ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯ ಬಾಂಡಿ ಬೀಚ್ನಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಹನುಕ್ಕಾ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದ ಯಹೂದಿ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯಲ್ಲಿ 16 ಮಂದಿ ಅಮಾಯಕರು ಮೃತಪಟ್ಟಿದ್ದಾರೆ. ಮೃತರಲ್ಲಿ 10 ವರ್ಷದ ಮಗು ಮತ್ತು 87 ವರ್ಷದ ವೃದ್ಧರು ಸೇರಿರುವುದು ದೇಶವನ್ನೇ ಕಂಬನಿಗೆ ಗುರಿಮಾಡಿದೆ.
ಈ ಘಟನೆ ಭಾನುವಾರ (ಡಿಸೆಂಬರ್ 15) ಸಂಜೆ ನಡೆದಿದ್ದು, ಕಳೆದ 30 ವರ್ಷಗಳಲ್ಲಿ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಅತ್ಯಂತ ಭೀಕರ ದಾಳಿಗಳಲ್ಲೊಂದು ಎಂದು ನ್ಯೂ ಸೌಥ್ ವೇಲ್ಸ್ ಪೊಲೀಸರು ಹೇಳಿದ್ದಾರೆ. ಎಂಟು ದಿನಗಳ ಕಾಲ ನಡೆಯುವ ‘ಹನುಕ್ಕಾ ಬೈ ದಿ ಸೀ’ ಉತ್ಸವಕ್ಕೆ ಎರಡು ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಎಲ್ಲೆಡೆ ಸಂಭ್ರಮ, ಸಂಗೀತ ಮತ್ತು ಪ್ರಾರ್ಥನೆಯ ವಾತಾವರಣ ಇತ್ತು. ಆದರೆ ಏಕಾಏಕಿ ಕೇಳಿಬಂದ ಗುಂಡಿನ ಸದ್ದು ಭೀತಿಯನ್ನು ಉಂಟು ಮಾಡಿತ್ತು.
ಏನಿದು ಘಟನೆ?
ಕಪ್ಪು ಬಟ್ಟೆ ಧರಿಸಿಕೊಂಡಿದ್ದ ಇಬ್ಬರು ವ್ಯಕ್ತಿಗಳು ಜನಸಂದಣಿಯ ಮಧ್ಯೆ ಗುಂಡಿನ ದಾಳಿ ನಡೆಸಿದ್ದಾರೆ. ಜನರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಾಡಿದರು. ಕೆಲವರು ಸಮುದ್ರದತ್ತ, ಇನ್ನು ಕೆಲವರು ಸಮೀಪದ ಕಟ್ಟಡಗಳು ಹಾಗೂ ವಾಹನಗಳ ಹಿಂದೆ ಆಶ್ರಯ ಪಡೆದರು. ಆದರೆ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲಾಗದ ಅನೇಕರು ಸ್ಥಳದಲ್ಲೇ ಸಾವನ್ನಪ್ಪಿದರು.
ಈ ಹಂತಕರು ಯಾರು
ನ್ಯೂ ಸೌಥ್ ವೇಲ್ಸ್ ಪೊಲೀಸರು ದಾಳಿಯ ಬಳಿಕ ತಕ್ಷಣವೇ ಕಾರ್ಯಾಚರಣೆ ನಡೆಸಿ, ದಾಳಿ ನಡೆಸಿದವರು ತಂದೆ–ಮಗ ಎಂದು ಗುರುತಿಸಿದ್ದಾರೆ. 50 ವರ್ಷದ ಸಾಜಿದ್ ಅಕ್ರಮ್ ಮತ್ತು ಅವನ ಮಗ ನವೀದ್ ಅಕ್ರಮ್ ಈ ಭೀಕರ ಕೃತ್ಯದ ಆರೋಪಿಗಳಾಗಿದ್ದಾರೆ.
ಸಾಜಿದ್ ಅಕ್ರಮ್ ಸ್ಥಳೀಯವಾಗಿ ಹಣ್ಣು ಅಂಗಡಿಯ ಮಾಲೀಕನಾಗಿದ್ದ ಎನ್ನಲಾಗಿದೆ. ಪ್ರತಿದಾಳಿಯಲ್ಲಿ ನಾಗರಿಕರು ಹಾಗೂ ಪೊಲೀಸರ ಗುಂಡೇಟಿಗೆ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಆತನ ಮಗ ನವೀದ್ ಅಕ್ರಮ್ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಬಂಧಿತನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾದರೂ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಇಬ್ಬರನ್ನು ಹೊರತುಪಡಿಸಿ ದಾಳಿಯಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ. ಮೇಲ್ನೋಟಕ್ಕೆ ಇದು ಯಹೂದಿ ವಿರೋಧಿ ದಾಳಿ ಎನ್ನುವುದು ಸ್ಪಷ್ಟವಾಗಿದೆ. ನಿಖರ ಉದ್ದೇಶ ಹಾಗೂ ಪ್ರೇರಣೆಯನ್ನು ಬಂಧಿತನ ವಿಚಾರಣೆಯ ಬಳಿಕವೇ ಖಚಿತಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಮೀನುಗಾರಿಕೆ ನೆಪದಲ್ಲಿ ಸಂಚು
ದಾಳಿ ನಡೆಸುವ ಮೊದಲು, ಆರೋಪಿಗಳು ತಮ್ಮ ಕುಟುಂಬ ಸದಸ್ಯರಿಗೆ ವಾರಾಂತ್ಯದ ಮೀನುಗಾರಿಕೆಗಾಗಿ ಜರ್ವಿಸ್ ಬೇಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿದ್ದರು. ಆದರೆ ನಂತರ ನಡೆದ ಘಟನೆಗಳಿಂದ ಇದು ಪೂರ್ವನಿಯೋಜಿತ ಸಂಚು ಎಂಬುದು ಬೆಳಕಿಗೆ ಬಂದಿದೆ.
ಆರೋಪಿಗಳ ವಾಹನದಿಂದ ಸುಧಾರಿತ ಸ್ಪೋಟಕ ಸಾಧನಗಳು ಪತ್ತೆಯಾಗಿವೆ.. ಇವರು ಈ ಮಟ್ಟದ ಶಸ್ತ್ರಾಸ್ತ್ರಗಳನ್ನು ಹೇಗೆ ಪಡೆದರು? ಇವರಿಗೆ ಯಾರಾದರೂ ಸಹಾಯ ಮಾಡಿದ್ದಾರೆಯೇ? ಬಂದೂಕು ಪರವಾನಗಿ ಹೊಂದಿದ್ದರೇ? ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.
ದೇಶವ್ಯಾಪಿ ಕಟ್ಟೆಚ್ಚರ
ಈ ಘಟನೆಯ ಬೆನ್ನಲ್ಲೇ ಸಿಡ್ನಿ ಮಾತ್ರವಲ್ಲದೆ ಮೆಲ್ಬೋರ್ನ್, ಬ್ರಿಸ್ಬೇನ್ ಸೇರಿದಂತೆ ಆಸ್ಟ್ರೇಲಿಯಾದ ಪ್ರಮುಖ ನಗರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಯಹೂದಿ ಸಮುದಾಯದ ಧಾರ್ಮಿಕ ಕೇಂದ್ರಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಪ್ರವಾಸಿ ಸ್ಥಳಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ.





