ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ಪ್ರಕರಣ ರಾಜ್ಯ ಪೊಲೀಸ್ ಇಲಾಖೆಯನ್ನು ತೀವ್ರ ಮುಜುಗರಕ್ಕೀಡು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿವಾದಿತ ವಿಡಿಯೋ ಹಿನ್ನೆಲೆಯಲ್ಲಿ, ಡಿಜಿಪಿ ರಾಮಚಂದ್ರ ರಾವ್ ಅವರು ಇಂದೇ ಸ್ವಯಂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಯಾಗಿರುವ ಡಿಜಿಪಿ ವಿರುದ್ಧ ಇಂತಹ ಆರೋಪಗಳು ಕೇಳಿಬಂದಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದ್ದು, ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಗೃಹ ಇಲಾಖೆ ಗಂಭೀರ ಚಿಂತನೆ ನಡೆಸುತ್ತಿದೆ. ಡಿಜಿಪಿ ರಾಮಚಂದ್ರ ರಾವ್ ಅವರು ಗೃಹಸಚಿವರ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಗೃಹಸಚಿವರನ್ನು ಭೇಟಿಯಾದರೆ ಸ್ವಯಂ ನಿವೃತ್ತಿಗೆ ಸಂಬಂಧಪಟ್ಟಂತೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ವಿಡಿಯೋ ಪ್ರಕರಣದಿಂದ ತೀವ್ರ ಮುಜುಗರಕ್ಕೊಳಗಾಗಿರುವ ರಾಮಚಂದ್ರ ರಾವ್, ಕಳಂಕದಿಂದ ತಪ್ಪಿಸಿಕೊಳ್ಳಲು ಸ್ವಯಂ ನಿವೃತ್ತಿ ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ. ಮೇ ತಿಂಗಳಲ್ಲಿ ನಿವೃತ್ತಿಯಾಗಬೇಕಿದ್ದ ಅವರು, ಅದಕ್ಕೂ ಮುನ್ನವೇ ಸೇವೆಯಿಂದ ಹೊರಬರಲು ಮುಂದಾಗಬಹುದು ಎಂಬ ಚರ್ಚೆ ಜೋರಾಗಿದೆ. ವಿಡಿಯೋ ಪ್ರಕರಣದ ಬಗ್ಗೆ ಸರ್ಕಾರ ಅಧಿಕೃತವಾಗಿ ಇನ್ನೂ ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ.
ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ಪ್ರಕರಣ: ಸಂತ್ರಸ್ತ ಮಹಿಳೆಯರು ದೂರು ಕೊಡ್ತಾರಾ?
ಕರ್ನಾಟಕ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಮತ್ತು ಡಿಜಿಪಿಯಾದ ಶ್ರೀ ರಾಮಚಂದ್ರ ರಾವ್ ಅವರ ರಾಸಲೀಲೆ ವಿಡಿಯೋ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈ ಪ್ರಕರಣದ ಸಂತ್ರಸ್ತ ಮಹಿಳೆಯರು ದೂರು ನೀಡುತ್ತಾರಾ? ದೂರು ನೀಡದೇ ಇದ್ದರೆ ಮುಂದೇನು? ಕಾನೂನಾತ್ಮಕವಾಗಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರೇ ದೂರು ನೀಡಿದರೆ ಮಾತ್ರ ಕ್ರಿಮಿನಲ್ ಕೇಸ್ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದೂರು ಯಾವ ಪೊಲೀಸ್ ಠಾಣೆಗೆ ನೀಡಲಾಗುತ್ತದೋ, ಆ ಠಾಣೆಯ ಪೊಲೀಸರೇ ತನಿಖೆ ನಡೆಸಬೇಕಾಗುತ್ತದೆ. ಒಂದು ವೇಳೆ ದೂರಿನಲ್ಲಿ ಆಮಿಷವೊಡ್ಡಿ ಸಂಬಂಧ ಬೆಳೆಸಲಾಗಿದೆ, ಅಧಿಕಾರ ದುರುಪಯೋಗವಾಗಿದೆ, ಲಾಭ ನೀಡುವುದಾಗಿ ಭರವಸೆ ನೀಡಲಾಗಿದೆ ಎಂಬ ಅಂಶಗಳು ಉಲ್ಲೇಖವಾದರೆ, ಲೋಕಾಯುಕ್ತ ಪ್ರಿವೆನ್ಶನ್ ಆಫ್ ಕರಪ್ಶನ್ ಆಕ್ಟ್ (PCA) ಅಡಿಯಲ್ಲೂ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
ಸಂತ್ರಸ್ತ ಮಹಿಳೆಯರು ದೂರು ನೀಡದೇ ಇದ್ದರೂ, ಪ್ರಕರಣ ಸಂಪೂರ್ಣವಾಗಿ ಮುಚ್ಚಿಹೋಗುವುದಿಲ್ಲ. ಏಕೆಂದರೆ ಇದು ಕೇವಲ ವೈಯಕ್ತಿಕ ವಿಚಾರವಲ್ಲ, ಸರ್ಕಾರಿ ಕಚೇರಿ ಮತ್ತು ಉನ್ನತ ಅಧಿಕಾರಿಯ ನಡೆಗೆ ಸಂಬಂಧಿಸಿದ ವಿಷಯವಾಗಿದೆ. ಈ ಹಿನ್ನೆಲೆ ಸರ್ಕಾರ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬಹುದು. ಮೊದಲ ಹಂತವಾಗಿ ಪ್ರಿಲಿಮಿನರಿ ಎನ್ಕ್ವೈರಿ (ಪ್ರಾಥಮಿಕ ತನಿಖೆ) ನಡೆಯುವ ಸಾಧ್ಯತೆ ಇರುತ್ತದೆ..
ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಾಥಮಿಕ ತನಿಖೆಯನ್ನು ಡಿಜಿಪಿಗಿಂತ ಮೇಲಿನ ರ್ಯಾಂಕ್ನ ಅಧಿಕಾರಿ ಅಥವಾ ಹಿರಿಯ ಐಎಎಸ್ ಅಧಿಕಾರಿ ನಡೆಸಬಹುದು. ಈ ತನಿಖೆ ಸೆಂಟ್ರಲ್ ಸಿವಿಲ್ ಸರ್ವಿಸಸ್ (ಕಂಡಕ್ಟ್) ರೂಲ್ಸ್ ಅಡಿಯಲ್ಲಿ ನಡೆಯುತ್ತದೆ. ಅಧಿಕಾರಿಯ ನಡವಳಿಕೆ ಸೇವಾ ನಿಯಮಗಳಿಗೆ ವಿರುದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.
ಈ ಪ್ರಕರಣದ ತನಿಖೆಯಲ್ಲಿ ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ಆರೋಪಗಳು ಸಾಬೀತಾದರೆ, ಅವರ ಮೇಲೆ ಗಂಭೀರ ಶಿಸ್ತು ಕ್ರಮ ಕೈಗೊಳ್ಳಬಹುದು. ಇದರಲ್ಲಿ ಕರ್ತವ್ಯ ಲೋಪ (Misconduct) ಆರೋಪ, ಹುದ್ದೆಯಿಂದ ವಜಾಗೊಳಿಸುವ (Dismissal) ಅವಕಾಶ ಇರುತ್ತದೆ.. ಅವರೀಗ ಇರುವುದಕ್ಕಿಂತ ಕಡಿಮೆ ರ್ಯಾಂಕ್ ಡಿಮೋಟ್ ನೇಮಕವಾದಾಗಿನ ಹುದ್ದೆಗೇ ಡಿಮೋಟ್ ಮಾಡಲೂ ಅವಕಾಶ ಇದೆ. ಜೊತೆಗೆ ಪೆನ್ಶನ್ ಸೌಲಭ್ಯ ಸೇರಿ ಎಲ್ಲಾ ಸೌಲಭ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.





