ನವದೆಹಲಿ: ಬಿಹಾರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ನಾಮಪತ್ರ ಸಲ್ಲಿಸುವ ಮುನ್ನ ಬಿಹಾರದ ಜನತೆಯನ್ನು ಉದ್ದೇಶಿಸಿ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, ದಶಕಗಳ ಕಾಲ ತಮಗೆ ನೀಡಿದ ಬೆಂಬಲ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ X ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಸಂದೇಶದಲ್ಲಿ, “ಎರಡು ದಶಕಗಳಿಗೂ ಹೆಚ್ಚು ಕಾಲ ನೀವು ನನ್ನ ಮೇಲೆ ನಿರಂತರವಾಗಿ ನಂಬಿಕೆ ಮತ್ತು ಬೆಂಬಲವನ್ನು ತೋರಿಸಿದ್ದೀರಿ. ಆ ನಂಬಿಕೆಯೇ ನನಗೆ ಬಿಹಾರದ ಸೇವೆ ಮಾಡಲು ಶಕ್ತಿ ನೀಡಿತು,” ಎಂದು ಅವರು ಹೇಳಿದ್ದಾರೆ.
ರಾಜ್ಯಸಭೆ ಸ್ಪರ್ಧೆ: ಬಿಹಾರ ರಾಜಕೀಯದಲ್ಲಿ ಕುತೂಹಲ
ದಾಖಲೆ ಮಟ್ಟದ 10ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರು ಕೇವಲ ನಾಲ್ಕು ತಿಂಗಳಲ್ಲೇ ರಾಜ್ಯಸಭೆಗೆ ಸ್ಪರ್ಧಿಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆ ಬಳಿಕ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ತೀವ್ರ ಕುತೂಹಲ ಹುಟ್ಟಿಸಿದೆ.
ರಾಜಕೀಯ ಆಕಾಂಕ್ಷೆಯ ಕುರಿತು ನಿತೀಶ್ ಮಾತು
ತಮ್ಮ ರಾಜಕೀಯ ಪಯಣವನ್ನು ಸ್ಮರಿಸಿದ ಅವರು, ಎಲ್ಲಾ ಶಾಸನಾಂಗಗಳಲ್ಲೂ ಸೇವೆ ಸಲ್ಲಿಸುವ ಆಸೆ ತಮಗಿತ್ತು ಎಂದು ತಿಳಿಸಿದ್ದಾರೆ. “ನನ್ನ ಸಂಸದೀಯ ಜೀವನ ಆರಂಭವಾದಾಗಿನಿಂದಲೇ ಬಿಹಾರ ವಿಧಾನಸಭೆ, ವಿಧಾನ ಪರಿಷತ್ತು ಹಾಗೂ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆ ಈ ನಾಲ್ಕು ಸದನಗಳಲ್ಲೂ ಸದಸ್ಯನಾಗಬೇಕು ಎಂಬ ಹಂಬಲವಿತ್ತು. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ರಾಜ್ಯಸಭೆ ಸದಸ್ಯನಾಗುವ ಮೂಲಕ ಆ ಕನಸು ನನಸಾಗುವ ಸಾಧ್ಯತೆ ಇದೆ,” ಎಂದು ಅವರು ಹೇಳಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗೆ ಬದ್ಧತೆ ಮುಂದುವರಿಕೆ
ರಾಜ್ಯಸಭೆಗೆ ತೆರಳಿದರೂ ಬಿಹಾರದ ಅಭಿವೃದ್ಧಿಯತ್ತ ತಮ್ಮ ಬದ್ಧತೆ ಕಡಿಮೆಯಾಗುವುದಿಲ್ಲ ಎಂದು ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. “ನಿಮ್ಮೊಂದಿಗಿನ ನನ್ನ ಬಾಂಧವ್ಯ ಮುಂದೆಯೂ ಮುಂದುವರಿಯುತ್ತದೆ. ಅಭಿವೃದ್ಧಿ ಹೊಂದಿದ ಬಿಹಾರವನ್ನು ನಿರ್ಮಿಸಲು ನಿಮ್ಮೊಂದಿಗೆ ಕೆಲಸ ಮಾಡುವ ಸಂಕಲ್ಪ ಅಚಲವಾಗಿದೆ,” ಎಂದು ಅವರು ಹೇಳಿದ್ದಾರೆ.
ಬಿಹಾರದ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ಕಳೆದ ಹಲವು ವರ್ಷಗಳಲ್ಲಿ ಕೈಗೊಂಡ ಯೋಜನೆಗಳನ್ನು ಮುಂದುವರಿಸಲು ತಮ್ಮ ಪ್ರಯತ್ನಗಳು ಮುಂದುವರಿಯಲಿವೆ ಎಂದು ಅವರು ಭರವಸೆ ನೀಡಿದ್ದಾರೆ.
पिछले दो दशक से भी अधिक समय से आपने अपना विश्वास एवं समर्थन मेरे साथ लगातार बनाए रखा है, तथा उसी के बल पर हमने बिहार की और आप सब लोगों की पूरी निष्ठा से सेवा की है। आपके विश्वास और समर्थन की ही ताकत थी कि बिहार आज विकास और सम्मान का नया आयाम प्रस्तुत कर रहा है। इसके लिए पूर्व में…
— Nitish Kumar (@NitishKumar) March 5, 2026
ಹೊಸ ಸರ್ಕಾರಕ್ಕೆ ಮಾರ್ಗದರ್ಶನ
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಹೊಸ ಸರ್ಕಾರ ರಚನೆಯಾದರೂ ಅದರ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ನೀಡುವುದಾಗಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಬಿಹಾರದ ಅಭಿವೃದ್ಧಿಯೇ ತಮ್ಮ ಮೊದಲ ಆದ್ಯತೆ ಎಂದು ಅವರು ಹೇಳಿದ್ದಾರೆ.
ಅಪರೂಪದ ರಾಜಕೀಯ ಮೈಲಿಗಲ್ಲು
ಒಂದು ವೇಳೆ ಅವರು ರಾಜ್ಯಸಭೆಗೆ ಆಯ್ಕೆಯಾದರೆ, ಅವರ ದೀರ್ಘ ರಾಜಕೀಯ ಜೀವನದಲ್ಲಿ ಮತ್ತೊಂದು ಅಪರೂಪದ ಸಾಧನೆ ಆಗಲಿದೆ. ಈಗಾಗಲೇ ಅವರು ಬಿಹಾರ ವಿಧಾನಸಭೆ, ವಿಧಾನ ಪರಿಷತ್ತು ಮತ್ತು ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯಸಭೆ ಪ್ರವೇಶಿಸುವ ಮೂಲಕ ಬಿಹಾರ ಶಾಸಕಾಂಗದ ಎರಡೂ ಸದನಗಳು ಹಾಗೂ ಸಂಸತ್ತಿನ ಎರಡೂ ಸದನಗಳ ಸದಸ್ಯರಾಗುವ ಅಪರೂಪದ ನಾಯಕರಲ್ಲಿ ಒಬ್ಬರಾಗುವ ಗೌರವ ಅವರಿಗೆ ದೊರೆಯಲಿದೆ.




