ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ರೈಲಿನಲ್ಲಿ ಕುಡಿದ ಮತ್ತಿನಲ್ಲಿದ್ದ ಮೂವರು ಪ್ರಯಾಣಿಕರು ಕರ್ತವ್ಯ ನಿರತ ರೈಲ್ವೆ ಸಂರಕ್ಷಣಾ ಪಡೆಯ (RPF) ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಯಶವಂತಪುರ-ವಾಸ್ಕೋಡಗಾಮ ರೈಲು ಗೋವಾ ಕಡೆಗೆ ಹೊರಟಿತ್ತು. ಈ ಸಂದರ್ಭದಲ್ಲಿ, ರೈಲಿನಲ್ಲಿದ್ದ ಮೂವರು ವ್ಯಕ್ತಿಗಳು ಕಾರಣವಿಲ್ಲದೆ ರೈಲಿನ ಚೈನ್ ಎಳೆದು ರೈಲನ್ನು ನಿಲ್ಲಿಸಿದರು.
ಇದನ್ನು ಗಮನಿಸಿದ ರೈಲ್ವೆ ಸಂರಕ್ಷಣಾ ಪಡೆಯ (RPF) ಸಿಬ್ಬಂದಿಯೊಬ್ಬರು ತಕ್ಷಣ ಸ್ಥಳಕ್ಕೆ ಧಾವಿಸಿ, ಇದರ ಬಗ್ಗೆ ಪ್ರಶ್ನೆ ಮಾಡಿದರು. ಆಗ ಕುಡಿದ ಮತ್ತಿನಲ್ಲಿದ್ದ ಆ ಪುಂಡರು ಉದ್ಧಟತನ ಪ್ರದರ್ಶಿಸಿದರು. ಪ್ರಶ್ನೆ ಮಾಡಿದ RPF ಸಿಬ್ಬಂದಿಯನ್ನು ತಳ್ಳಿ, ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ, ಆರ್ಪಿಎಫ್ ಸಿಬ್ಬಂದಿ ಕೂಡಲೇ ಹೆಚ್ಚಿನ ಸಹ ಸಿಬ್ಬಂದಿಗೆ ಮಾಹಿತಿ ನೀಡಿದರು. ಹೆಚ್ಚುವರಿ ಆರ್ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಗಲಾಟೆ ಮಾಡುತ್ತಿದ್ದ ಕಿಡಿಗೇಡಿಗಳನ್ನು ತಕ್ಷಣವೇ ವಶಕ್ಕೆ ಪಡೆದರು.
Massive ruckus at Yeshwantpur railway station in Bengaluru. Local rowdies have held the Goa bound Vasco Da Gama Express hostage.
They have beaten up RPF and held him hostage too.
All this because RPF objected to chain pulling. The group is repeatedly pulling the chain and the… pic.twitter.com/XQG8qDjTpy
— With Love India (@WithLoveIndiaa) December 15, 2025
ಈ ಘಟನೆಯ ಕುರಿತು ಆರ್.ಪಿ.ಎಫ್ ಸಿಬ್ಬಂದಿಯು ಯಶವಂತಪುರ ರೈಲ್ವೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ರೈಲ್ವೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪುಂಡಾಟಿಕೆ ನಡೆಸಿದ ಮೂವರ ವಿರುದ್ಧ ಎಫ್ಐಆರ್ (FIR) ದಾಖಲಿಸಿದ್ದಾರೆ. ಈ ಆರೋಪಿಗಳ ಮೇಲೆ ಪ್ರಮುಖವಾಗಿ, ರೈಲಿನ ಚೈನ್ ಎಳೆದು ಪ್ರಯಾಣಕ್ಕೆ ಅಡ್ಡಿಪಡಿಸುವುದು, ರೈಲ್ವೆ ಪೊಲೀಸರ ಮೇಲೆ ಹಲ್ಲೆ ನಡೆಸುವುದು ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸುವುದು ಮುಂತಾದ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.
ಘಟನೆಯ ನಂತರ, ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ಮುಂದಿನ ಕಾನೂನು ಕ್ರಮಕ್ಕಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮೂವರು ಪುಂಡರ ಗಲಾಟೆ ಮತ್ತು ನಂತರದ ಪೊಲೀಸರ ಕಾರ್ಯಾಚರಣೆಯಿಂದಾಗಿ ಯಶವಂತಪುರ-ವಾಸ್ಕೋಡಗಾಮ ರೈಲಿನ ಪ್ರಯಾಣದಲ್ಲಿ ಸ್ವಲ್ಪ ವಿಳಂಬವಾಯಿತು. ನಿಗದಿತ ಸಮಯಕ್ಕಿಂತ ತಡವಾಗಿ ರೈಲು ಗೋವಾ ಕಡೆಗೆ ಪ್ರಯಾಣ ಮುಂದುವರೆಸಿತು. ಪ್ರಯಾಣಿಕರು ಸಹ ಪುಂಡರ ಈ ಕೃತ್ಯದಿಂದಾಗಿ ತೊಂದರೆ ಅನುಭವಿಸಬೇಕಾಯಿತು.ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವಾಗ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪ್ರತಿಯೊಬ್ಬ ಪ್ರಯಾಣಿಕರ ಕರ್ತವ್ಯ. ಆರೋಪಿಗಳ ವಿರುದ್ದ ಶೀಘ್ರವೇ ಕಠಿನ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.





