ನಟಿ ಸಮಂತಾ ರುತ್ ಪ್ರಭು ಅವರು ಬುಧವಾರ (ಜೂನ್ 17) ಚೆನ್ನೈನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದ್ದಾರೆ. ಇತ್ತೀಚೆಗಷ್ಟೇ ರಾಜಕೀಯ ಪ್ರವೇಶ ಮಾಡಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಅವರನ್ನು ಭೇಟಿ ಮಾಡಿದ ಕ್ಷಣಗಳ ಫೋಟೋಗಳನ್ನು ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಮಾ ಇಂಟಿ ಬಂಗಾರಂ’ ಚಿತ್ರದ ಪ್ರಚಾರ ಕಾರ್ಯಗಳ ನಡುವೆ ದಳಪತಿ ವಿಜಯ್ ಅವರನ್ನು ಸಮಂತಾ ಭೇಟಿ ಮಾಡಿದ್ದು, ವಿಜಯ್ ಅವರೊಂದಿಗೆ ತೆಗೆಸಿಕೊಂಡಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಹನಟನನ್ನು ನೋಡುವುದು ಅಪಾರ ಸಂತೋಷ ತಂದಿದೆ ಎಂದು ಹೇಳಿರುವ ಸಮಂತಾ, “ನಾನು ಇಂದು ಚೆನ್ನೈಗೆ ಬಂದಾಗ, ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದೇನೆ ಎಂಬ ಖುಷಿ ಬೇರೆ. ವಿಜಯ್ ಸರ್ ಕೇವಲ ಬೆಳ್ಳಿತೆರೆಯ ನಾಯಕನಾಗಿ ಉಳಿಯುವ ವ್ಯಕ್ತಿಯಲ್ಲ ಎಂಬ ಭಾವನೆ ನನಗೆ ಯಾವಾಗಲೂ ಇತ್ತು. ಅವರ ವ್ಯಕ್ತಿತ್ವ, ಅವರಲ್ಲಿರುವ ಶಕ್ತಿ ಮತ್ತು ಜನರು ಅವರ ಮೇಲೆ ತೋರುವ ಪ್ರೀತಿ ನೋಡಿದಾಗ ಅವರು ಇನ್ನೂ ದೊಡ್ಡ ಸಾಧನೆಗಾಗಿ ಬಂದವರು ಎಂಬ ನಂಬಿಕೆ ಇತ್ತು” ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿಕೊಂಡಿದ್ದಾರೆ.
ಮುಂದುವರಿದು ಮಾತನಾಡಿರುವ ಸಮಂತಾ, ಈಗಾಗಲೇ ಸಿನಿಮಾ ಕ್ಷೇತ್ರವನ್ನು ಬಿಟ್ಟು, ಹೊಸ ಸವಾಲುಗಳು ಮತ್ತು ಜವಾಬ್ದಾರಿಗಳಿಂದ ಕೂಡಿರುವ ರಾಜಕೀಯಕ್ಕೆ ಕಾಲಿಡುವುದು ದೊಡ್ಡ ಧೈರ್ಯದ ಕೆಲಸ. ವಿಜಯ್ ಸರ್ ಆ ಧೈರ್ಯವನ್ನು ತೋರಿಸಿದ್ದಾರೆ. ಅವರು ಕೇವಲ ಒಂದು ಹುದ್ದೆಯನ್ನು ಅಲಂಕರಿಸುತ್ತಿರುವುದಕ್ಕಿಂತಲೂ ಹೆಚ್ಚಿನ ಉದ್ದೇಶದೊಂದಿಗೆ ಈ ಕ್ಷೇತ್ರಕ್ಕೆ ಬಂದಿದ್ದಾರೆ. ಭವಿಷ್ಯದಲ್ಲಿ ಅವರು ಇನ್ನಷ್ಟು ಸಾಧನೆ ಮಾಡಿ ಎಲ್ಲರನ್ನೂ ಆಶ್ಚರ್ಯಗೊಳಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಸಮಂತಾ ಶುಭ ಹಾರೈಸಿದ್ದಾರೆ.
ಚಿತ್ರರಂಗದಿಂದ ರಾಜಕೀಯಕ್ಕೆ ಬಂದು ಯಶಸ್ಸು ಸಾಧಿಸಿದ ಎನ್.ಟಿ. ರಾಮರಾವ್, ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರ ಸಾಲಿಗೆ ಈಗ ವಿಜಯ್ ಕೂಡ ಸೇರಿದ್ದಾರೆ. 2024ರ ಫೆಬ್ರವರಿಯಲ್ಲಿ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಸ್ಥಾಪಿಸಿದ್ದ ಅವರು, 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ರಾಜಕೀಯಕ್ಕಾಗಿ ಸಿನಿಮಾಗೆ ವಿದಾಯ ಹೇಳಿರುವ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಕನ್’ ಬಿಡುಗಡೆಯ ನಿರೀಕ್ಷೆಯಲ್ಲಿದೆ. ಸಮಂತಾ ಮತ್ತು ವಿಜಯ್ ಈ ಹಿಂದೆ ‘ಕತ್ತಿ’, ‘ಥೇರಿ’ ಹಾಗೂ ‘ಮೆರ್ಸಲ್’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದೀಗ ಇವರಿಬ್ಬರ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ನಟಿ ಸಮಂತಾ ರುತ್ ಪ್ರಭು ತಮ್ಮ ಹೊಸ ಸಿನಿಮಾ ‘ಎಂಗಳ್ ತಂಗಂ’ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲು ಚೆನ್ನೈಗೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅವರು ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದ್ದಾರೆ.





