ಕನ್ನಡದ ಅಸ್ಮಿತೆಗಾಗಿ ಇಡೀ ಬದುಕನ್ನೇ ಮೀಸಲಿಟ್ಟವರು ಅಣ್ಣಾವ್ರು. ಹಾಗೆಯೇ ಬದುಕಿದವರು, ಬಾಳಿದವರು, ಸ್ಫೂರ್ತಿ ಕೂಡ ಆದವರು ನಟಸಾರ್ವಭೌಮ ಡಾ ರಾಜ್ಕುಮಾರ್. ಆದ್ರೀಗ ಕರುನಾಡ ಚಕ್ರವರ್ತಿ ಡಾ ಶಿವರಾಜ್ಕುಮಾರ್ ನಾನು ಚೆನ್ನೈ ಹುಡ್ಗ ಅಂದಿರೋ ಮಾತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ. ಅದಕ್ಕೆ ನೆಟ್ಟಿಗರು ಕೂಡ ಶಿವಣ್ಣನಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಳ್ತಿದ್ದಾರೆ.
- ಚೆನ್ನೈ ಹುಡ್ಗ ಎಂದ ಶಿವಣ್ಣ.. ನೆಟ್ಟಿಗರಿಂದ ಫುಲ್ ಕ್ಲಾಸ್
- ತನಗೆ ಚೆನ್ನೈ ವಿದ್ಯೆ, ಅನ್ನ, ಸೂರು ನೀಡಿದೆ ಅಂತ ಹೇಳಿಕೆ
- ಅಣ್ಣಾವ್ರ ಆದರ್ಶ ಗಾಳಿಗೆ ತೂರಿದ ಕರುನಾಡ ಚಕ್ರವರ್ತಿ
- ಅವಕಾಶಕ್ಕಾಗಿ ಬಕೆಟ್ ಹಿಡಿಬೇಕಿತ್ತಾ ಎಂದ ಕನ್ನಡಿಗರು
ಸಾವನ್ನೇ ಗೆದ್ದು ಬಂದು, ಮಿಸ್ಟರ್ ಮೃತ್ಯುಂಜಯ ಅನಿಸಿಕೊಂಡ ನಟ ಶಿವರಾಜ್ಕುಮಾರ್, 63ರ ಹರೆಯದಲ್ಲೂ ವರ್ಷವಿಡೀ ಸಿನಿಮಾಗಳನ್ನ ಮಾಡುವ ಏಕೈಕ ಸ್ಟಾರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾದರು. ಆದ್ರೆ ಅದ್ಯಾಕೋ ಆಗಾಗ ಈ ಕರುನಾಡ ಚಕ್ರವರ್ತಿ ನೀಡೋ ಉಲ್ಟಾ ಪಲ್ಟಾ ಹೇಳಿಕೆಗಳು ಕನ್ನಡಿಗರ ಪಿತ್ತ ನೆತ್ತಿಗೇರುವಂತೆ ಮಾಡುತ್ತವೆ. ಅರೇ.. ಕಮಲ್ ಹಾಸನ್ ಥಗ್ ಲೈಫ್ ಇವೆಂಟ್ನಲ್ಲಾದ ಆ ಎಡವಟ್ ಬಳಿಕ ಮತ್ತೇನಾಯ್ತಪ್ಪಾ ಅಂತ ನೀವು ಅಚ್ಚರಿ ಪಡಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಯೆಸ್.. ಇದು ಶಿವಣ್ಣ ಆಡಿರೋ ಮಾತುಗಳೇ. ಅದನ್ನ ನೀವೇ ಕೇಳಿಸಿಕೊಂಡ್ರಿ. ‘37 ವರ್ಷಗಳಿಂದ ನಾನು ಚಿತ್ರರಂಗದಲ್ಲಿದ್ದೀನಿ ಅನ್ನೋದು ನಂಗೇ ಗೊತ್ತಿಲ್ಲ. ಆದ್ರೆ 38ನೇ ವರ್ಷ ಜನ ನನ್ನನ್ನ ಈ ಪರಿ ಗುರ್ತಿಸ್ತಾ ಇದ್ದಾರೆ. ನೆಲ್ಸನ್ ಸರ್ಗೆ ತುಂಬಾ ಧನ್ಯವಾದ. ಹಾಗ್ ನೋಡಬೇಕು ಅಂದ್ರೆ ನಾನು ಚೆನ್ನೈ ಹುಡುಗ. ಯಾಕಂದ್ರೆ ನಾನು ಓದಿದ್ದು ಚೆನ್ನೈನಲ್ಲಿ. ಚೆನ್ನೈ ನನಗೆ ವಿದ್ಯೆ ಕೊಟ್ಟಿದೆ. ಅನ್ನ ಕೊಟ್ಟಿದೆ. ಅರೋಕೆ ಸೂರು ಕೊಟ್ಟಿದೆ. ಈಗ ಇನ್ನೊಂದು ಇನ್ನಿಂಗ್ಸ್ ಶುರುವಾಗಿದೆ. ತಮಿಳಲ್ಲಿ ಇನ್ನೂ ಸಾಕಷ್ಟು ಸಿನಿಮಾಗಳನ್ನ ಮಾಡ್ತೀನಿ ಅನ್ನೋ ಭರವಸೆ ಇದೆ.
ಹೌದು.. ಶಿವಣ್ಣ ಹೀಗಂತ ಸೈಮಾ ವೇದಿಕೆಯಲ್ಲಿ ಆಡಿರೋ ಮಾತುಗಳು ಸಖತ್ ವೈರಲ್ ಆಗ್ತಿವೆ. ರಜನಿಕಾಂತ್ ಜೊತೆ ಜೈಲರ್ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದ ಶಿವಣ್ಣ, ಅವಾರ್ಡ್ ಪಡೆದ ಬಳಿಕ ಖುಷಿಯಲ್ಲಿ ಆಡಿರೋ ಮಾತುಗಳಿವು. ಇನ್ ಫ್ಯಾಕ್ಟ್ ಶಿವಣ್ಣ ಆಡಿದ ಪ್ರತಿ ಮಾತೂ ಸತ್ಯ. ಆದ್ರೆ 37 ವರ್ಷಗಳಿಂದ ಅವ್ರನ್ನ ತಲೆ ಮೇಲೆ ಹೊತ್ತು ಹೀರೋ, ಸ್ಟಾರ್, ಸೂಪರ್ ಸ್ಟಾರ್ ಮಾಡಿದ್ದು ನಮ್ಮ ಕನ್ನಡಿಗರೇ ಅನ್ನೋದು ಮರೆಯೋ ಹಾಗಿಲ್ಲ.
ಡಾ. ರಾಜ್ಕುಮಾರ್ ಅವರು ಶಿವಣ್ಣಗಿಂತ ಹೆಚ್ಚುಕಾಲ ಚೆನ್ನೈನಲ್ಲಿ ನೆಲೆಸಿದ್ರು. ಆದ್ರೆ ಅವರ ಇಡೀ ಬದುಕನ್ನ ಕನ್ನಡಕ್ಕಾಗಿ, ಕರುನಾಡಿಗಾಗಿ ಅರ್ಪಿಸಿದರು. ಕನ್ನಡ ಸಂಸ್ಕೃತಿಯ ರಾಯಭಾರಿಯಾಗಿ, ಅದು ಸಮೃದ್ಧವಾಗಿ ಬೆಳೆದು, ಬೇರು ಬಿಟ್ಟಿಕೊಳ್ಳಲು ಕಾರಣೀಭೂತರಾದರು ಅಣ್ಣಾವ್ರು. ಅಂಥವ್ರ ಹೊಟ್ಟೆಯಲ್ಲಿ ಹುಟ್ಟಿದ ನೀವು ಅವ್ರ ಆದರ್ಶಗಳನ್ನೆಲ್ಲಾ ಮಕಾಡೆ ಮಲಗಿಸಿಬಿಟ್ರಿ. ನಾ ಸತ್ತರೂ ರಾಜಕಾರಣಕ್ಕೆ ಬರಲ್ಲ ಎಂದ ಅಣ್ಣಾವ್ರ ಮುಂದೆ ಶಿವಣ್ಣ ಸಣ್ಣಾವ್ರು ಆಗಿಬಿಟ್ರು ಅಂತ ನೆಟ್ಟಿಗರು ಹಾಗೂ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಅವಕಾಶಕ್ಕಾಗಿ ಇಷ್ಟೆಲ್ಲಾ ಬಕೆಟ್ ಹಿಡಿಯೋ ಅವಶ್ಯಕತೆ ಏನಿದೆ ಅಂತೆಲ್ಲಾ ಕಮೆಂಟ್ ಮಾಡ್ತಿದ್ದಾರೆ ಕನ್ನಡಿಗರು. 63ರ ಹರೆಯದಲ್ಲಿ ಶಿವಣ್ಣ ಇಷ್ಟು ಆ್ಯಕ್ಟೀವ್ ಆಗಿರೋದು ಕಂಡ್ರೆ ನಿಜಕ್ಕೂ ಖುಷಿ ಆಗುತ್ತೆ. ಆದ್ರೆ ಹೀಗೆ ನೀಡುವ ಹೇಳಿಕೆಗಳು ಕನ್ನಡಿಗರಿಗೆ ನೋವು ತರಿಸುತ್ತದೆ. ಕರುನಾಡ ಚಕ್ರವರ್ತಿ, ದೊಡ್ಮನೆ ದೊರೆ ಅಂತೆಲ್ಲಾ ಪ್ರೀತಿಯಿಂದ ಆರಾಧಿಸೋ ಕನ್ನಡಿಗರು ಹಾಗೂ ಕರುನಾಡು ಶಿವಣ್ಣನ ಮೊದಲ ಆದ್ಯತೆ ಆಗಬೇಕು. ಕಲೆಗೆ ಎಲ್ಲೆ ಇಲ್ಲ ಸರಿ. ಆದ್ರೆ ಮಾತುಗಳನ್ನ ಆಡುವಾಗ ನೋಡಿಕೊಂಡು ಆಡಿದ್ರೆ ಒಳಿತು ಅನ್ನೋದು ಕೆಲವರ ಕಿವಿಮಾತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





