ಬೆಂಗಳೂರು: ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ನಡೆದ ಗಂಡ ಹಾಗೂ ಮಗುವಿನ ಜೋಡಿ ಕೊಲೆ ಪ್ರಕರಣ ಇದೀಗ ಮತ್ತೊಂದು ಭಯಾನಕ ತಿರುವು ಪಡೆದುಕೊಂಡಿದೆ.. ಗಂಡ (Husband) ಮತ್ತು ಮಗ (Son) ಇಬ್ಬರನ್ನೂ ಏಕಕಾಲದಲ್ಲಿ ಕೊಲೆ ಮಾಡಿರುವ ಈ ಘಟನೆಯ ಹಿಂದೆ ಅತ್ಯಂತ ಶಾಕಿಂಗ್ ಸತ್ಯವೊಂದು ಬಯಲಾಗಿದೆ.
ಪ್ರಕರಣದ ತನಿಖೆ ತೀವ್ರಗೊಳಿಸಿರುವ ಪೊಲೀಸರು, ಮೃತ ಅಭಿನಂದನ್ ಅವರ ಪತ್ನಿ ಹರಿಣಿ ವಿಚಾರಣೆ ವೇಳೆ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ತನ್ನ ಪ್ರಿಯಕರ ವಿನಯ್ ಜೊತೆ ಸೇರಿ ಗಂಡ ಮತ್ತು ಮಗನನ್ನು ತಾನೇ ಕೊಲೆ ಮಾಡಿರುವುದಾಗಿ ಅವಳು ಪೊಲೀಸರ ಮುಂದೆ ಅಸಲಿ ಕಹಾನಿಯನ್ನು ತೆರೆದಿಟ್ಟಿದ್ದಾಳೆ.
ಘಟನೆ ಹೇಗೆ ನಡೆಯಿತು?
ಘಟನೆ ನಡೆದ ರಾತ್ರಿ ಸುಮಾರು 11 ಗಂಟೆ ವೇಳೆಗೆ ಹರಿಣಿ ತನ್ನ ಪ್ರಿಯಕರ ವಿನಯ್ ಅನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಅವನು ಬರುವ ಮುನ್ನವೇ ಹರಿಣಿ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದಾಳೆ. ಕ್ಯಾಮೆರಾಗಳು ಕಣ್ಣು ಮುಚ್ಚಿದ ಬಳಿಕ ಇಬ್ಬರೂ ಸೇರಿ ಅಭಿನಂದನ್ ಅವರನ್ನು ಕೊಲೆ ಮಾಡಲು ಮುಂದಾಗಿದ್ದಾರೆ. ಮನೆಯಲ್ಲಿದ್ದ ಸೌಟ್ (Iron Ladle) ನಿಂದ ಅಭಿನಂದನ್ ತಲೆಗೆ ಭಾರೀ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.
ಮಗುವಿನ ಹತ್ಯೆಗೂ ಮುಂದಾದ ತಾಯಿ
ಈ ಘಟನೆ ವೇಳೆ ಪುತ್ರ ಯದುವೀರ್ (Yadhveer) ತನ್ನ ತಂದೆಯ ಕೊಲೆಯನ್ನು ನೋಡಿದ್ದಾನೆ. ತನಗೆ ಮುಂದೆ ತೊಂದರೆಯಾಗಬಹುದು ಎಂದು ಭಾವಿಸಿದ ಹರಿಣಿ ಮತ್ತು ವಿನಯ್, ಮುಗ್ಧ ಮಗುವನ್ನು ಸಹ ಉಸಿರುಗಟ್ಟಿಸಿ (Strangulation) ಹತ್ಯೆ ಮಾಡಿದ್ದಾರೆ.
ಸಾಕ್ಷ್ಯ ನಾಶಪಡಿಸುವ ಪ್ರಯತ್ನ
ಕೊಲೆ ಮುಗಿಸಿದ ಬಳಿಕ ಸಾಕ್ಷ್ಯಗಳನ್ನು ನಾಶಪಡಿಸುವ ಯತ್ನದಲ್ಲಿ ಹರಿಣಿ ಕೂಡಲೇ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆದಿದ್ದಾಳೆ. ಅಭಿನಂದನ್ ಅವರ ರಕ್ತದ ಕಲೆಗಳು ಬಿದ್ದಿದ್ದ ಬಟ್ಟೆಗಳನ್ನು ಬದಲಾಯಿಸಿ, ಅವುಗಳನ್ನು ರಾತ್ರೋರಾತ್ರಿ ತೊಳೆದು ಹಾಕಿದ್ದಳು. ಅಷ್ಟೇ ಅಲ್ಲ, ಮಗು ಯದುವೀರ್ ನಿದ್ದೆಯಲ್ಲಿದ್ದಾಗ ಮೇಲೆ ಮಲಗಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂಬಂತೆ ಬಿಂಬಿಸಲು ಯತ್ನಿಸಿರುವುದಾಗಿ ಹರಿಣಿ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.
ಪ್ರಿಯಕರ ಪರಾರಿ
ತಮ್ಮ ಪ್ಲಾನ್ ನಂತೆ ಕೊಲೆ ನಡೆಸಿದ ಬಳಿಕ ವಿನಯ್ ಅಲ್ಲಿಂದ ಪರಾರಿಯಾಗಿದ್ದಾನೆ. ಚಿಕ್ಕಬಾಣಾವರ ಪೊಲೀಸರು ಆತನಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಪೊಲೀಸರು ವಿನಯ್ನ ಮೊಬೈಲ್ ಸಿಗ್ನಲ್ ಮತ್ತು ಸಹಚರರ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿದ್ದಾರೆ. ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ತನಿಖೆ
ಮೊದಲಿಗೆ ಇದು ಸಾಮಾನ್ಯ ಕೊಲೆ ಪ್ರಕರಣವೆಂದು ಭಾವಿಸಲಾಗಿತ್ತು. ಆದರೆ ಹರಿಣಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.





