ಉದಯಪುರ, ಫೆಬ್ರವರಿ 26: ತೆಲುಗು ಮತ್ತು ಕನ್ನಡ ಚಿತ್ರರಂಗದ ಖ್ಯಾತ ನಟರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ಇಂದು ಉದಯಪುರದ ಐಷಾರಾಮಿ ರೆಸಾರ್ಟ್ನಲ್ಲಿ ವೈಭವದಿಂದ ನೆರವೇರಿದೆ. ಬೆಳಗ್ಗೆ ಶುಭ ಮುಹೂರ್ತದಲ್ಲಿ ತೆಲುಗು ಸಂಪ್ರದಾಯದಂತೆ ಸಪ್ತಪದಿ ತುಳಿದ ಈ ಜೋಡಿ, ಈಗ ಅಧಿಕೃತವಾಗಿ ಗಂಡ-ಹೆಂಡತಿಯಾಗಿದ್ದಾರೆ.
ಕುಟುಂಬದ ಸಂಭ್ರಮಕ್ಕೆ ಸಾಕ್ಷಿಯಾದ ಬೀದಿ ಮಕ್ಕಳು
ಮದುವೆಯ ಸಂಭ್ರಮದಲ್ಲಿ ಇಬ್ಬರ ಕುಟುಂಬಸ್ಥರು ಸಿಹಿ ಹಂಚಿ ಸಂತಸ ಪಟ್ಟಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಅವರ ತಂಡದವರು ರೆಸಾರ್ಟ್ನ ಹೊರಗೆ ಆಟವಾಡುತ್ತಿದ್ದ ಮಕ್ಕಳಿಗೆ ಸಿಹಿತಿಂಡಿಗಳನ್ನು ಹಂಚಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಮದುವೆ ತುಂಬಾ ಅದ್ದೂರಿಯಾಗಿ ನೆರವೇರಿದೆ. ಜೋಡಿ ಮತ್ತು ಅವರ ಕುಟುಂಬ ತುಂಬಾ ಸಂತೋಷವಾಗಿದ್ದಾರೆ” ಎಂದು ತಂಡದವರು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಖಾಸಗಿ ಸಮಾರಂಭದಲ್ಲಿ ಆಪ್ತರ ಮಧ್ಯೆ ಮದುವೆ
ಈ ಮದುವೆಗೆ ಕೇವಲ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಯಾವುದೇ ಸೆಲೆಬ್ರಿಟಿಗಳಿಗೂ ಆಹ್ವಾನ ನೀಡಿರಲಿಲ್ಲ. ಮದುವೆ ನಡೆಯುವ ಸ್ಥಳಕ್ಕೆ ಹೊರಗಿನವರಿಗೆ ಪ್ರವೇಶವಿರಲಿಲ್ಲ. ಅಷ್ಟೇ ಅಲ್ಲ, ಮದುವೆಯ ಫೋಟೋಗಳು ಲೀಕ್ ಆಗಬಾರದೆಂದು ಮೊಬೈಲ್ ಫೋನ್ ಬಳಕೆಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿತ್ತು.
ಎರಡೂ ಸಂಪ್ರದಾಯಗಳಲ್ಲಿ ನಡೆದ ಮದುವೆ ಶಾಸ್ತ್ರ
ಬೆಳಗ್ಗೆ ತೆಲುಗು ಸಂಪ್ರದಾಯದಂತೆ ಮದುವೆ ನಡೆದಿದೆ. ಸಂಜೆ ಸುಮಾರು 4 ಗಂಟೆಗೆ ವಧುವಿನ ಕಡೆಯ ಅಂದರೆ ರಶ್ಮಿಕಾ ಅವರ ಕೊಡವ ಸಂಪ್ರದಾಯದಂತೆ ಸಪ್ತಪದಿ ಶಾಸ್ತ್ರ ಪೂರ್ಣಗೊಳ್ಳಲಿದೆ. ಎರಡೂ ಸಂಪ್ರದಾಯಗಳನ್ನು ಅನುಸರಿಸಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ.
ಮೂರು ದಿನಗಳ ಸಂಭ್ರಮದ ಪೂರ್ವತಯಾರಿ
ಮದುವೆಗೂ ಮನ್ನ ಮೂರು ದಿನಗಳ ಕಾಲ ವಿವಿಧ ಶಾಸ್ತ್ರಗಳು ನಡೆದವು. ಫೆಬ್ರವರಿ 24ರಂದು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ವಧು-ವರರು ಸಖತ್ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ. ರಶ್ಮಿಕಾ ತಮ್ಮ ‘ಪುಷ್ಪ’ ಸಿನಿಮಾದ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಎಲ್ಲರ ಗಮನ ಸೆಳೆದರು. ಫೆಬ್ರವರಿ 25ರಂದು ಹಳದಿ ಮತ್ತು ಮೆಹಂದಿ ಶಾಸ್ತ್ರ ನಡೆದಿದೆ. ಹಳದಿ ಶಾಸ್ತ್ರದಲ್ಲಿ ಬಣ್ಣ ಮತ್ತು ಹೂವುಗಳಿಂದ ಹೋಳಿ ಆಡಿ ಸಂಭ್ರಮಿಸಿದ್ದಾರೆ.
ಮಾರ್ಚ್ 4ರಂದು ಭವ್ಯ ರಿಸೆಪ್ಷನ್
ಮದುವೆಯನ್ನು ಖಾಸಗಿಯಾಗಿ ಮಾಡಿಕೊಂಡಿದ್ದರೂ, ರಶ್ಮಿಕಾ ಮತ್ತು ವಿಜಯ್ ಭವ್ಯವಾದ ರಿಸೆಪ್ಷನ್ಗೆ ಪ್ಲ್ಯಾನ್ ಮಾಡಿದ್ದಾರೆ. ಮಾರ್ಚ್ 4 ರಂದು ನಡೆಯಲಿರುವ ಈ ಆರತಕ್ಷತೆಗೆ ಸಿನಿಮಾ, ರಾಜಕೀಯ ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಆಗಮಿಸಲಿದ್ದಾರೆ. ಈ ಮದುವೆಯ ನಂತರ ಜೋಡಿ ಒಂದು ತಿಂಗಳ ಕಾಲ ಕೆಲಸದಿಂದ ಬ್ರೇಕ್ ತೆಗೆದುಕೊಂಡು ತಮ್ಮ ವೈಯಕ್ತಿಕ ಜೀವನವನ್ನು ಆನಂದಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.





