ಕರ್ನಾಟಕ ರಾಜಕೀಯದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ (ಡಿಕೆಶಿ) ಪ್ರಚಂಡ ಪ್ರಭಾವ ಬೀರಿದ್ದಾರೆ. ಕರಾವಳಿ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಅವರು ಹೊಸ ತಂತ್ರವನ್ನು ರೂಪಿಸಿದ್ದಾರೆ. ಹಿಂದುತ್ವದ ಭದ್ರಕೋಟೆಯೆಂದು ಪರಿಗಣಿಸಲಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಫ್ಟ್ ಹಿಂದುತ್ವ ಅಸ್ತ್ರವನ್ನು ಬಳಸಿಕೊಂಡು ಪಕ್ಷದ ಪ್ರಭಾವವನ್ನು ವಿಸ್ತರಿಸಲು ಡಿಕೆಶಿ ಯೋಜನೆ ಹಾಕಿದ್ದಾರೆ.
ಡಿಕೆಶಿಯ ಈ ಹೊಸ ತಂತ್ರದ ಭಾಗವಾಗಿ ಅವರು ಕಳೆದ ಕೆಲ ತಿಂಗಳುಗಳಲ್ಲಿ ಕರಾವಳಿಯ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯ ಭಾಗಿಯಾಗುತ್ತಿದ್ದಾರೆ. ಮಂಗಳೂರಿನ ಮಧೂರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಕಾಪು ಮಾರಿಯಮ್ಮ ದೇವಾಲಯದ ಬ್ರಹ್ಮಕಲಶೋತ್ಸವ, ಗುರುಪುರ ಕಂಬಳ ಕಾರ್ಯಕ್ರಮ ಹಾಗೂ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಭೇಟಿ ನೀಡಿದ್ದರು.
ಅಷ್ಟೇ ಅಲ್ಲದೆ, ಏಪ್ರಿಲ್ 20ರಂದು ಬೆಳ್ತಂಗಡಿಯಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಇದು ಕೇವಲ ಧಾರ್ಮಿಕ ಪ್ರವಾಸವಲ್ಲ, ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಒಗ್ಗೂಡಿಸುವ ರಾಜಕೀಯ ತಂತ್ರವೂ ಹೌದು.
ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ಹೊಸ ತಂತ್ರ
ಡಿಕೆ ಶಿವಕುಮಾರ್ ಅವರು ಈ ಧಾರ್ಮಿಕ ಪ್ರವಾಸಗಳು, ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಧೋರಣೆ “ಸಾಫ್ಟ್ ಹಿಂದುತ್ವ” ಎಂದು ಹೇಳಲಾಗಿದೆ. ಇದು ಹಿಂದೂತ್ವವನ್ನು ವಿರೋಧಿಸದೆ, ಮತದಾರರ ಮನ ಗೆಲ್ಲುವ ಪ್ರಯತ್ನವಾಗಿದೆ. ಇದು ಬಿಜೆಪಿಯ ಭದ್ರಕೋಟೆಯಲ್ಲಿ ಕಾಂಗ್ರೆಸ್ನ್ನು ಬಲಪಡಿಸಲು ಸಹಾಯವಾಗಬಹುದು ಎಂಬ ನಂಬಿಕೆ.
ಮಂಗಳೂರಿಗೆ ಸಿಎಂ ಸಿದ್ದರಾಮಯ್ಯಗಿಂತಲೂ ಹೆಚ್ಚಾಗಿ ಡಿಕೆ ಶಿವಕುಮಾರ್ ಅವರು ಭೇಟಿ ನೀಡುತ್ತಿರುವುದು ಗಮನಾರ್ಹವಾಗಿದೆ. ಅವರು ಪಕ್ಷದ ಮುಖಂಡರಿಗೆ ಧಾರ್ಮಿಕ ಆಚರಣೆಗಳ ಮೂಲಕ ಜನತೆ ಮನ ಗೆಲ್ಲುವಂತೆ ಸೂಚನೆ ನೀಡಿದ್ದಾರೆ. “ಒಳ್ಳೆ ಕಾರ್ಯಕ್ರಮ ರೂಪಿಸಿ, ಕಾರ್ಯಕರ್ತರನ್ನ ಒಗ್ಗೂಡಿಸಿ, ನಾನೇ ಬರುತ್ತೇನೆ” ಎಂದು ಡಿಕೆ ಶಿವಕುಮಾರ್ ಸಂದೇಶವನ್ನು ನೀಡಿದ್ದಾರೆ.
ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನರನ್ನು ಕಾಂಗ್ರೆಸ್ಗೆ ಸೆಳೆಯುವ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಡಿಕೆ ಶಿವಕುಮಾರ್ ಅವರು ಹೊಸ ಟಾಸ್ಕ್ ನೀಡಿದ್ದಾರೆ.





