ಹುಬ್ಬಳ್ಳಿ (ಜುಲೈ 13): ಸಮಾಜದ ಅಭಿವೃದ್ಧಿಗೆ ಸೇವಾ ಮನೋಭಾವ ಅತ್ಯಗತ್ಯ ಹಾಗೆಯೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಸಂಘ-ಸಂಸ್ಥೆಗಳು ಹಾಗೂ ಕಾರ್ಯಕರ್ತರಿಗೆ ಸಮಯೋಚಿತ ಸಹಾಯ-ಸಹಕಾರ ನೀಡಬೇಕೆಂದು ಸ್ವರ್ಣ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕ ಹಾಗೂ ಉದ್ಯಮಿ ಡಾ. ಸಿ.ಎಚ್.ವಿ.ಎಸ್.ವಿ. ಪ್ರಸಾದ್ ಕರೆ ನೀಡಿದರು.
ಪ್ರಸಾದ್ ಅವರು, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ವತಿಯಿಂದ ನಗರದ ಕರ್ನಾಟಕ ಜಿಮಖಾನಾ ಕ್ಲಬ್ನಲ್ಲಿ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣದ ಅದ್ಧೂರಿ ಸಮಾರಂಭವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರೋಟರಿ ಸಂಸ್ಥೆಗಳು ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಸೇವೆಗಳ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾದುದು, ಇಂತಹ ಸೇವಾ ಚಟುವಟಿಕೆಗಳು ಇನ್ನಷ್ಟು ವಿಸ್ತರಿಸಬೇಕು ಎಂದು ಹೇಳಿದರು. ಅನುಷ್ಠಾನಗೊಳಿಸುವ ಸಂಕಲ್ಪ ಹೊಂದಬೇಕೆಂದು ಡಾ.ಪ್ರಸಾದ ಆಶಿಸಿದರು.
ಕಳೆದ 5 ವರ್ಷಗಳಿಂದ ಕ್ಲಬ್ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ನಾನು, ಈಗಾಗಲೇ ನನ್ನ ಕೈಲಾದ ಸಹಾಯ ಸಹಕಾರ ನೀಡುತ್ತಾ ಬಂದಿರುವೇ ಮುಂದಿನ ದಿನಗಳಲ್ಲಿ ನಾನು ಇವರ ಜೊತೆ ಇದ್ದು ಸಾಧ್ಯವಾದವಷ್ಟು ಕೈ ಜೋಡಿಸುವ ಗುರಿ ಹೊಂದಿದ್ದೇನೆ. ಕ್ಲಬ್ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯಶಸ್ವಿಗೊಂಡು ಮುನ್ನುಗ್ಗುತ್ತಿದೆ ಇದೇ ರೀತಿ ಮುಂದಿನ ದಿನಗಳಲ್ಲೂ ಇನ್ನಷ್ಟು ಹುರುಪಿನಿಂದ ಕೆಲಸ ಮಾಡಿ ಸಮಾಜದಲ್ಲಿ ಒಳ್ಳೆಯ ಹೆಸರುಗಳಿಸಬೇಕೆಂದು ಕರೆ ನೀಡಿದರು.
ವಿಎಸ್ವಿ ಪ್ರಸಾದ ಅವರು, ತಮ್ಮ ಸ್ವರ್ಣ ಸಮೂಹ ಸಂಸ್ಥೆಯ ವತಿಯಿಂದ ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆಗೆ ಕಂಪ್ಯೂಟರ್ಗಳನ್ನು ದೇಣಿಗೆ ನೀಡಿದರು. ಅದೇ ರೀತಿ ವಿದ್ಯಾನಗರದ ರೋಟರಿ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಯ ಮೂವರು ಟೀಚರ್ಸ್ಗೆ ಇಡೀ ಒಂದು ವರ್ಷದ ವೇತನ ಹಾಗೂ ಮೂವರು ನರ್ಸಿಂಗ್ ವಿದ್ಯಾರ್ಥಿಗಳ ಕಾಲೇಜು ಶುಲ್ಕದ ಮೊತ್ತದ ಚೆಕ್ಗಳನ್ನು ವಿತರಿಸಿದರು.
ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ 3170 ಜಿಲ್ಲಾಧ್ಯಕ್ಷ ಡಾ.ಲೆನ್ನಿ ಡೆ ಕೋಸ್ಟಾ ಇದೇ ಸಮಯದಲ್ಲಿ ನೂತನ ರೋಟರಿ ಎಲೈಟ್ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ ಕುರಹಟ್ಟಿ, ಕಾರ್ಯದರ್ಶಿಯಾಗಿ ಆಯ್ಕೆಯಾದ ಸಂಜಯ ಪೀರಾಪುರ ಸೇರಿದಂತೆ ಎಲ್ಲ ಪದಾಧಿಕಾರಿಗಳಿಗೆ ಪದಗ್ರಹಣ ಬೋಧಿಸಿದರು.
ಇದೇ ಸಂದರ್ಭದಲ್ಲಿ ಸುಮಾರು 25ಕ್ಕೂ ಹೆಚ್ಚು ಹೊಸ ಸದಸ್ಯರಾಗಿ ಆಗಮಿಸಿದ್ದ ಎಲ್ಲ ರೋಟೆರಿಯನ್ಗಳಿಗೆ ಶುಭ ಹಾರೈಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಐಬಿಎಂಆರ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ವಿನಯಚಂದ್ರ ಮಹೇಂದ್ರಕರ ಸೇರಿದಂತೆ ಗಣ್ಯ ಅತಿಥಿಗಳನ್ನು ರೋಟರಿ ಕ್ಲಬ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ವಿಶ್ವಶಾಂತಿಗಾಗಿ ಮೌನಾಚರಣೆ ನಡೆಸಿ, ಬಳಿಕ ರಾಷ್ಟ್ರಗೀತೆಯೊಂದಿಗೆ ಸಭೆಗೆ ಗೌರವ ಸಲ್ಲಿಸಲಾಯಿತು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಆಹ್ವಾನಿತರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.





