ಬೆಂಗಳೂರು (ಆ.3): ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಗೆ ಇಂದು ಅಂತಿಮವಾಗಿ ತೆರೆ ಬಿದ್ದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು, ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಲೋಕಭವನದ ಗಾಜಿನ ಮನೆಯಲ್ಲಿ ಆರಂಭವಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸುತ್ತಿದ್ದಾರೆ.
ಕೊನೆಕ್ಷಣದ ಬದಲಾವಣೆಗಳೊಂದಿಗೆ ಅಂತಿಮ ಪಟ್ಟಿ
ಸಚಿವ ಪಟ್ಟಿಯಲ್ಲಿ ಸಾಲು ಸಾಲು ಬದಲಾವಣೆಗಳು ಕಂಡುಬಂದಿವೆ. ಆರಂಭದಲ್ಲಿ ಸಂಜೆ 4.05 ಕ್ಕೆ ನಿಗದಿಯಾಗಿದ್ದ ಸಮಾರಂಭವು ಅಂತಿಮ ಪಟ್ಟಿಯ ಗೊಂದಲಗಳಿಂದಾಗಿ ಸಂಜೆ 5.00 ಗಂಟೆಗೆ ಮುಂದೂಡಲಾಗಿತ್ತು. ಕೊನೆಯ ಕ್ಷಣದವರೆಗೂ ಆಕಾಂಕ್ಷಿಗಳ ಹೆಸರುಗಳಲ್ಲಿ ಭಾರಿ ಏರುಪೇರಾಗಿದ್ದು, ಕೆಲವು ಶಾಸಕರನ್ನು ಕೈಬಿಡಲಾಗಿದ್ದು, ಮತ್ತೆ ಕೆಲವರಿಗೆ ಅವಕಾಶ ನೀಡಲಾಗಿದೆ.
ಪ್ರಮುಖ ಬದಲಾವಣೆಗಳು
-
ಮಾಂಕಾಳು ವೈದ್ಯ ಔಟ್, ಎಸ್.ಎಸ್. ಮಲ್ಲಿಕಾರ್ಜುನ್ ಇನ್: ಆರಂಭಿಕ ಪಟ್ಟಿಯಲ್ಲಿದ್ದ ಭಟ್ಕಳ ಶಾಸಕ ಮಾಂಕಾಳು ವೈದ್ಯ ಅವರ ಹೆಸರನ್ನು ಹೈಕಮಾಂಡ್ ಕೈಬಿಟ್ಟಿದ್ದು, ಅವರ ಜಾಗಕ್ಕೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಸೇರಿಸಲಾಗಿದೆ.
-
ಗಾಯತ್ರಿ ಶಾಂತೇಗೌಡ ಬದಲು ಎನ್.ಎಸ್. ಬೋಸರಾಜು: ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಅಂತಿಮ ಕ್ಷಣದಲ್ಲಿ ತೆರವುಗೊಳಿಸಿ, ಹಿರಿಯ ನಾಯಕ ಎನ್.ಎಸ್. ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.
ಪ್ರಮಾಣವಚನ ಸ್ವೀಕರಿಸುತ್ತಿರುವ ನೂತನ ಸಚಿವರು
-
ಪಿ.ಎಂ. ನರೇಂದ್ರಸ್ವಾಮಿ
-
ಶಿವರಾಜ್ ತಂಗಡಗಿ
-
ರುದ್ರಪ್ಪ ಲಮಾಣಿ
-
ಕೆ.ಎಸ್. ಬಸವಂತಪ್ಪ
-
ಬಿ. ನಾಗೇಂದ್ರ
-
ಟಿ. ರಘುಮೂರ್ತಿ
-
ಬಿ.ಝಡ್. ಜಮೀರ್ ಅಹಮದ್ ಖಾನ್
-
ರಿಜ್ವಾನ್ ಅರ್ಷದ್
-
ಸಂತೋಷ್ ಲಾಡ್
-
ಮಧು ಬಂಗಾರಪ್ಪ
-
ಪುಟ್ಟರಂಗಶೆಟ್ಟಿ
-
ಎಸ್.ಎಸ್. ಮಲ್ಲಿಕಾರ್ಜುನ್
-
ಅಜಯ್ ಸಿಂಗ್
-
ಎನ್. ಚಲುವರಾಯಸ್ವಾಮಿ
-
ಕೆ.ಎಂ. ಶಿವಲಿಂಗೇಗೌಡ
-
ಎಚ್.ಸಿ. ಬಾಲಕೃಷ್ಣ
-
ಬಸವರಾಜ ರಾಯರೆಡ್ಡಿ
-
ವಿಜಯಾನಂದ ಕಾಶಪ್ಪನವರ್
ಒಟ್ಟು 18 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಅತೃಪ್ತ ಶಾಸಕರಿಂದ ರಾಜೀನಾಮೆ ಭೀಷಣೆ
ಸಚಿವ ಪಟ್ಟಿಯಿಂದ ವಂಚಿತರಾದ ಹಿರಿಯ ಶಾಸಕರಲ್ಲಿ ತೀವ್ರ ಆಕ್ರೋಶ ಮೂಡಿದೆ. ಕೊನೆಯ ಕ್ಷಣದಲ್ಲಿ ಹೆಸರುಗಳನ್ನು ಕೈಬಿಟ್ಟಿರುವುದಕ್ಕೆ ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈಗಾಗಲೇ ಯಶವಂತರಾಯ ಗೌಡ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ತಿಳಿದುಬಂದಿದೆ. ಇತರೆ ಹಲವು ಶಾಸಕರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಭದ್ರತಾ ವ್ಯವಸ್ಥೆ
ಲೋಕಭವನದಲ್ಲಿ ನಡೆಯುತ್ತಿರುವ ಪ್ರಮಾಣವಚನ ಸಮಾರಂಭದ ಹಿನ್ನೆಲೆ ಭದ್ರತಾ ದೃಷ್ಟಿಯಿಂದ ಎರಡು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಅತಿಥಿಗಳಿಗಾಗಿ ಹೊರಭಾಗದಲ್ಲಿ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯು ಎಲ್ಲ ಸಿದ್ಧತೆಗಳನ್ನು ಮಾಡಿದೆ.





