ಪ್ರಯಾಗ್ರಾಜ್ನ ‘ಮಹಾಕುಂಭ’ದಲ್ಲಿ ಜನತೆಗೆ ಪರಿಚಿತವಾದ ಮೊನಾಲಿಸಾ ಇತ್ತೀಚೆಗಷ್ಟೆ ಭಾರಿ ಟೀಕೆಗಳ ನಡುವೆ ಸಿಕ್ಕಿಹಾಕಿಕೊಂಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೊನಾಲಿಸಾ ಭಾವುಕ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಕೈಮುಗಿದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮೊನಾಲಿಸಾಗೆ “ಮಣಿಪುರ್ ಡೈರಿ” ಎಂಬ ಹೊಸ ಚಿತ್ರಕ್ಕೆ ನಿರ್ದೇಶಕ ಸನೋಜ್ ಮಿಶ್ರಾ ಆಫರ್ ನೀಡಿದ್ದರು. ಆದರೆ ನಿರ್ದೇಶಕನ ಆಪ್ತ ಗೆಳತಿಯೊಬ್ಬರು ನೀಡಿದ ದೂರು ಆಧಾರದ ಮೇಲೆ ಸನೋಜ್ ಮಿಶ್ರಾ ಬಂಧನವಾಗಿತ್ತು. ಪ್ರಕರಣ ಗಂಭೀರ ಸ್ವರೂಪ ಪಡೆದು, ನ್ಯಾಯಾಲಯವೂ ಜಾಮೀನನ್ನು ತಳ್ಳಿ ಹಾಕಿದೆ. ಈ ಬಂಧನದ ನಂತರ ಮೊನಾಲಿಸಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ಕೇಳಿಬಂದಿದ್ದವು. ಕೆಲವರು “ಮೊನಾಲಿಸಾ ಸಿನಿ ಜೀವನ ಮುಕ್ತಾಯವಾಗಿದೆ” ಎಂಬಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಭಾವನಾತ್ಮಕ ವಿಡಿಯೋ ಸಂದೇಶ
ಇದರ ಮಧ್ಯೆ ಮೊನಾಲಿಸಾ ಕೆಲ ದಿನಗಳು ಮೌನವಾಗಿದ್ದು, ಇದೀಗ ವೀಡಿಯೋ ಮೂಲಕ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಅವರು, “ಎಲ್ಲರಿಗೂ ನಮಸ್ಕಾರ. ನಾನು ನಿಮ್ಮೆಲ್ಲರ ಮುಂದೆ ಕೈಜೋಡಿಸಿ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ನನ್ನ ಬಗ್ಗೆ ಸುಳ್ಳು ಸುದ್ದಿ ಹರಡಬೇಡಿ. ಸನೋಜ್ ಮಿಶ್ರಾ ಅವರು ನನ್ನನ್ನು ಮಗಳಂತೆ ನೋಡಿದ್ದಾರೆ. ಅವರು ಯಾವತ್ತು ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಿಲ್ಲ. ನಾನು ಯಾವ ತಪ್ಪನ್ನೂ ಮಾಡಿಲ್ಲ. ನನ್ನ ಮೇಲಿನ ಟೀಕೆಗಳು ನನಗೆ ಬಹಳ ನೋವು ತಂದಿವೆ. ಇಂತಹ ಸುದ್ದಿಗಳು ನನ್ನ ಕುಟುಂಬಕ್ಕೂ ತೊಂದರೆ ಉಂಟುಮಾಡುತ್ತಿದೆ. ದಯವಿಟ್ಟು ಇನ್ನು ಮುಂದೆ ಈ ರೀತಿ ಮಾಡಬೇಡಿ.” ಎಂದು ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದಾರೆ.
ಸನೋಜ್ ಮಿಶ್ರಾ ಬಂಧನದ ಬಳಿಕ, ಮೊನಾಲಿಸಾ ಬದುಕೇ ಅತಂತ್ರ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದವು. “ಮಹಾಕುಂಭ” ಮೂಲಕ ಜನಪ್ರಿಯರಾದ ಈ ನಟಿಗೆ ಚಿತ್ರರಂಗದಲ್ಲಿ ಇನ್ನು ಮುಂದಿನ ಅವಕಾಶಗಳು ಕಡಿಮೆಯಾಗಬಹುದು ಎಂಬ ಚರ್ಚೆಗಳೂ ಕೇಳಿಬಂದಿದ್ದವು. ಆದರೆ ಮೊನಾಲಿಸಾ ಮಾತ್ರ ಈ ಎಲ್ಲಾ ಆರೋಪಗಳಿಗೆ ಸುಳ್ಳು ಸುದ್ದಿ ಹರಡಬೇಡಿ ಎಂದು ಮನವಿ ಮಾಡಿದ್ದಾರೆ.
ಸಿನಿಮಾ ಬಿಡುಗಡೆ ತಡವಾದರೂ, ಮೊನಾಲಿಸಾ ಸದ್ಯ ವೇದಿಕೆ ಕಾರ್ಯಕ್ರಮಗಳಲ್ಲಿ ಬಹಳ ಬ್ಯೂಸಿಯಾಗಿದ್ದಾರೆ. ಮಳಿಗೆ ಉದ್ಘಾಟನೆಗಳಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಜೊತೆಗೆ ಕೆಲ ಟಿವಿ ಧಾರಾವಾಹಿಗಳಲ್ಲಿಯೂ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.





