ಬೆಂಗಳೂರು: ಪ್ರೀತಿ-ಪ್ರೇಮದ ವಿಷಯದಲ್ಲಿ ಉಂಟಾದ ಮನಸ್ತಾಪದಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ಆರಂಭದಲ್ಲಿ ತಿಳಿದುಬಂದಿದ್ದ ಘಟನೆಗೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣವು ಆತ್ಮಹತ್ಯೆಯಲ್ಲ, ಬದಲಾಗಿ ಯುವತಿಯೇ ಪ್ರಿಯಕರನನ್ನು ಹತ್ಯೆ ಮಾಡಿದ್ದಾಳೆ ಎಂದು ಹೇಳಲಾಗಿದೆ. ಈ ಸಂಚಲನಕಾರಿ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣದ ಹಿನ್ನೆಲೆ ಏನು?
ಮೃತ ಕಿರಣ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಿರಣ್ ಮತ್ತು ಆರೋಪಿ ಯುವತಿಯ ನಡುವೆ ಸ್ನೇಹ ಬೆಳೆದು, ನಂತರ ಅದು ಪ್ರೀತಿಯಾಗಿ ತಿರುಗಿತ್ತು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ತಿಳಿದುಬಂದಿದೆ. ಮಂಗಳವಾರ ಯುವತಿಯ ತಾಯಿ ಮತ್ತು ಅಣ್ಣ ಮನೆಯಲ್ಲಿ ಇಲ್ಲದ ಸಮಯವನ್ನು ಆಕೆ ಬಳಸಿಕೊಂಡಿದ್ದಾಳೆ.
‘ವಿದೇಶಿ ಶೈಲಿಯ ಪ್ರಪೋಸ್’ ನೆಪ
ಆರಂಭಿಕ ವಿಚಾರಣೆಯಲ್ಲಿ ಯುವತಿ, “ಕಿರಣ್ ತಾನೇ ಪೆಟ್ರೋಲ್ ತಂದು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ” ಎಂದು ಸುಳ್ಳು ಹೇಳಿಕೆ ನೀಡಿದ್ದಳು. ಆದರೆ ಸಿಸಿಟಿವಿ ದೃಶ್ಯಗಳು ಮತ್ತು ತನಿಖೆಯಲ್ಲಿ ಅಚ್ಚರಿ ಮಾಹಿತಿ ಬೆಳಕಿಗೆ ಬಂದಿವೆ.
ಪೊಲೀಸ್ ಮೂಲಗಳ ಪ್ರಕಾರ, ಯುವತಿ ಕಿರಣ್ಗೆ ‘ವಿದೇಶಿ ಸ್ಟೈಲ್ನಲ್ಲಿ ಸರ್ಪ್ರೈಸ್ ಪ್ರಪೋಸ್ ಮಾಡ್ತೀನಿ’ ಎಂದು ನಂಬಿಸಿದ್ದಾಳೆ. ಅವಳ ಮನೆಗೆ ಕರೆಸಿಕೊಂಡು, ಮೊದಲು ಕಿರಣ್ ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ. ನಂತರ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಬಿಗಿದಿದ್ದಾಳೆ. ಅನಂತರ ಅವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಈ ದೃಶ್ಯವನ್ನು ತಾನೇ ವಿಡಿಯೋ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಸಿಸಿಟಿವಿ ಬಯಲು ಮಾಡಿದ ಸತ್ಯ
ಕಿರಣ್ ಮನೆಗೆ ಬರುವಾಗ ಯಾವುದೇ ಪೆಟ್ರೋಲ್ ತಂದಿರಲಿಲ್ಲ. ಅದು ಆಕೆಯ ಮನೆಯಲ್ಲೇ ಇತ್ತು ಎಂಬುದು ಸಿಸಿಟಿವಿಯಿಂದ ದೃಢಪಟ್ಟಿದೆ. ಹಾಗಾಗಿ ಇದು ಯುವತಿಯ ಮುಂಚಿತ ಸಂಚು ಎಂದು ಶಂಕಿಸಲಾಗಿದೆ. ತನ್ನ ಕೃತ್ಯವನ್ನು ಆತ್ಮಹತ್ಯೆಯಂತೆ ಚಿತ್ರಿಸಲು ಆಕೆ ಪದೇ ಪದೇ ಸುಳ್ಳು ಮಾಹಿತಿ ನೀಡಿದ್ದಾಳೆ.
ಆರಂಭಿಕ ಸುಳ್ಳು ಕಥೆ ಏನಿತ್ತು?
“ಕಿರಣ್ ಬಂದು ತೀವ್ರ ವಾಗ್ವಾದ ನಡೆಸಿದ. ಆಕ್ರೋಶಗೊಂಡ ಅವನೇ ತಾನು ತಂದಿದ್ದ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ. ಅಷ್ಟಕ್ಕೇ ಸುಮ್ಮನಾಗದೆ, ಪಕ್ಕದಲ್ಲಿದ್ದ ನನಗೂ ಬೆಂಕಿ ಹಚ್ಚಲು ಯತ್ನಿಸಿದ” ಎಂದು ಯುವತಿ ಹೇಳಿದ್ದಳು. ಆದರೆ ಸಿಸಿಟಿವಿ ದೃಶ್ಯಗಳು ಈ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿವೆ.
ಪೊಲೀಸ್ ಕ್ರಮ
ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕಿರಣ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೂ ಸ್ವಲ್ಪ ಸುಟ್ಟಗಾಯಗಳಾಗಿವೆ ಎನ್ನಲಾಗಿದೆ. ಆದರೆ ಇದು ನಟನೆಯೋ ಅಥವಾ ನಿಜವೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ.





