ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೈಲ್ ಮರ್ಚಡ್ ಗ್ರಾಮದಲ್ಲಿ ನಡೆದ ಬಯಲಾಟ ಕಾರ್ಯಕ್ರಮವು ಭಯಾನಕ ದುರಂತದಲ್ಲಿ ಕೊನೆಗೊಂಡಿದೆ. ಸಮುದಾಯ ಭವನದ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಬೃಹತ್ ಸಿಮೆಂಟ್ ನಾಮಫಲಕ (ಬೋರ್ಡ್) ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ, ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ತಾಯಿ-ಮಗಳ ಕಾಲುಗಳು ತುಂಡಾಗಿರುವ ಘೋರ ಘಟನೆ ನಡೆದಿದೆ.
ದುರ್ಘಟನೆಯಲ್ಲಿ 8 ವರ್ಷದ ಬಾಲಕ ವಿಶ್ವನಾಥ್ ಮತ್ತು 1.5 ವರ್ಷದ ಹಸುಗೂಸು ಸನ್ವಿತಾ ಸಿಮೆಂಟ್ ಬೋರ್ಡ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಪ್ರಾಣ ಚೆಲ್ಲಿದ್ದಾರೆ. ಗ್ರಾಮಸ್ಥರು ಸಂಭ್ರಮದಿಂದ ಬಯಲಾಟ ವೀಕ್ಷಿಸುತ್ತಿದ್ದಾಗ ಈ ಅಕಸ್ಮಾತ್ ಸಂಭವಿಸಿದ್ದು, ಇಡೀ ಗ್ರಾಮವನ್ನು ದುಃಖದಲ್ಲಿ ಮುಳುಗಿಸಿದೆ.
ಗಂಭೀರ ಗಾಯಗೊಂಡವರಲ್ಲಿ ಬಸಮ್ಮ (28) ಅವರ ಒಂದು ಕಾಲು ಸಂಪೂರ್ಣವಾಗಿ ಕತ್ತರಿಸಲ್ಪಟ್ಟಿದೆ. ಅವರ ಮಗಳು ಲಕ್ಷ್ಮಿ (17) ಅವರ ಎರಡೂ ಕಾಲುಗಳು ತುಂಡಾಗಿವೆ. ಇನ್ನು ವಿಶಾಲಮ್ಮ (20) ಮತ್ತು ಯಲ್ಲಮ್ಮ (4) ಸೇರಿದಂತೆ ನಾಲ್ವರನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ.
ದುರಂತಕ್ಕೆ ಕಾರಣ ಏನು?
ಗ್ರಾಮದ ಸಮುದಾಯ ಭವನದ ಆವರಣದಲ್ಲಿ ಬಯಲಾಟ ನಡೆಯುತ್ತಿತ್ತು. ಕಟ್ಟಡದ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಭಾರಿ ಸಿಮೆಂಟ್ ನಾಮಫಲಕವು ಕಳಪೆ ಕಾಮಗಾರಿ ಅಥವಾ ಸುರಕ್ಷತಾ ಕ್ರಮಗಳ ಕೊರತೆಯಿಂದ ಕುಸಿದು ಕೆಳಗೆ ಕುಳಿತಿದ್ದ ಜನರ ಮೇಲೆ ಬಿದ್ದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಘಟನೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸುರಕ್ಷತಾ ಮಾನದಂಡಗಳನ್ನು ಪಾಲಿಸದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ದುರಂತಕ್ಕೆ ಜವಾಬ್ದಾರರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.





