ಸಿಲಿಕಾನ್ ಸಿಟಿಯಲ್ಲಿ ಇಂದು ಮಳೆರಾಯ ಅಕ್ಷರಶಃ ಅಬ್ಬರಿಸಿದ್ದಾನೆ. ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ರಾಜಧಾನಿ ಬೆಂಗಳೂರು ಸ್ತಬ್ಧಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಧ್ಯಾಹ್ನದಿಂದ ಆರಂಭವಾದ ಮಳೆಯ ಆರ್ಭಟಕ್ಕೆ ನಗರದ ಪ್ರಮುಖ ರಸ್ತೆಗಳು ನದಿಯಂತಾಗಿದ್ದು, ವಾಹನಗಳು ನೀರಿನಲ್ಲಿ ತೇಲುತ್ತಿರುವ ದೃಶ್ಯಗಳು ಕಂಡುಬಂದಿವೆ.
ಎಲ್ಲೆಲ್ಲಿ ಮಳೆ ಅವಾಂತರ?
ಶಿವಾನಂದ ಸರ್ಕಲ್: ಇಲ್ಲಿನ ಅಂಡರ್ಪಾಸ್ ಹಾಗೂ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸವಾರರು ತೀವ್ರ ಪರದಾಟ ನಡೆಸಿದರು.
ಮಾಗಡಿ ರಸ್ತೆ: ಬಿರುಗಾಳಿಯ ಹೊಡೆತಕ್ಕೆ ಬೃಹತ್ ಕಟೌಟ್ವೊಂದು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.
ಕಂಠೀರವ ಸ್ಟೇಡಿಯಂ: ಸ್ಟೇಡಿಯಂ ಸುತ್ತಮುತ್ತಲಿನ ರಸ್ತೆಗಳು ಜಲಾವೃತಗೊಂಡಿದ್ದು, ಕ್ರೀಡಾಸಕ್ತರು ಹಾಗೂ ಪಾದಚಾರಿಗಳು ಸಂಕಷ್ಟಕ್ಕೆ ಸಿಲುಕಿದರು.
ಮಲ್ಲೇಶ್ವರ ಮತ್ತು ಹೆಚ್ಎಸ್ಆರ್ ಲೇಔಟ್: ಈ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ರಸ್ತೆಗಳ ಮೇಲೆ ಮಂಜಿನ ಕೆನೆಯಂತೆ ಆಲಿಕಲ್ಲುಗಳು ಹರಡಿಕೊಂಡಿದ್ದವು.
ಗೋಪಾಲನ್ ಮಾಲ್: ಮೈಸೂರು ರಸ್ತೆಯ ಗೋಪಾಲನ್ ಮಾಲ್ ಬಳಿ ಭಾರಿ ಪ್ರಮಾಣದ ನೀರು ನಿಂತು ಸಂಚಾರ ದಟ್ಟಣೆ ಉಂಟಾಯಿತು.
ಸ್ತಬ್ಧಗೊಂಡ ರಸ್ತೆಗಳು :
ಬಿರುಗಾಳಿ ಸಹಿತ ಮಳೆಗೆ ನಗರದ ಹಲವೆಡೆ ಮರಗಳು ಧರೆಗುರುಳಿವೆ. ಇದರಿಂದಾಗಿ ಮಾಗಡಿ ರಸ್ತೆ, ಶಿವಾನಂದ ಸರ್ಕಲ್ ಸಂಪರ್ಕಿಸುವ ರಸ್ತೆಗಳು ಹಾಗೂ ಹೆಚ್ಎಸ್ಆರ್ ಲೇಔಟ್ನ ಕೆಲವು ಆಂತರಿಕ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಅಥವಾ ಡೈವರ್ಟ್ ಮಾಡಲಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಬಿಬಿಎಂಪಿ ಸಹಾಯವಾಣಿಗೆ ದೂರುಗಳ ಮಹಾಪೂರವೇ ಹರಿದುಬರುತ್ತಿದೆ.





