ಆಟ ಆಡಬೇಡಿ
ನಮ್ಮ ದೇಶದ ಮಕ್ಕಳಿಗೆ ಅತ್ಯಂತ ಜವಾಬ್ದಾರಿಯುತ, ಸೂಕ್ಷ್ಮ ಹಾಗೂ ಪಾರದರ್ಶಕವಾದ ಪರೀಕ್ಷಾ ವ್ಯವಸ್ಥೆ ಸಿಗಬೇಕು. “ಮಕ್ಕಳ ಭವಿಷ್ಯದ ಜೊತೆ ಆಟವಾಡುವುದನ್ನು ನಿಲ್ಲಿಸುವವರೆಗೂ ಮತ್ತು ಅವರಿಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡಿಯೇ ತೀರುತ್ತೇವೆ” ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.





