ಕರ್ನಾಟಕದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ವಿರುದ್ಧ ವಿಧಾನಸಭೆಯಲ್ಲಿ ಮಾಡಿದ ಹನಿಟ್ರ್ಯಾಪ್ಗೆ ಸಂಬಂಧಿಸಿದ ಹೇಳಿಕೆಗಾಗಿ ಬೆಂಗಳೂರಿನ ಜೆಸಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಈ ದೂರನ್ನು ದಾಖಲಿಸಿದ್ದು, ರಾಜಣ್ಣ ಅವರ ಹೇಳಿಕೆ ಸಂವಿಧಾನಕ್ಕೆ ಅಪಚಾರವೆಂದು ಆರೋಪಿಸಿದ್ದಾರೆ.
ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರು, ಸಚಿವ ರಾಜಣ್ಣ ಅವರು ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಕುರಿತು ಮಾತನಾಡುವ ಮೂಲಕ ಗೌಪ್ಯತೆಯ ಪ್ರಮಾಣವಚನವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. “ರಾಜಣ್ಣ ಅವರು ಸದನದಲ್ಲಿ 40ಕ್ಕೂ ಹೆಚ್ಚು ರಾಜಕಾರಣಿಗಳ ವಿರುದ್ಧ ಹನಿಟ್ರ್ಯಾಪ್ ಪ್ರಯತ್ನಗಳಾಗಿವೆ ಮತ್ತು ಸಿಡಿ, ಪೆನ್ಡ್ರೈವ್ಗಳಿವೆ ಎಂದು ಹೇಳಿದ್ದಾರೆ. ಇದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಾಗಿದೆ,” ಎಂದು ಗಡಾದ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಕಾರಣಕ್ಕೆ, ಅಂಬೇಡ್ಕರ್ ಜಯಂತಿಯಂದೇ ದೂರು ದಾಖಲಿಸಿದ್ದಾಗಿ ಅವರು ಹೇಳಿದ್ದಾರೆ.
ಗಡಾದ್ ಅವರು, ರಾಜಣ್ಣ ಅವರನ್ನು ತಕ್ಷಣವೇ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. “ರಾಜಣ್ಣ ಅವರ ಹೇಳಿಕೆಯಲ್ಲಿ ಸಿಡಿಗಳ ಬಗ್ಗೆ ಉಲ್ಲೇಖವಿದೆ. ಪೊಲೀಸರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು,” ಎಂದು ಅವರು ಆಗ್ರಹಿಸಿದ್ದಾರೆ. ಈಗಾಗಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ದೂರು ನೀಡಿದ್ದೇನೆ. ಒಂದು ವೇಳೆ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಗಡಾದ್ ಎಚ್ಚರಿಕೆ ನೀಡಿದ್ದಾರೆ.
ಈ ಹನಿಟ್ರ್ಯಾಪ್ ಪ್ರಕರಣ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲೂ ಸದ್ದು ಮಾಡಿದ್ದು, ಪ್ರಸ್ತುತ ತನಿಖೆಯು ಹಳ್ಳ ಹಿಡಿದಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಅತ್ತ ರಾಜಣ್ಣ ಅವರ ಪುತ್ರ ಹಾಗೂ ಎಂಎಲ್ಸಿ ರಾಜೇಂದ್ರ ಅವರು ಈ ಮೊದಲು ತಮ್ಮ ವಿರುದ್ಧ ಹನಿಟ್ರ್ಯಾಪ್ಗೆ ಯತ್ನಿಸಲಾಗಿದೆ ಎಂದಿದ್ದರಲ್ಲದೇ, ಬಳಿಕ ಕೊಲೆಗೆ ಸಂಚು ನಡೆದಿತ್ತು ಎಂದು ಹೇಳಿಕೆ ಬದಲಾಯಿಸಿದ್ದು ಗೊತ್ತೇ ಇದೆ.