ರಾಯಚೂರು (ಜುಲೈ 23): ರಾಜ್ಯದಲ್ಲಿ ಮೊಟ್ಟೆ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳ ಅಕ್ಷರ ದಾಸೋಹ (ಮಧ್ಯಾಹ್ನದ ಊಟ) ಯೋಜನೆ ಅನುಷ್ಠಾನಕ್ಕೆ ತೊಂದರೆಯಾಗಿದ್ದು, ಅದರ ನೇರ ಹೊರೆ ಮುಖ್ಯ ಶಿಕ್ಷಕರ ಮೇಲೇ ಬೀಳುತ್ತಿದೆ. ಸರ್ಕಾರ ಒಂದು ಮೊಟ್ಟೆಗೆ ₹6 ಅನುದಾನ ನೀಡುತ್ತಿದ್ದರೆ, ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ ₹8 ರಿಂದ ₹9ಕ್ಕೆ ಏರಿಕೆಯಾಗಿದೆ. ಇದರಿಂದ ಪ್ರತಿಯೊಂದು ಮೊಟ್ಟೆಯ ಮೇಲೂ ಶಿಕ್ಷಕರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
- ಮೊಟ್ಟೆ ದರ ಏರಿಕೆಯಿಂದ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಆರ್ಥಿಕ ಹೊರೆ
- ಸರ್ಕಾರ ಪ್ರತಿ ಮೊಟ್ಟೆಗೆ ₹6 ಅನುದಾನ ನೀಡುತ್ತಿದ್ದು, ಮಾರುಕಟ್ಟೆ ದರ ₹8–₹9
- ಕೆಲವು ಶಿಕ್ಷಕರು ತಿಂಗಳಿಗೆ ₹8,000–₹10,000ವರೆಗೆ ಸ್ವಂತ ಹಣ ಖರ್ಚು
- ಕೆಲ ಶಾಲೆಗಳಲ್ಲಿ ಮೊಟ್ಟೆ ಬದಲು ಬಾಳೆಹಣ್ಣು ವಿತರಣೆ
- ಅನುದಾನ ಹೆಚ್ಚಿಸುವಂತೆ ಶಿಕ್ಷಕರ ಸಂಘ ಸರ್ಕಾರಕ್ಕೆ ಮನವಿ
ಸರ್ಕಾರದ ಆದೇಶದಂತೆ ವಾರದಲ್ಲಿ ಆರು ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಬೇಕು. ಆದರೆ ಅನುದಾನ ಮತ್ತು ಮಾರುಕಟ್ಟೆ ದರದ ನಡುವಿನ ವ್ಯತ್ಯಾಸದಿಂದ ಕೆಲವು ಶಾಲೆಗಳ ಮುಖ್ಯ ಶಿಕ್ಷಕರು ತಿಂಗಳಿಗೆ ₹8 ಸಾವಿರದಿಂದ ₹10 ಸಾವಿರದವರೆಗೆ ತಮ್ಮ ಜೇಬಿನಿಂದಲೇ ಹಣ ಭರಿಸುತ್ತಿದ್ದಾರೆ.
ಈ ಆರ್ಥಿಕ ಒತ್ತಡದಿಂದ ಕೆಲ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವ ಬದಲು ಬಾಳೆಹಣ್ಣು ವಿತರಣೆ ಮಾಡಲು ಮುಂದಾಗಿವೆ. ಇನ್ನೂ ಕೆಲವು ಶಾಲೆಗಳಲ್ಲಿ ಮೊಟ್ಟೆ ಲಭ್ಯವಿರುವಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಮೊಟ್ಟೆ ನೀಡಿ, ಉಳಿದವರಿಗೆ ಬಾಳೆಹಣ್ಣು ನೀಡಲಾಗುತ್ತಿದೆ.
ರಾಯಚೂರು ಜಿಲ್ಲೆಯ ಶಿಕ್ಷಕರ ಸಂಘವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸರ್ಕಾರ ಮೊಟ್ಟೆಗೆ ನೀಡುವ ಅನುದಾನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಲಾಗಿದೆ.
ಪ್ರಭಾರಿ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಮಾತನಾಡಿ, “ಸರ್ಕಾರ ಪ್ರತಿ ಮೊಟ್ಟೆಗೆ ₹6 ಮಾತ್ರ ನೀಡುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ₹8-₹9 ಆಗಿದೆ. ಈ ವ್ಯತ್ಯಾಸವನ್ನು ಶಾಲೆಯೇ ಭರಿಸಬೇಕಾಗುತ್ತಿದ್ದು, ಇದು ಮುಖ್ಯ ಶಿಕ್ಷಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿದೆ. ಸರ್ಕಾರ ತಕ್ಷಣ ಅನುದಾನ ಹೆಚ್ಚಿಸಬೇಕು” ಎಂದು ಮನವಿ ಮಾಡಿದ್ದಾರೆ.
ಶಿಕ್ಷಣ ಇಲಾಖೆಯ ಮಧ್ಯಾಹ್ನದ ಊಟ ಯೋಜನೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶವಿದ್ದರೂ, ಹೆಚ್ಚುತ್ತಿರುವ ಮೊಟ್ಟೆ ದರದಿಂದ ಯೋಜನೆಯ ಅನುಷ್ಠಾನವೇ ಸವಾಲಾಗುತ್ತಿದೆ. ಶಿಕ್ಷಕರು ತಮ್ಮ ವೈಯಕ್ತಿಕ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ತಪ್ಪಿಸಲು ಸರ್ಕಾರ ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಗಳು ಕೇಳಿಬರುತ್ತಿವೆ.





