ಮುಂಬೈ: ಬಾಲಿವುಡ್ನ ಬಹು ನಿರೀಕ್ಷಿತ ಸ್ಪೈ-ಥ್ರಿಲ್ಲರ್ ಸಿನಿಮಾ ‘ಧುರಂಧರ್’ ಬಿಡುಗಡೆಯಾದ ಬಳಿಕ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಡೆಸುತ್ತಿರುವ ಡಿ-ಕಂಪನಿ ಮತ್ತೆ ಆಕ್ಟಿವ್ ಆಗಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಚಿತ್ರದಲ್ಲಿನ ಕೆಲವು ದೃಶ್ಯಗಳು ಡಿ-ಕಂಪನಿಯ ಅಸಮಾಧಾನಕ್ಕೆ ಕಾರಣವಾಗಿದ್ದು, ಅದರ ಪರಿಣಾಮ ಮುಂಬೈನಲ್ಲಿ ತನ್ನ ಪ್ರಭಾವವನ್ನು ಮರುಸ್ಥಾಪಿಸಲು ಸಂಘಟನೆ ಹೊಸ ಕಾರ್ಯತಂತ್ರ ರೂಪಿಸಿದೆ ಎನ್ನಲಾಗಿದೆ.
‘ಧುರಂಧರ್’ ಚಿತ್ರದಲ್ಲಿ ‘ಬಡೇ ಸಾಹೇಬ್’ ಎಂಬ ಪಾತ್ರವನ್ನು ದಾವೂದ್ ಇಬ್ರಾಹಿಂಗೆ ಹೋಲಿಸಲಾಗಿದ್ದು, ಆ ಪಾತ್ರವನ್ನು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯಂತೆ ಚಿತ್ರಿಸಲಾಗಿದೆ ಎನ್ನಲಾಗುತ್ತಿದೆ. ಇದೇ ವಿಚಾರ ಡಿ-ಕಂಪನಿಯ ನಾಯಕರನ್ನು ಕೆರಳಿಸಿದ್ದು, “ದಾವೂದ್ ಇನ್ನೂ ಜೀವಂತವಾಗಿದ್ದಾನೆ ಹಾಗೂ ಸಂಪೂರ್ಣ ಆರೋಗ್ಯವಾಗಿದ್ದಾನೆ” ಎಂಬ ಸಂದೇಶವನ್ನು ಜನರಲ್ಲಿ ಬಿತ್ತರಿಸಲು ಸಂಘಟನೆ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಗುಪ್ತಚರ ವರದಿಗಳ ಪ್ರಕಾರ, ಮುಂಬೈನಲ್ಲಿ ತನ್ನ ಪ್ರಭಾವ ಕುಸಿಯುತ್ತಿರುವ ಹಿನ್ನೆಲೆ ಡಿ-ಕಂಪನಿ ಹೊಸ ಸದಸ್ಯರ ನೇಮಕಾತಿಗೆ ಒತ್ತು ನೀಡುತ್ತಿದೆ. ಇದುವರೆಗೆ ನೇಮಕಾತಿ ಕಾರ್ಯವನ್ನು ದಾವೂದ್ನ ಆಪ್ತ ಸಹಚರ ಛೋಟಾ ಶಕೀಲ್ಗೆ ಸೇರಿದ ಜಾಲ ನೋಡಿಕೊಳ್ಳುತ್ತಿತ್ತು. ಆದರೆ ಈಗ ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ತೊಡಗಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೊಸದಾಗಿ ಸೇರ್ಪಡೆಯಾಗುತ್ತಿರುವ ಯುವಕರಿಗೆ ನಿಜವಾದ ಉದ್ದೇಶವನ್ನು ಬಹಿರಂಗಪಡಿಸದೇ, ವಿವಿಧ ಸಾಮಾಜಿಕ ಮತ್ತು ಸ್ಥಳೀಯ ವಿಚಾರಗಳ ಹೆಸರಿನಲ್ಲಿ ಅವರನ್ನು ಸಂಘಟನೆಯತ್ತ ಸೆಳೆಯಲಾಗುತ್ತಿದೆ ಎನ್ನಲಾಗಿದೆ. ಮುಂಬೈನ ವಿವಿಧ ಪ್ರದೇಶಗಳಿಂದ ಆಯ್ಕೆ ಮಾಡಲಾಗಿರುವ ಕೆಲ ಯುವಕರನ್ನು ಇತ್ತೀಚೆಗೆ ನಡೆದ ಪ್ರತಿಭಟನೆಗಳಲ್ಲಿ ಬಳಸಿಕೊಳ್ಳಲಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ.
ಡಿ-ಕಂಪನಿಯ ಶಾರ್ಪ್ ಶೂಟರ್ ಎಂದು ಗುರುತಿಸಲ್ಪಟ್ಟಿರುವ ಮುನ್ನಾ ಜಿಂಗಾಡಾಗೆ ವಿಶೇಷ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಮುಂಬೈನಲ್ಲಿ ಭಯೋತ್ಪಾದಕ ಕೃತ್ಯಗಳು ಅಥವಾ ವಿಧ್ವಂಸಕ ಚಟುವಟಿಕೆಗಳಿಗೆ ಸಂಬಂಧಿಸಿದ ಸಂಚು ರೂಪಿಸುವ ಕೆಲಸವನ್ನು ಆತನಿಗೆ ವಹಿಸಲಾಗಿದೆ ಎನ್ನಲಾಗಿದೆ.
ಇತ್ತೀಚೆಗೆ ದೆಹಲಿ ಪೊಲೀಸರು ಭಯೋತ್ಪಾದನಾ ಸಂಚುವೊಂದನ್ನು ವಿಫಲಗೊಳಿಸಿದ ವೇಳೆ, ಪಾಕಿಸ್ತಾನದ ಐಎಸ್ಐ ಮತ್ತು ಮುಂಬೈ ಭೂಗತ ಜಗತ್ತಿನ ನಡುವೆ ಇರುವ ಸಂಪರ್ಕದ ಕುರಿತು ಹಲವು ಮಹತ್ವದ ಸುಳಿವುಗಳು ಲಭ್ಯವಾಗಿದ್ದವು. ಬಂಧಿತರ ವಿಚಾರಣೆ ವೇಳೆ ಡಿ-ಕಂಪನಿಯ ಹೊಸ ಚಟುವಟಿಕೆಗಳು ಮತ್ತು ನೇಮಕಾತಿ ಪ್ರಕ್ರಿಯೆಗಳ ಕುರಿತು ಮಾಹಿತಿ ಸಿಕ್ಕಿರುವುದಾಗಿ ವರದಿಯಾಗಿದೆ.
ಒಂದು ಕಾಲದಲ್ಲಿ ಮುಂಬೈ ಅಂಡರ್ವರ್ಡ್ ಮೇಲೆ ಬಲಿಷ್ಠ ಹಿಡಿತ ಹೊಂದಿದ್ದ ಡಿ-ಕಂಪನಿಯ ಪ್ರಭಾವ ಕಳೆದ ಕೆಲವು ವರ್ಷಗಳಿಂದ ಹಂತಹಂತವಾಗಿ ಕುಸಿಯುತ್ತಿದೆ. ಸುಲಿಗೆ, ಬೆದರಿಕೆ ಹಾಗೂ ಅಕ್ರಮ ವಹಿವಾಟುಗಳ ಮೇಲಿನ ನಿಯಂತ್ರಣವೂ ಹಿಂದಿನಷ್ಟು ಪರಿಣಾಮಕಾರಿ ಇಲ್ಲ. ಈ ಹಿನ್ನೆಲೆ ತನ್ನ ಇಮೇಜ್ ಪುನರ್ನಿರ್ಮಾಣಕ್ಕಾಗಿ ಹಾಗೂ ಯುವಕರನ್ನು ಸೆಳೆಯುವ ಉದ್ದೇಶದಿಂದ ಹೊಸ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಭದ್ರತಾ ಮೂಲಗಳು ಹೇಳುತ್ತಿವೆ.




