ಕೊಪ್ಪಳ: ಮದುವೆಯ ದಿನವೇ ವಧುವಿನ ಪೋಷಾಕಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಪರೀಕ್ಷೆ ಬರೆದು ಗಮನ ಸೆಳೆದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ಸಂಕಲ್ಪ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಉಮಾದೇವಿಯ ಈ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿನ್ನೆ (ಜೂನ್ 10) ದಿನ ಉಮಾದೇವಿ ಎಂಬ ವಿದ್ಯಾರ್ಥಿನಿ ಗಂಗಾವತಿಯ ಕಂಪ್ಲಿ ರಸ್ತೆಯ ಉದ್ಭವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಗೂಡೂರು ಗ್ರಾಮದ ಹುಲ್ಲೇಶ ಎಂಬ ಯುವಕನೊಂದಿಗೆ ಮದುವೆಯಾದರು. ಬೆಳಗ್ಗೆ ಮಾಂಗಲ್ಯ ಧಾರಣೆಯ ನಂತರ, ಮಧ್ಯಾಹ್ನದ ಆರತಕ್ಷತೆ ಕಾರ್ಯಕ್ರಮದ ಮಧ್ಯೆಯೇ ಅವರಿಗೆ ವಿಜಯಪುರದ ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ದ್ವಿತೀಯ ಸೆಮಿಸ್ಟರ್ನ ಪರಿಸರ ಅಧ್ಯಯನ ಪರೀಕ್ಷೆ ಇತ್ತು.
ಉಮಾದೇವಿ, ತಮ್ಮ ಮದುವೆಯ ಸಂಭ್ರಮವನ್ನು ಮೀರಿ, ವಧುವಿನ ದಿರಿಸಿನಲ್ಲಿಯೇ ಆರತಕ್ಷತೆ ವೇದಿಕೆಯಿಂದ ನೇರವಾಗಿ ಸಂಕಲ್ಪ ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದರು. 30 ಅಂಕಗಳ ಒಂದೂವರೆ ಗಂಟೆಯ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದ ನಂತರ, ಅವರು ಮತ್ತೆ ಆರತಕ್ಷತೆ ಕಾರ್ಯಕ್ರಮಕ್ಕೆ ಮರಳಿದರು. ಈ ನಡೆಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಲೇಜಿನ ಪ್ರಾಂಶುಪಾಲರ ಹೇಳಿದ್ದೇನು?
ಸಂಕಲ್ಪ ಮಹಿಳಾ ಕಾಲೇಜಿನ ಪ್ರಾಂಶುಪಾಲ ಬಸಪ್ಪ ಸಿರಿಗೇರಿ ಮಾತನಾಡಿ, “ಉಮಾದೇವಿಯ ವಿವಾಹ ಬೆಳಗ್ಗೆ ನಡೆಯಿತು, ಆದರೆ ಮಧ್ಯಾಹ್ನ ಪರೀಕ್ಷೆ ಇತ್ತು. ಒಂದು ವರ್ಷ ವ್ಯರ್ಥ ಮಾಡಿಕೊಳ್ಳದಿರಲು ಎಂದು ಅವರು ನನ್ನೊಂದಿಗೆ ಚರ್ಚಿಸಿ, ವಧುವಿನ ದಿರಿಸಿನಲ್ಲಿಯೇ ಪರೀಕ್ಷೆ ಬರೆಯಲು ಆಗಮಿಸಿದರು. ಇದು ಎಲ್ಲರಿಗೂ ಸ್ಫೂರ್ತಿಯಾಗಿದೆ” ಎಂದು ತಿಳಿಸಿದರು.
ಇದೇ ರೀತಿಯ ಇನ್ನೊಂದು ಘಟನೆ
ಇದಕ್ಕೂ ಮುಂಚೆ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಆರ್. ಸಂಗೀತಾ ಎಂಬ ವಿದ್ಯಾರ್ಥಿನಿ ಕೂಡ ತಾಳಿ ಕಟ್ಟಿದ ಕೂಡಲೇ ವಾಸವಿ ಕಾಲೇಜಿನಲ್ಲಿ ಬಿ.ಕಾಂ. ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಗಮನ ಸೆಳೆದಿದ್ದರು. ಈ ಎರಡೂ ಘಟನೆಗಳು ವಿದ್ಯಾರ್ಥಿನಿಯರ ಶೈಕ್ಷಣಿಕ ಸಂಕಲ್ಪಕ್ಕೆ ಸಾಕ್ಷಿಯಾಗಿವೆ.