ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರ ಕರ್ನಾಟಕ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವ ಸಂದರ್ಭದಲ್ಲಿ, ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಗುರೂಜಿ ಭರ್ಜರಿ ಭವಿಷ್ಯ ನುಡಿದಿದ್ದಾರೆ. “ಸೋಮವಾರದ ಒಳಗೆ ಡಿ.ಕೆ. ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಮುಂದಿನ 8 ವರ್ಷಗಳ ಕಾಲ ಅವರ ಅಧಿಕಾರವನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ” ಎಂದು ಗುರೂಜಿ ಘೋಷಿಸಿದ್ದಾರೆ.
‘ಏಷ್ಯಾನೆಟ್ ಸುವರ್ಣ ನ್ಯೂಸ್’ಗೆ ಮಾತನಾಡಿದ ಗುರೂಜಿ, ಡಿ.ಕೆ. ಶಿವಕುಮಾರ್ ಅವರೊಂದಿಗಿನ 35 ವರ್ಷಗಳ ಒಡನಾಟವನ್ನು ನೆನಪಿಸಿಕೊಂಡರು. “ಅವರು ನನಗೆ ಕಳೆದ 35 ವರ್ಷಗಳಿಂದ ಪರಿಚಿತರು. ಹಿಂದೆ ಬಂಗಾರಪ್ಪ ಅವರ ಸಂಪುಟದಲ್ಲಿ ಜೈಲು ಮಂತ್ರಿಯಾಗಿದ್ದಾಗಲೇ ‘ನೀನು ಒಂದು ದಿನ ಈ ರಾಜ್ಯಕ್ಕೆ ಮುಖ್ಯಮಂತ್ರಿ ಆಗುತ್ತೀಯ’ ಎಂದು ಭವಿಷ್ಯ ಹೇಳಿದ್ದೆ. ಅವರು ನಮ್ಮ ಮನೆಯ ಮಗನಂತೆ” ಎಂದು ಹೇಳಿದರು.
ಶೃಂಗೇರಿ ಪ್ರಾರ್ಥನೆಯ ಸುದ್ದಿ ಬಿಚ್ಚಿಟ್ಟ ಗುರೂಜಿ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಪಟ್ಟ ತಡವಾಗುತ್ತಿದ್ದ ಹಿನ್ನೆಲೆಯಲ್ಲಿ ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಪ್ರಾರ್ಥನೆಗೆ ಹೋಗಿದ್ದೆ ಎಂದು ಗುರೂಜಿ ಬಹಿರಂಗಪಡಿಸಿದರು. “ಅವನಿಗೆ ಸಿಎಂ ಆಗುವುದು ನ್ಯಾಯವಾಗಿ ಹೊಸ ವರ್ಷದ ಒಳಗೇ ಆಗಬೇಕಿತ್ತು. ಆದರೆ ನಿಧಾನವಾಗುತ್ತಿತ್ತು. ಶೃಂಗೇರಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ಡಿ.ಕೆ. ಶಿವಕುಮಾರ್ ಫೋನ್ ಮಾಡಿ ‘ಗುರೂಜಿ, ಕೆಲಸ ಆಗಿದೆ’ ಎಂದು ಸಿಹಿ ಸುದ್ದಿ ನೀಡಿದರು” ಎಂದು ತಿಳಿಸಿದರು.
ಸಿದ್ದರಾಮಯ್ಯ ರಾಜಯೋಗ ಮುಗಿದಿದೆ ಸಿದ್ದರಾಮಯ್ಯ ಅವರ ಜಾತಕದ ಬಗ್ಗೆ ವಿಶ್ಲೇಷಿಸಿದ ಗುರೂಜಿ, “ಸಿದ್ದರಾಮಯ್ಯ ವೃಶ್ಚಿಕ ರಾಶಿ. ಸದ್ಯ ಅವರಿಗೆ ಗುರು ಬಲ ಮತ್ತು ಶನಿ ಬಲ ಇಲ್ಲ. ಅವರ ರಾಜಯೋಗ ಈಗ ಮುಗಿದಿದೆ. ಆದರೆ ರಾಜ್ಯಕ್ಕೆ ಅವರ ಮಾರ್ಗದರ್ಶನ ಇನ್ನೂ ಅಗತ್ಯ” ಎಂದರು. ಡಿ.ಕೆ. ಶಿವಕುಮಾರ್ ಅವರಿಗೆ ಈಗ ಸುವರ್ಣ ಸಮಯ ಆರಂಭವಾಗಿದೆ ಎಂದು ಹೇಳಿದ ಅವರು, ಗುರು ಮಿಥುನ ರಾಶಿಯಲ್ಲಿರುವುದು ಡಿ.ಕೆ.ಗೆ ಭಾರಿ ರಾಜಯೋಗ ತರುತ್ತದೆ ಎಂದು ಭವಿಷ್ಯ ನುಡಿದರು.
ಡಿ.ಕೆ. ಶಿವಕುಮಾರ್ ಒಂದು ಬ್ರ್ಯಾಂಡ್ “ಡಿ.ಕೆ. ಶಿವಕುಮಾರ್ ಕೇವಲ ಮುಖ್ಯಮಂತ್ರಿ ಮಾತ್ರವಲ್ಲ, ಪಕ್ಷವನ್ನೂ ಮುನ್ನಡೆಸಬೇಕಿದೆ. ಅವರು ಬುದ್ಧಿವಂತ, ಜಾಣ ಮತ್ತು ಸಹನೆಯುಳ್ಳವರು. ಶಿವಕುಮಾರ್ ಅನ್ನೋದೇ ಒಂದು ಬ್ರ್ಯಾಂಡ್” ಎಂದು ಗುರೂಜಿ ಬಣ್ಣಿಸಿದರು. ಬೆಂಗಳೂರಿನ ಮೂಲಸೌಕರ್ಯ, ಕುಡಿಯುವ ನೀರು ಮತ್ತು ಟ್ರಾಫಿಕ್ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಸರಿಪಡಿಸಬೇಕು ಎಂದು ಸಲಹೆ ನೀಡಿದರು. ಸಿದ್ದರಾಮಯ್ಯ ಅವರ ಆಪ್ತರನ್ನು ಜೊತೆಗೆ ಕರೆದುಕೊಂಡು ಉತ್ತಮ ಸರ್ಕಾರ ನೀಡುತ್ತಾರೆ ಎಂದು ಆಶಿಸಿದರು.
ರಾಜಕೀಯ ವಲಯದಲ್ಲಿ ಈ ಭವಿಷ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಡಿ.ಕೆ. ಶಿವಕುಮಾರ್ ಅವರು ಸೋಮವಾರದ ಒಳಗೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಿದೆ.





