ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶಾಮನೂರು ಶಿವಶಂಕರಪ್ಪ ಅವರನ್ನು ಹಾಡಿಹೊಗಳಿದ್ದಾರೆ. “ಶಾಮನೂರು ಶಿವಶಂಕರಪ್ಪ ನನಗೆ ಆಪ್ತ ಸ್ನೇಹಿತರು. ಅವರು ನನಗಿಂತ 11 ವರ್ಷ ಹಿರಿಯರಾದರೂ, ನನ್ನೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಸ್ನೇಹದ ಬಗ್ಗೆ ಹೇಳಿಕೊಂಡಿದ್ದಾರೆ.
1972ರಲ್ಲಿ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯ ಮುನ್ಸಿಪಲ್ ಅಧ್ಯಕ್ಷರಾಗಿದ್ದಾಗ ಖರ್ಗೆ ಅವರೊಂದಿಗೆ ಮೊದಲ ಬಾರಿಗೆ ಭೇಟಿಯಾಗಿದ್ದರು. “ಅವತ್ತಿನ ಕಾಲದಲ್ಲೇ ಶಾಮನೂರು ದಾವಣಗೆರೆಯಲ್ಲಿ ಫೇಮಸ್ ಆಗಿದ್ದರು. ಕಮ್ಯುನಿಸ್ಟ್ ಪಕ್ಷದ ಪ್ರಭಾವವಿತ್ತ ದಾವಣಗೆರೆಯನ್ನು ಕಾಂಗ್ರೆಸ್ಗೆ ಕೊಟ್ಟವರು ಶಾಮನೂರು. ದಾವಣಗೆರೆಯನ್ನು ಬದಲಾಯಿಸಿ, ಅಭಿವೃದ್ಧಿಯ ಹಾದಿಗೆ ತಂದವರು ಅವರೇ,” ಎಂದು ಖರ್ಗೆ ಶಾಮನೂರು ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.
ಶಿಕ್ಷಣ, ವ್ಯಾಪಾರ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಶಾಮನೂರು ಶಿವಶಂಕರಪ್ಪ ತಮ್ಮ ಹೆಜ್ಜೆಗುರುತು ಇಟ್ಟಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ. “ಈಗಿನ ಕಾಲದಲ್ಲಿ ತಮ್ಮವರಿಗೆ ಸಹಾಯ ಮಾಡದಿದ್ದರೆ, ಬೇರೆಯವರ ಕಾಲೆಳೆಯುವವರೇ ಜಾಸ್ತಿ. ಆದರೆ, ನಮ್ಮ ಕಾಲದಲ್ಲಿ ಇಂತಹ ಮನಸ್ಥಿತಿ ಇರಲಿಲ್ಲ,” ಎಂದು ಅವರು ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ದೆಹಲಿಯಲ್ಲಿ ಭೇಟಿಯಾದ ಕೆಲವರು “ಶಿವಶಂಕರಪ್ಪಾಜೀ ಅಭೀ ಹೈ ಕ್ಯಾ?” ಎಂದು ಕೇಳಿದಾಗ, “ಅಯ್ಯೋ, ಅವರು ಇನ್ನೂ ನೂರು ವರ್ಷಕ್ಕೂ ಹೆಚ್ಚು ಬದುಕುತ್ತಾರೆ!” ಎಂದು ಖರ್ಗೆ ಹಾಸ್ಯದಿಂದ ಉತ್ತರಿಸುತ್ತಾರಂತೆ.
ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಲಿಂಗಾಯತ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. “ಒಳ್ಳೆಯ ಕೆಲಸ ಮಾಡಿದವರಿಗೆ ಮಾತ್ರ ಇಂತಹ ಸ್ಥಾನಗಳು ಸಿಗುತ್ತವೆ,” ಎಂದು ಖರ್ಗೆ ಶಾಮನೂರು ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.





